ದೇಶವನ್ನು ಲೂಟಿ ಮಾಡಿದವರು ಸಬ್ಸಿಡಿಯನ್ನು ಲಾಭ ಎಂದು ಕರೆಯುತ್ತಾರೆ:ರಾಹುಲ್ ಗಾಂಧಿಗೆ ಪಿಯೂಷ್ ಗೋಯಲ್ ತಿರುಗೇಟು
ನವದೆಹಲಿ:ಶ್ರಮಿಕ ರೈಲಿನ ಮೂಲಕ ಇಲಾಖೆ ಲಾಭ ಮಾಡಿಕೊಳ್ಳುತ್ತಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್ ದೇಶವನ್ನು ಲೂಟಿ ಮಾಡಿದವರು ಸಬ್ಸಿಡಿ ಕೊಡುವುದನ್ನು ಲಾಭ ಎಂದು ಕರೆಯಬಹುದು ಎಂದು ತಿರುಗೇಟು ನೀಡಿದ್ದಾರೆ.
ದೇಶವನ್ನು ಲೂಟಿ ಮಾಡಿದವರು ಲಾಭ ಮಾಡಿಕೊಳ್ಳುವುದನ್ನು ಸಬ್ಸಿಡಿ ಎಂದು ಕರೆಯುತ್ತಾರೆ. ರಾಜ್ಯ ಸರ್ಕಾರಗಳಿಂದ ಪಡೆದುದಕ್ಕಿಂತ ಹೆಚ್ಚು ಹಣವನ್ನು ರೈಲ್ವೆ ಇಲಾಖೆ ಶ್ರಮಿಕ್ ರೈಲು ಸಂಚಾರಕ್ಕೆ ವಿನಿಯೋಗಿಸಿದೆ. ಜನರ ಟಿಕೆಟ್ ಹಣವನ್ನು ನಾವು ಭರಿಸುತ್ತೇವೆ ಎಂದು ಹೇಳಿದ್ದ ಸೋನಿಯಾ ಗಾಂಧಿಯವರ ಭರವಸೆ ಏನಾಯಿತು ಎಂದು ಜನರು ಕೇಳುತ್ತಿದ್ದಾರೆ ಎಂದು ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ಶ್ರಮಿಕ ರೈಲಿನಲ್ಲಿ ಹೋಗಲು ಪ್ರಯಾಣಕ್ಕೆ ಹಣ ಕೊಡಲು ಕಷ್ಟವಿದ್ದ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಟಿಕೆಟ್ ಹಣ ಭರಿಸುವುದಾಗಿ ಸೋನಿಯಾ ಗಾಂಧಿ ಭರವಸೆ ನೀಡಿದ್ದರು.
ನಿನ್ನೆ ಟ್ವೀಟ್ ಮೂಲಕ ಕೇಂದ್ರ ಸರ್ಕಾರವನ್ನು ಆರೋಪಿಸಿದ್ದ ರಾಹುಲ್ ಗಾಂಧಿ, ಜನರು ಕಷ್ಟದಲ್ಲಿರುವಾಗ ಕೊರೋನಾ ವೈರಸ್ ಲಾಕ್ ಡೌನ್ ಸಮಯದಲ್ಲಿ ಶ್ರಮಿಕ ರೈಲಿನಲ್ಲಿ ಕಾರ್ಮಿಕರ ರೈಲು ಪ್ರಯಾಣದಿಂದ ಬಂದ ಹಣದಿಂದ ಲಾಭ ಮಾಡಿಕೊಳ್ಳಲು ಇಲಾಖೆ ನೋಡಿದೆ ಎಂದು ಆರೋಪಿಸಿದ್ದರು.
ಶ್ರಮಿಕ ವಿಶೇಷ ರೈಲು ಚಲಾಯಿಸುವ ಮೂಲಕ ರೈಲ್ವೆ ಇಲಾಖೆ 2 ಸಾವಿರದ 142 ಕೋಟಿ ರೂಪಾಯಿ ವಿನಿಯೋಗಿಸಿದ್ದು 429 ಕೋಟಿ ರೂಪಾಯಿ ಬಂದಿದೆಯಷ್ಟೆ ಎಂದು ಅಂಕಿಅಂಶ ಹೇಳುತ್ತದೆ.ಅಜಯ್ ಬೋಸೆ ಎನ್ನುವವರು ಆರ್ ಟಿಐ ಸಲ್ಲಿಸಿದ್ದ ಅಂಕಿಅಂಶಗಳಿಂದ ಇದು ತಿಳಿದುಬಂದಿದ್ದು ಜೂನ್ 29ರವರೆಗೆ ರೈಲ್ವೆ ಇಲಾಖೆ 4 ಸಾವಿರದ 615 ರೈಲುಗಳನ್ನು ಚಲಾಯಿಸಿ 428 ಕೋಟಿ ರೂಪಾಯಿ ಗಳಿಸಿದೆ ಎಂದು ಹೇಳಿದೆ. ಜುಲೈಯಲ್ಲಿ ರೈಲು ಸಂಚಾರದಿಂದ 1 ಕೋಟಿ ರೂಪಾಯಿ ಬಂದಿದೆ ಎಂದು ಅಧಿಕೃತ ಅಂಕಿಅಂಶ ಹೇಳುತ್ತದೆ.