ಅಸ್ಸಾಂ ನಡುಗಿಸಿದ 5 ಬಾಂಬ್ ಸ್ಫೋಟ, ಸಿಎಂ ಖಂಡನೆ
ಗುವಾಹತಿ: ಇಡೀ ದೇಶ 71ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿರುವಂತೆಯೇ ಅತ್ತ ಅಸ್ಸಾಂನಲ್ಲಿ ಶಂಕಿತ ಉಲ್ಫಾ ಉಗ್ರರು ನಡೆಸಿದ ಐದು ಬಾಂಬ್ ಸ್ಫೋಟ ರಾಜ್ಯವನ್ನು ನಡುಗಿಸಿದೆ.
ಹೌದು.. ಗಣರಾಜ್ಯೋತ್ಸವ ಸಮಾರಂಭದ ದಿನ ಅಸ್ಸಾಂನಲ್ಲಿ ಒಟ್ಟು ಐದು ಕಡೆ ಬಾಂಬ್ ಸ್ಫೋಟ ಸಂಭವಿಸಿದ್ದು, ಅದೃಷ್ಟವಶಾತ್ ಈ ಸ್ಫೋಟಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ದಿಬ್ರುಘಡ್ ಜಿಲ್ಲೆಯೊಂದರಲ್ಲೇ ಮೂರು ಕಡೆ ಸ್ಫೋಟ ಸಂಭವಿಸಿದ್ದು, ನಾಲ್ಕನೇ ಸ್ಫೋಟ ಚರಾಯಿದೇವಿಯಲ್ಲಿ ನಡೆದಿದೆ. ತಿನ್ ಸುಕಿಯಾ ಜಿಲ್ಲೆಯಲ್ಲಿ ಐದನೇ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಇನ್ನು ಸ್ಫೋಟಕ್ಕೆ ಸಂಬಂಧಿಸಿದಂತೆ ಸಿಎಂ ಸೊರ್ಬಾನಂದ ಸೋನಾವಾಲ್ ಪ್ರತಿಕ್ರಿಯೆ ನೀಡಿದ್ದು, 'ಪವಿತ್ರ ದಿನದ ಸಂಧರ್ಭದಲ್ಲಿ ಭಯದ ವಾತಾವರಣ ಸೃಷ್ಟಿಸಲು ನಡೆಸಲಾದ ಹೇಡಿತನದ ಕೃತ್ಯ ಇದಾಗಿದೆ' ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಅಸ್ಸಾಂನ ಕೆಲ ಪ್ರದೇಶಗಳಲ್ಲಿ ನಡೆದ ಸ್ಫೋಟದ ಘಟನೆ ಖಂಡನಾರ್ಹವಾಗಿವೆ . ಜನರಿಂದ ತಿರಸ್ಕರಿಸಲ್ಪಟ್ಟ ಬಳಿಕ ಹತಾಶೆಗೊಂಡ ಭಯೋತ್ಪಾದಕ ಸಂಘಟನೆಗಳು ತಮ್ಮ ಕೋಪ ತೀರಿಸಿಕೊಳ್ಳಲು ಪವಿತ್ರ ದಿನದ ಸಂದರ್ಭದಲ್ಲಿ ನಡೆಸಿರುವ ಹೇಡಿತನದ ಕೃತ್ಯ ಇದಾಗಿದೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತಮ್ಮ ಸರ್ಕಾರ ಬದ್ಧವಾಗಿದೆ' ಎಂದು ಹೇಳಿದ್ದಾರೆ.
ಅಸ್ಸಾಂನಲ್ಲಿ ನಿಷೇಧಕ್ಕೆ ಒಳಗಾಗಿರುವ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ(ಸ್ವತಂತ್ರ)(ಉಲ್ಫಾ-1), ಭಾನುವಾರ ಮಹಾ ಮುಷ್ಕರ ನಡೆಸಲು ನಾಗರಿಕರಿಗೆ ಕರೆ ನೀಡಿ, ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳದಂತೆ ಬೆದರಿಕೆಯೋಡ್ಡಿತ್ತು. ಇದರ ಬೆನ್ವಲ್ಲೇ ಇಂದು ಸರಣಿ ಸ್ಫೋಟ ನಡೆಸಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ