ನವದೆಹಲಿ: ಈಗ ಯಾವುದೇ ರಾಜ್ಯಗಳಿಂದ ಶ್ರಮಿಕ್ ರೈಲುಗಳಿಗೆ ಹೆಚ್ಚಿನ ಬೇಡಿಕೆ ಇಲ್ಲ. ಆದರೆ, ರಾಜ್ಯಗಳು ಬೇಡಿಕೆ ಸಲ್ಲಿಸಿದರೆ ಹೆಚ್ಚಿನ ರೈಲುಗಳನ್ನು ಒಡಿಸಲಾಗುವುದು ಎಂದು ಭಾರತೀಯ ರೈಲ್ವೆ ತಿಳಿಸಿದೆ.
ಭಾನುವಾರ ಯಾವುದೇ ಶ್ರಮಿಕ್ ರೈಲು ಸಂಚರಿಸಿಲ್ಲ. ಮಂಗಳವಾರವೂ ಯಾವುದೇ ರೈಲು ಸಂಚಾರವನ್ನು ನಿಗದಿಪಡಿಸಿಲ್ಲ ಎಂದು ರೈಲ್ವೆ ವಕ್ತಾರರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದಿಂದ ಒಂದು ರೈಲಿಗೆ ಮಾತ್ರ ಬೇಡಿಕೆ ಇತ್ತು. ಆ ರೈಲು ಇಂದು ಬೆಂಗಳೂರಿನಿಂದ ಮುಜಾಫರ್ ಪುರ್ ನಗರಕ್ಕೆ ತೆರಳಲಿದೆ. ನಾಳೆ ಯಾವುದೇ ರೈಲಿಗೆ ಬೇಡಿಕೆ ಬಂದಿಲ್ಲ. ಒಂದು ವೇಳೆ ರೈಲಿಗಾಗಿ ರಾಜ್ಯಗಳಿಂದ ಬೇಡಿಕೆ ಬಂದರೆ, ರೈಲುಗಳನ್ನು ಓಡಿಸಲಾಗುವುದು ಎಂದು ವಕ್ತಾರರು ಹೇಳಿದ್ದಾರೆ.
ಮೇ 1ರಿಂದ ಈವರೆಗೂ 4, 596 ಶ್ರಮಿಕ್ ರೈಲು ಓಡಾಟ ನಡೆಸಿವೆ.ಜೂನ್ ತಿಂಗಳಿನಿಂದ ಶ್ರಮಿಕ್ ರೈಲುಗಳ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಕುಗ್ಗಿದೆ. ಜೂನ್ 1ರಿಂದ ಕಾರ್ಯಾರಂಭಿಸಿದ 200 ಮೇಲ್/ಎಕ್ಸ್ ಪ್ರೆಸ್ ರೈಲುಗಳಿಂದ ಪ್ರತಿದಿನ 20ರಿಂದ 22 ಕೋಟಿ ಆದಾಯ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಶ್ರಮಿಕ್ ರೈಲುಗಳಿಗೆ ಬೇಡಿಕೆ ಕಡಿಮೆಯಾಗುತ್ತಿರುವಂತೆ ಮುಂಬೈ, ಅಹಮದಾಬಾದ್ ಮತ್ತು ಬೆಂಗಳೂರಿನಂತಹ ದೊಡ್ಡ ನಗರಗಳಿಗೆ ಉದ್ಯೋಗಕ್ಕಾಗಿ ತೆರಳುವ ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಜನರಿಂದ ಬೇಡಿಕೆ ಬರುತ್ತಿದ್ದು, ಆರ್ಥಿಕತೆ ಪುನರ್ ಜೀವನವನ್ನು ಸೂಚಿಸುತ್ತದೆ.ಜೂನ್ 1ರಿಂದ 100 ಜೋಡಿ ಮೇಲ್/ ಎಕ್ಸ್ ಪ್ರೆಸ್ ರೈಲು ಹಾಗೂ 15 ಜೋಡಿ ಹವಾನಿಯಂತ್ರಿತ ರೈಲುಗಳನ್ನು ರಾಜಧಾನಿ ಮಾರ್ಗದಲ್ಲಿ ಓಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Advertisement