ಭಯೋತ್ಪಾದನೆ ಕುರಿತು ಭಾರತ ಯಾವುದೇ ರೀತಿಯ ಸಹಿಷ್ಣುತೆ ಹೊಂದಿಲ್ಲ: ಕೇಂದ್ರ ಗೃಹ ಸಚಿವ ಅಮಿತ್ ಶಾ

ಭಯೋತ್ಪಾದನೆ ಬಗ್ಗೆ ಭಾರತವು ಸಹಿಷ್ಣುತೆ ಹೊಂದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೋಲ್ಕತಾ: ಭಯೋತ್ಪಾದನೆ ಬಗ್ಗೆ ಭಾರತವು ಸಹಿಷ್ಣುತೆ ಹೊಂದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಭಾನುವಾರ ಕೋಲ್ಕತದಲ್ಲಿ ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ (ಎನ್‌ಎಸ್‌ಜಿ) ಹೊಸ ಕಟ್ಟಡ  ಉದ್ಘಾಟಿಸಿ ಮಾತನಾಡಿದ ಅವರು, 'ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪೂರ್ವಭಾವಿ ರಕ್ಷಣಾ ನೀತಿಯನ್ನು ಅಭಿವೃದ್ಧಿಪಡಿಸಲಾಗಿದೆ. ಸರ್ಜಿಕಲ್ ಸ್ಟ್ರೈಕ್ ನಡೆಸಿದ ನಂತರ ಭಾರತವೀಗ ಅಮೆರಿಕಾ ಮತ್ತು ಇಸ್ರೇಲ್‌ನಂತಹ ದೇಶಗಳ ಸಾಲಿಗೆ ಸೇರಿದೆ' ಎಂದು ಹೇಳಿದರು.

ಇದೇ ವೇಳೆ 'ರಾಷ್ಟ್ರವನ್ನು ಇಬ್ಭಾಗ ಮಾಡಿ, ಶಾಂತಿ ಕದಡಲು ಬಯಸಿರುವ ಜನರು ಖಂಡಿತವಾಗಿ ರಾಷ್ಟ್ರೀಯ ಭದ್ರತಾ ಸಿಬ್ಬಂದಿ(ಎನ್​ಎಸ್​ಜಿ)ಗೆ ಭಯಪಡಲೇಬೇಕು. ಜಾಗತಿಕವಾಗಿ ನಾವು ಶಾಂತಿಯನ್ನು ಬಯಸಿದ್ದೇವೆ. ನಮ್ಮ 10,000 ವರ್ಷಗಳ ಇತಿಹಾಸದಲ್ಲಿ ಭಾರತ ಯಾರೊಬ್ಬರ ಮೇಲೂ ಆಕ್ರಮಣ ಮಾಡಿಲ್ಲ. ಶಾಂತಿಯನ್ನು ಕದಡಲು ಯಾರೊಬ್ಬರಿಗೂ ಅವಕಾಶ ಮಾಡಿಕೊಟ್ಟಿಲ್ಲ. ಆದರೆ, ಯಾರು ನಮ್ಮ ಯೋಧರ ಪ್ರಾಣವನ್ನು ತೆಗೆಯುತ್ತಾರೋ ಅವರಿಗೆ ಧೈರ್ಯವಾಗಿಯೇ ಉತ್ತರ ನೀಡುತ್ತೇವೆ ಎಂದರು.

ಕೆಲ ಜನರು ದೇಶದ ವಿಭಜನೆ ಹಾಗೂ ಶಾಂತಿ ಕದಡುವುದನ್ನು ಬಯಸಿದ್ದಾರೆ. ಆದರೆ ಅವರು ರಾಷ್ಟ್ರೀಯ ಭದ್ರತಾ ಸಿಬ್ಬಂದಿಯನ್ನು ನೋಡಿ ಹೆದರಲೇಬೇಕು. ಅದರ ಮೇಲೂ ಅವರು ಮುಂದುವರಿದರೆ, ಅಂಥವರ ವಿರುದ್ಧ ಹೋರಾಡಿ ಸೋಲಿಸಬೇಕಾಗಿರುವುದು ಎನ್​ಎಸ್​ಜಿಯ ಜವಾಬ್ದಾರಿ. ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತಾ ನಿಯಮನವನ್ನು ಪಾಲನೆ ಮಾಡಿಕೊಂಡು ಬರುತ್ತಿದ್ದೇವೆ. ಅಲ್ಲದೆ, ಮೋದಿ ಅಧಿಕಾರವಧಿಯಲ್ಲಿ ಎನ್​ಎಸ್​ಜಿಯ ನಿರೀಕ್ಷೆಗಳನ್ನು ಖಂಡಿತವಾಗಿ ಈಡೇರಿಸುವುದಾಗಿ ಶಾ ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com