ಗಾಯಕಿ ಕನಿಕಾ
ಗಾಯಕಿ ಕನಿಕಾ

ಶೌಚಾಲಯದಲ್ಲಿ ಬಚ್ಚಿಟ್ಟುಕೊಂಡು ತಪಾಸಣೆಗೊಳಗಾಗಿಲ್ಲ ಎಂಬುದು ದಡ್ಡತನ ಮಾತು: ಗಾಯಕಿ ಕನಿಕಾ ಸ್ಪಷ್ಟನೆ

ಅಂತರಾಷ್ಟ್ರೀಯ ವಿಮಾನದಲ್ಲಿ ಬಂದವರ ತಪಾಸಣೆಯಾಗದೇ ಇರಲು ಸಾಧ್ಯವೇ? ತಪಾಸಣೆ ವೇಳೆ ಶೌಚಾಲಯದಲ್ಲಿ ಬಚ್ಚಿಟ್ಟುಕೊಂಡಿದ್ದೆ ಎಂಬುದು ದಡ್ಡತನ ಮಾತು ಎಂದು ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಅವರು ಹೇಳಿದ್ದಾರೆ. 
Published on

ನವದೆಹಲಿ: ಅಂತರಾಷ್ಟ್ರೀಯ ವಿಮಾನದಲ್ಲಿ ಬಂದವರ ತಪಾಸಣೆಯಾಗದೇ ಇರಲು ಸಾಧ್ಯವೇ? ತಪಾಸಣೆ ವೇಳೆ ಶೌಚಾಲಯದಲ್ಲಿ ಬಚ್ಚಿಟ್ಟುಕೊಂಡಿದ್ದೆ ಎಂಬುದು ದಡ್ಡತನ ಮಾತು ಎಂದು ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಅವರು ಹೇಳಿದ್ದಾರೆ. 

ಕೊರೋನಾ ವೈರಸ್ ಕುರಿತು ತಮ್ಮ ವಿರುದ್ಧ ಕೇಳಿ ಬರುತ್ತಿರುವ ನಿರ್ಲಕ್ಷ್ಯ ಆರೋಪದ ಕುರಿತು ಸ್ಪಷ್ಟನೆ ನೀಡಿರುವ ಅವರು, ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ನಾನು ಶೌಚಾಲಯದಲ್ಲಿ ಬಚ್ಚಿಟ್ಟುಕೊಂಡಿದ್ದೆ ಎಂಬುದು ದಡ್ಡತನದ ಮಾತು. ಅಂತರಾಷ್ಟ್ರೀಯ ವಿಮಾನದಲ್ಲಿ ಬಂದ ವಲಸಿಗರ ತಪಾಸಣೆ ಮಾಡದಿರಲು ಸಾಧ್ಯವೇ? ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಾಗ ನನ್ನನ್ನು ಸಂಪೂರ್ಣವಾಗಿ ತಪಾಸಣೆಗೊಳಪಡಿಸಲಾಗಿತ್ತು. ಒಂದು ದಿನ ನಾನು ಮುಂಬೈನಲ್ಲಿಯೇ ಇದ್ದೆ. ಆ ವೇಳೆ ನಗರದಲ್ಲಿ ಯಾವುದೇ ಚಟುವಟಿಕೆಗಳೂ ನಡೆಯುತ್ತಿರಲಿಲ್ಲ. ಇಡೀ ನಗರ ಬಂದ್ ಸ್ಥಿತಿಯಲ್ಲಿತ್ತು. ನನಗೆ ವೈರಸ್'ನ ಯಾವುದೇ ಲಕ್ಷಣಗಳೂ ಇರಲಿಲ್ಲ. 

ಬಳಿಕ ನನ್ನ ಪೋಷಕರು ವಾಪಸ್ ಬರುವಂತೆ ತಿಳಿಸಿದ್ದರು. ಬಳಿಕ ಮಾರ್ಚ್ 11 ರಂತು ನಾನು ಲಖನೌಗೆ ಬೆಳಗಿನ ವಿಮಾನದಲ್ಲಿ ಬಂದಿಳಿದಿದ್ದೆ. ಲಖನೌಗೆ ಬಂದಾಗಲೇ ಅಧಿಕಾರಿಗಳು ನನ್ನನ್ನು ತಪಾಸಣೆಗೊಳಪಡಿಸಬಹುದಿತ್ತು. ಆದರೆ, ಯಾರೂ ನನ್ನನ್ನು ಪರಿಶೀಲಿಸಲಿಲ್ಲ. ಸರ್ಕಾರದಿಂದಲೂ ಯಾವುದೇ ಸಲಹೆ, ಸೂಚನೆಗಳು ಇರಲಿಲ್ಲ. ವಿದೇಶದಿಂದ ಬಂದವರು ಪ್ರತ್ಯೇಕವಾಗಿರಬೇಕೆಂದು ಯಾರೂ ಹೇಳಲಿಲ್ಲ. ಹೀಗಿರುವಾಗ ನಾನೊಬ್ಬಳೇ ಸ್ವಯಂ ಏಕಾಂತ ವಾಸ ಹೇಗೆ ತಾನೆ ಮಾಡಲು ಸಾಧ್ಯ? ಮುಂಬೈನಿಂದ ಬಂದಾಗ ನನಗೆ ವೈರಸ್ ಲಕ್ಷಣಗಳಿರಲಿಲ್ಲ. ನಾಲ್ಕು ದಿನಗಳ ಹಿಂದಷ್ಟೇ ನನಗೆ ಲಕ್ಷಣಗಳು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಹೋಳಿ ಕಾರ್ಯಕ್ರಮ ಕುರಿತು ಸ್ಪಷ್ಟನೆ ನೀಡಿರುವ ಅವರು, ನಾನು ಯಾವುದೇ ಕಾರ್ಯಕ್ರಮವನ್ನೂ ಆಯೋಜಿಸಿರಲಿಲ್ಲ. ಹುಟ್ಟುಹಬ್ಬದ ಕಾರ್ಯಕ್ರಮವೊಂದಕ್ಕೆ ನಾನು ಭೇಟಿ ನೀಡಿದ್ದೆ. ಆ ಕಾರ್ಯಕ್ರಮಕ್ಕೆ ವಸುಂದರಾ ರಾಜೆ ಕೂಡ ಬಂದಿದ್ದರು. ಈ ಬಗ್ಗೆ ನಾನು ಈಗಾಗಲೇ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದೇನೆಂದಿದ್ದಾರೆ. 

ಕಾರ್ಯಕ್ರಮದಲ್ಲಿ ದುಷ್ಯಂತ್ ಸಿಂಗ್ ಸೇರಿ ಸಾಕಷ್ಟು ರಾಜಕೀಯ ನಾಯಕರೂ ಕೂಡ ಇದ್ದರು. ಅದೇನು ಅಂತಹ ದೊಡ್ಡ ಕಾರ್ಯಕ್ರಮವೇನೂ ಆಗಿರಲಿಲ್ಲ. ಆದರೆ, ಆ ರೀತಿ ಮಾಡಲಾಗುತ್ತಿದೆ. ಕಾರ್ಯಕ್ರಮಕ್ಕೆ ನಾನು ಅತಿಥಿಯಾಗಿದ್ದೆನೆಯೇ ವಿನಃ ಆತಿಥ್ಯಕಾರಿಣಿಯಾಗಿರಲಿಲ್ಲ. ಕಾರ್ಯಕ್ರಮದಲ್ಲಿ ಯಾರು ಯಾರು ಇದ್ದರು ಎಂಬ ಮಾಹಿತಿಯನ್ನು ಈಗಾಗಲೇ ನಾನು ಆರೋಗ್ಯಾಧಿಕಾರಿಗಳಿಗೆ ನೀಡಿದ್ದೇನೆಂದು ತಿಳಿಸಿದ್ದಾರೆ. 

ಇಷ್ಟಕ್ಕೂ ಆಗಿದ್ದೇನು?
ಬೇಬಿ ಡಾಲ್ ಹಾಡಿನ ಖ್ಯಾತಿ 41 ವರ್ಷದ ಕನಿಕಾ ಅವರು ಮಾ.9ರಂದು ಲಂಡನ್ ನಿಂದ ಮುಂಬೈಗೆ ಮರಳಿದ್ದರು ಅಲ್ಲಿಂದ 1 ದಿನದ ಬಳಿಕ ತಮ್ಮ ಊರಾದ ಲಖನೌಗೆ ವಾಪಸ್ಸಾಗಿದ್ದರು. 

ಲಖನೌಗೆ ಮರಳಿದ ನಂತರ ಅವರು ಹೋಳಿ ಹಬ್ಬದ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದು, ಅತಿ ಗಣ್ಯರು ಭಾಗಿಯಾಗಿದ್ದ 3 ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗುತ್ತಿದೆ. 

ಈ ನಡುವೆ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಕನಿಕಾ, ನಾನು 10 ದಿನದ ಹಿಂದೆ ಲಂಡನ್ ನಿಂದ ಮುಂಬೈ ಮಾರ್ಗವಾಗಿ ಲಖನೌಗೆ ಬಂದೆ. ನನ್ನನ್ನು ಆಗ ಮುಂಬೈ ವಿಮಾನ ನಲ್ದಾಣದಲ್ಲಿ ಕೊರೋನಾ ಪರೀಕ್ಷಗೆ ಒಳಪಡಿಸಲಾಯಿತು. ಆಗ ನನಗೆ ಕೊರೋನಾದ ಯಾವ ಲಕ್ಷಣವೂ ಕಂಡುಬರಲಿಲ್ಲ. ಅಲ್ಲಿಂದ ನಾನು ಲಖನೌಗೆ ಬಂದೆ. ಆದರೆ, ನಂತರ ನನಗೆ ಕೆಮ್ಮು,ನೆಗಡಿ, ಫ್ಲೂ ರೀತಿಯ ಲಕ್ಷಣ ಕಂಡುಬಂದಾಗ ತಪಾಸಣೆಗೆ ಒಳಗಾದೆ. 4 ದಿನದ ಹಿಂದೆ ಕೊರೋನಾ ದೃಢಪಟ್ಟಿದೆ. ಈಗ ಚಿಕಿತ್ಸೆ ಪಡೆಯುತ್ತಿದ್ದೇನೆಂದು ತಿಳಿಸಿದ್ದಾರೆ. 

ಇದಾದ ನಂತರ ಕನಿಕಾ ಅವರು 200 ಗಣ್ಯರು ಭಾಗಿಯಾಗಿದ್ದರು ಎನ್ನಲಾದ ಲಖನೌನ ಅತಿಗಣ್ಯರ ಔತಣಕೂಟದ ಚಿತ್ರಗಳು ಬಹಿರಂಗಗೊಂಡಿವೆ. ಇದರಲ್ಲಿ ಕನಿಕಾ ಅವರ ಜೊತೆ ವಸುಂಧರಾ, ದುಷ್ಯಂತ್ ಇರುವುದು ಕಂಡುಬಂದಿದೆ. ಔತಣ ಸಮಾರಂಭದಲ್ಲಿ ಉತ್ತರಪ್ರದೇಶ ಸಿಚವ ಜೈಪ್ರತಾಪ್ ಸಿಂಗ್ ಹಾಗೂ ಕಾಂಗ್ರೆಸ್ ಮುಖಂಡ ಜಿತಿನ್ ಪ್ರಸಾದ ಅವರ ಕುಟುಂಬದವರೂ ಪಾಲ್ಗೊಂಡಿದ್ದರು. ಈ ಪಾರ್ಟಿ ನಡೆದಿದ್ದು, ಮಾರ್ಚ್ 15 ರಂದು ಎಂದು ಹೇಳಲಾಗುತ್ತಿದ್ದು, ಕನಿಕಾಗೆ ಕೊರೋನಾ ದೃಢಪಟ್ಟಿದ್ದು ಮಾರ್ಚ್ 16ರಂದು ಎಂದು ಮೂಲಗಳಿಂದ ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com