ನವದೆಹಲಿ: ಆರೋಗ್ಯ ಸೇವೆಯಲ್ಲಿ ಸುಧಾರಣೆ ತರಲು ರಚಿಸಲಾಗಿರುವ ಉನ್ನತ ಮಟ್ಟದ ಸಮಿತಿ ಆರೋಗ್ಯ ಸೇವೆಯನ್ನು ರಾಜ್ಯಪಟ್ಟಿಯಿಂದ ವರ್ಗಾಯಿಸಿ ಸಂವಿಧಾನದಲ್ಲಿ ಏಕಕಾಲಿಕ ಪಟ್ಟಿಯಲ್ಲಿ ಸೇರಿಸುವಂತೆ, ಮುಂದಿನ 5 ವರ್ಷಗಳಲ್ಲಿ 3 ಸಾವಿರದಿಂದ 5 ಸಾವಿರದವರೆಗೆ ಸಣ್ಣ ಖಾಸಗಿ ಆಸ್ಪತ್ರೆಗಳನ್ನು ತೆರೆಯುವಂತೆ ಮತ್ತು ಮುಂದಿನ ವರ್ಷ ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಆರೋಗ್ಯ ಸೇವೆಯನ್ನು ಮೂಲಭೂತ ಹಕ್ಕು ಎಂದು ಘೋಷಿಸುವಂತೆ ಶಿಫಾರಸು ಮಾಡಿದೆ.
ಸಂವಿಧಾನದ ಏಕಕಾಲಿಕ ಪಟ್ಟಿಯಲ್ಲಿ ಆರೋಗ್ಯ ವಲಯವನ್ನು ಸೇರಿಸುವುದರಿಂದ ರಾಜ್ಯ ಸ್ವಾಯತ್ತತೆಯನ್ನು ತೆಗೆದುಹಾಕಿ ದೇಶಾದ್ಯಂತ ಸಾರ್ವಜನಿಕ ಆರೋಗ್ಯ ಸೇವೆಯನ್ನು ಕೇಂದ್ರ ಸರ್ಕಾರದ ಅಧಿಕಾರದ ಸುಪರ್ದಿಗೆ ನೀಡುತ್ತದೆ.
2025ರ ಹೊತ್ತಿಗೆ ಎಂಬಿಬಿಎಸ್ ಮತ್ತು ಸ್ನಾತಕೋತ್ತರ ಸೀಟುಗಳನ್ನು ಸಮಾನಗೊಳಿಸಬೇಕೆಂದು ಸಹ ಸಮಿತಿ ಶಿಫಾರಸು ಮಾಡಿದೆ. ವೈದ್ಯಕೀಯ ಸೇವೆ ಪೂರೈಸುವವರಿಗೆ ಹೋಲಿಸಿದರೆ ಶಿಕ್ಷಕರಿಗೆ ನೀಡುವ ತರಬೇತಿ ಭಿನ್ನವಾಗಿರುತ್ತದೆ. ಉನ್ನತ ಮಟ್ಟದ ಸಮಿತಿಯನ್ನು 15ನೇ ಹಣಕಾಸು ಆಯೋಗದಲ್ಲಿ ರಚಿಸಲಾಗಿದ್ದು ಅದು ಇತ್ತೀಚೆಗೆ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ.
ಈ ಸಮಿತಿಯು ದೆಹಲಿಯ ಏಮ್ಸ್ ಆಸ್ಪತ್ರೆ ನಿರ್ದೇಶಕ ಡಾ ರಣದೀಪ್ ಗುಲೆರಿ ನೇತೃತ್ವದಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯದ ಡಾ ದೇವಿ ಶೆಟ್ಟಿ, ಮಹಾರಾಷ್ಟ್ರ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಉಪ ಕುಲಪತಿ ಡಾ ದಿಲೀಪ್ ಗೋವಿಂದ್ ಮೈಸೆಕರ್, ಮೆದಂತಾ ಅಧ್ಯಕ್ಷ ಡಾ ನರೇಶ್ ಟ್ರೆಹಾನ್, ಕೋಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜಿನ ಡಾ ಭಬತೋಶ್ ಬಿಸ್ವಾಸ್ ಮತ್ತು ಭಾರತೀಯ ಸಾರ್ವಜನಿಕ ಆರೋಗ್ಯ ಕೇಂದ್ರದ ಅಧ್ಯಕ್ಷ ಕೆ ಶ್ರೀನಾಥ್ ರೆಡ್ಡಿಯವರನ್ನು ಹೊಂದಿದೆ.
ನಮ್ಮೊಳಗೆ ಸುದೀರ್ಘ ಚರ್ಚೆ ನಡೆಸಿ ನೀತಿ ಆಯೋಗ, ಆರೋಗ್ಯ ಸಚಿವಾಲಯ ಮತ್ತು ಸಾರ್ವಜನಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ನಾವು ಈ ಶಿಫಾರಸನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದೇವೆ ಎಂದು ಸಮಿತಿ ಸದಸ್ಯರು ಹೇಳಿದ್ದಾರೆ.
ದೇಶದ ಜಿಡಿಪಿಯಲ್ಲಿ ಆರೋಗ್ಯ ವಲಯಕ್ಕೆ ನೀಡಲಾಗುತ್ತಿರುವ ಅನುದಾನದಲ್ಲಿ ಶೇಕಡಾ 2.5ರಷ್ಟು ಹೆಚ್ಚಿಸುವಂತೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯ ವಲಯಕ್ಕೆ ಮಾಡುತ್ತಿರುವ ಖರ್ಚುವೆಚ್ಚಗಳನ್ನು ಹೆಚ್ಚಿಸುವಂತೆ ಕೂಡ ಸಮಿತಿ ಶಿಫಾರಸು ಮಾಡಿದೆ. ಸರ್ಕಾರದ ಒಟ್ಟು ಬಜೆಟ್ ನಲ್ಲಿ ಮೂರನೇ ಎರಡರಷ್ಟು ಭಾಗವನ್ನು ಪ್ರಾಥಮಿಕ ಆರೋಗ್ಯಸೇವೆಗೆ ಬೃಹತ್ ಪ್ರಮಾಣದಲ್ಲಿ ಹೂಡಿಕೆ ಮಾಡಬೇಕೆಂದು ಸಹ ಸಮಿತಿ ಸದಸ್ಯರು ಅವಿರೋಧವಾಗಿ ಒಪ್ಪಿ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
Advertisement