ಬಿಹಾರ ಚುನಾವಣೆ: ತೇಜಸ್ವಿ ಯಾದವ್ ಸಿಎಂ ಕನಸು ಮಣ್ಣು ಮಾಡಿದ ಕಾಂಗ್ರೆಸ್ ಫ್ಲಾಪ್ ಷೋ!
ಪಾಟ್ನಾ: ಮಹಾಘಟ್ ಬಂಧನ್ ಎಂಬ ಮಹಾ ಮೈತ್ರಿ ಮೂಲಕ ಈ ಬಾರಿಯ ಬಿಹಾರ ಚುನಾವಣೆಯಲ್ಲಿ ಶತಾಯಗತಾಯ ಸಿಎಂ ಗಾದಿಗೇರಬೇಕು ಎಂಬ ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರ ಕನಸನ್ನು ಕಾಂಗ್ರೆಸ್ ಪಕ್ಷದ ಫ್ಲಾಪ್ ಷೋ ಮಣ್ಣು ಮಾಡಿದೆ.
ಹೌದು.. ಬಿಹಾರದ ಮಹಾ ಘಟ್ ಬಂಧನದ ಪ್ರಮುಖ ಪಕ್ಷಗಳಲ್ಲಿ ಒಂದಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆ ಕಬ್ಬಿಣದ ಕಡಲೆಯಾಗಿ ಮಾರ್ಪಟ್ಟಿತ್ತು. ಒಂದೆಡೆ ಆಡಳಿತಾ ರೂಢ ಎನ್ ಡಿಎ ಮೈತ್ರಿಕೂಟ ಮತ್ತೊಂದೆಡೆ ಎಲ್ ಜೆಪಿಯ ಚಿರಾಗ್ ಪಾಸ್ವಾನ್ ರ ಭರ್ಜರಿ ಪ್ರಚಾರದ ನಡುವೆ ಕಾಂಗ್ರೆಸ್ ಪಕ್ಷ ಅಕ್ಷರಶಃ ಮಂಕಾಗಿತ್ತು. ಮಹಾಘಟಬಂಧನ್ ನೇತೃತ್ವ ವಹಿಸಿಕೊಂಡ ಆರ್ಜೆಡಿಗೆ ಕಾಂಗ್ರೆಸ್ ಮುಳುವಾಗಿರುವುದು ಸ್ಪಷ್ಟವಾಗಿದೆ. 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಕೇವಲ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ಅಂದರೆ 2015ರ ಚುನಾವಣೆಯಲ್ಲಿ ಕಾಂಗ್ರೆಸ್ 27 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಈ ಬಾರಿ ಕಳೆದ ಬಾರಿಗಿಂತ 7 ಕ್ಷೇತ್ರಗಳನ್ನು ಕಳೆದುಕೊಂಡಿದೆ.
ಮೈತ್ರಿಕೂಟದ ಭಾಗವಾಗಿರುವ ಎಡಪಕ್ಷಗಳ ಪ್ರದರ್ಶನ ಕೂಡ ಹೇಳಿಕೊಳ್ಳುವಂತೆ ಇಲ್ಲ. 29 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಡ ಪಕ್ಷಗಳು 18 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಪಡೆದಿವೆ. ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದ ಕೆಲ ಕ್ಷೇತ್ರಗಳಲ್ಲಿ ಮೇಲ್ಜಾತಿಗಳ ಪ್ರಭಾವ ಹೆಚ್ಚಿದ್ದವು. ಹೀಗಾಗಿ ಇಲ್ಲಿ ಜೆಡಿಯು ವಿರುದ್ಧ ಗೆಲುವು ಸಾಧಿಸಲು ಮೈತ್ರಿಕೂಟಕ್ಕೆ ಸುಲಭದ ಅವಕಾಶವಿತ್ತು. ಈ ಸುವರ್ಣಾವಕಾಶವನ್ನು ಕಾಂಗ್ರೆಸ್ ಕೈ ಚೆಲ್ಲಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ. ಪ್ರಮುಖವಾಗಿ ಅಭ್ಯರ್ಥಿ ಘೋಷಣೆ ತಡ ಮಾಡಿದ್ದು, ಸೂಕ್ತ ಅಭರ್ಥಿಯ ಆಯ್ಕೆಯಲ್ಲಿನ ತೊಡಕುಗಳು ಕಾಂಗ್ರೆಸ್ ಗೆ ಮುಳುವಾಯಿತು ಎನ್ನಲಾಗಿದೆ. ಹಿರಿಯ ಮುಖಂಡರಿಗೆ ಟಿಕೆಟ್ ನಿರಾಕರಿಸಿ ಹೊಸ ಮುಖಗಳಾದ ಶತ್ರುಘ್ನ ಸಿನ್ಹಾ ಪುತ್ರ ಲವ್ ಸಿನ್ಹಾ, ಶರದ್ ಯಾದವ್ ಅವರ ಪುತ್ರಿ ಸುಭಾಷಿಣಿ ಯಾದವ್ ರಂತಹ ಹೊಸ ಮುಖಗಳಿಗೆ ಟಿಕೆಟ್ ನೀಡಿದ್ದು, ಮೈತ್ರಿಕೂಟದ ಆಂತರಿಕೆ ಬೇಗುದಿಗೆ ಕಾರಣವಾಗಿತ್ತು ಎಂದು ರಾಜಕೀಯ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.