ನವದೆಹಲಿ: ಮಹಾಮಾರಿ ಕೊರೋನಾ ಜೊತೆಗೆ ದೇಶದಲ್ಲಿ ಇದೀಗ ಬಹು ಚರ್ಚೆಯಾಗುತ್ತಿರುವುದು ನಿಜಾಮುದ್ದೀನ್ ಮಸೀದಿ.
ಹೌದು ದೆಹಲಿಯಲ್ಲಿರುವ ಅಲಾಮಿ ಮರ್ಕಾಜ್ ಬಂಗ್ಲೇವಾಲಿ ಮಸೀದಿಯಲ್ಲಿ ಮಾರ್ಚ್ 10ರಂದು ಧಾರ್ಮಿಕ ಸಭೆ ನಡೆದಿತ್ತು. ಅಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂರು ಸೇರಿದ್ದರು. ಇದೇ ವೇಳೆ ರಾಜ್ಯದಿಂದ 54 ಮಂದಿ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಪೈಕಿ ತುಮಕೂರಿನ ಶಿರಾದಲ್ಲಿ ಮೃತಪಟ್ಟಿದ್ದ 60ವರ್ಷದ ವೃದ್ಧ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂಬುದು ಸ್ಪಷ್ಟವಾಗಿದೆ. ಇನ್ನು ತುಮಕೂರು ಹಾಗೂ ತಿಪಟೂರಿನಿಂದ ಒಟ್ಟು 13 ಮಂದಿ ಕಾರ್ಯಕ್ರಮಕ್ಕೆ ತೆರಳಿದ್ದರು.
ಮಾರ್ಚ್ 1ರಿಂದ 15ರವರೆಗೂ ನಡೆದ ತಬ್ಲಿಗಿ ಜಮಾಅತ್ ಧಾರ್ಮಿಕ ಕಾರ್ಯಕ್ರಮಕ್ಕೆ ಆಸ್ಟ್ರೇಲಿಯಾ, ಸಿಂಗಪೂರ್, ದುಬೈ, ಸೌದಿ ಅರೇಬಿಯಾ, ಇಂಡೋನೇಷಿಯಾ ಸೇರಿದಂತೆ ಹಲವು ದೇಶಗಳಿಂದ ಸುಮಾರು 2000ಕ್ಕೂ ಹೆಚ್ಚು ಧರ್ಮ ಪ್ರಚಾರಕರು, ಪ್ರವಾಸಿಗರು ಆಗಮಿಸಿದ್ದರು. ಇದೀಗ ಇಲ್ಲಿಂದಲೆ ದೇಶಾದ್ಯಂತ ಕೊರೋನಾ ಸೋಂಕು ಹರಡಿರುವ ಸಾಧ್ಯತೆ ಹೆಚ್ಚಿದ್ದು ತೀವ್ರ ನಿಗಾ ವಹಿಸಲಾಗಿದೆ.
ಮಾರ್ಚ್ 22 ಜನತಾ ಕರ್ಫ್ಯೂವರೆಗೂ ಆರು ಅಂತಸ್ಥಿನ ಈ ಮಸೀದಿಗೆ ವಿದೇಶಗಳಿಂದ ಹಾಗೂ ಇತರೆ ರಾಜ್ಯಗಳಿಂದ ಜನರು ಬಂದು ಹೋಗಿದ್ದರು. ಆನಂತರ ದೇಶದಲ್ಲಿ 21 ದಿನಗಳ ಲಾಕ್ ಡೌನ್ ಘೋಷಣೆಯಾದ ನಂತರ ಸಾವಿರಕ್ಕೂ ಹೆಚ್ಚು ಮಂದಿ ಕಟ್ಟಡದಲ್ಲೇ ಉಳಿದುಕೊಂಡಿದ್ದರು.
ಇವರನ್ನು ಪೊಲೀಸರು ಸ್ಥಳಾಂತರಿಸುತ್ತಿದ್ದಾರೆ. ಈ ಪೈಕಿ 334 ಜನರನ್ನು ಆಸ್ಪತ್ರೆಗೆ ಹಾಗೂ 700 ಮಂದಿಯನ್ನು ಕ್ವಾರಂಟೈನ್ ಕೇಂದ್ರಗಳಿಗೆ ಬಸ್ ಗಳ ಮೂಲಕ ಸ್ಥಳಾಂತರಿಸಲಾಗುತ್ತಿದೆ.
Advertisement