ಆರ್ ಜಿವಿಯ 'ದಿಶಾ ಎನ್ಕೌಂಟರ್' ಚಿತ್ರ ಬಿಡುಗಡೆಗೆ ತಡೆ ನೀಡಿ: ತೆಲಂಗಾಣ ಹೈಕೋರ್ಟ್ ನಲ್ಲಿ ಅರ್ಜಿ ದಾಖಲು

ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ 'ದಿಶಾ ಎನ್ಕೌಂಟರ್' ಚಿತ್ರವನ್ನು ಬಿಡುಗಡೆ ಮಾಡಲು ಬಿಡಬಾರದು ಎಂದು ತೆಲಂಗಾಣ ಹೈಕೋರ್ಟ್ ನಲ್ಲಿ ಅರ್ಜಿ ದಾಖಲಿಸಲಾಗಿದೆ.
ದಿಶಾ ಎನ್ಕೌಂಟರ್
ದಿಶಾ ಎನ್ಕೌಂಟರ್
Updated on

ಹೈದರಾಬಾದ್: ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ 'ದಿಶಾ ಎನ್ಕೌಂಟರ್' ಚಿತ್ರವನ್ನು ಬಿಡುಗಡೆ ಮಾಡಲು ಬಿಡಬಾರದು ಎಂದು ತೆಲಂಗಾಣ ಹೈಕೋರ್ಟ್ ನಲ್ಲಿ ಅರ್ಜಿ ದಾಖಲಿಸಲಾಗಿದೆ.

ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಕಳೆದ ಡಿಸೆಂಬರ್ ನಲ್ಲಿ ನಡೆದಿದ್ದ ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಕುರಿತಾದ ಕಥಾ ಹಂದರವನ್ನು ಹೊಂದಿರುವ 'ದಿಶಾ ಎನ್ಕೌಂಟರ್' ಚಿತ್ರವನ್ನು ರಾಮ್ ಗೋಪಾಲ್ ವರ್ಮಾ ನಿರ್ಮಿಸಿದ್ದು, ಈ ಚಿತ್ರ ಬಿಡುಗಡೆಗೆ ತಡೆ ನೀಡಬೇಕು ಎಂದು ಆಗ್ರಹಿಸಿ ದಿಶಾ  ಅವರ ತಂದೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಚಿತ್ರ ತಯಾರಕರು ಆತುರಾತುರವಾಗಿ ಚಿತ್ರವನ್ನು ತಯಾರಿಸಿದ್ದು, ಪ್ರಕರಣದ ಪೂರ್ವಾಪರ ಸಂಪೂರ್ಣವಾಗಿ ಮಾಹಿತಿ ತಿಳಿಯದೇ ಚಿತ್ರ ನಿರ್ಮಾಣ ಮಾಡಿದ್ದಾರೆ. ತಮ್ಮ ಹಣದಾಸೆಗೆ ತಮ್ಮ ಮಗಳ ಕುರಿತ ಚಿತ್ರ ಮಾಡಿ ಕುಟುಂಬದ ಮಾರ್ಯಾದೆಗೆ ಹಾನಿ ಮಾಡಿದ್ದಾರೆ  ಎಂದು ಆರ್ಜಿಯಲ್ಲಿ ಆರೋಪಿಸಲಾಗಿದೆ.

ಇನ್ನು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಚಿತ್ರವನ್ನು ತೆರೆಗೆ ತರುವ ಕುರಿತು ಚಿತ್ರತಂಡ ಸೆನ್ಸಾರ್ ಮಂಡಳಿಗೆ ಹೋಗುವವರೆಗೂ ತಾವು ಈ ಬಗ್ಗೆ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಅಲ್ಲದೆ ಈ ಸಂಬಂಧ ಚಿತ್ರ ನಿರ್ಮಾಪಕರನ್ನು ಸಂಪರ್ಕಿಸುವಂತೆಯೂ ಸಲಹೆ ನೀಡಿದೆ. ಈ ವೇಳೆ  ಪ್ರತಿಕ್ರಿಯೆ ನೀಡಿದ ಅರ್ಜಿದಾರರ ಪರ ವಕೀಲ ಎಂಎಕೆ ಮುಖೀದ್ ಅವರು, ತಾವು ಈ ಸಂಬಂಧ ಸುಪ್ರೀಂ ಕೋರ್ಟ್ ನಲ್ಲೂ ಅರ್ಜಿ ಸಲ್ಲಿಕೆ ಮಾಡಿದ್ದು, ಸ್ಥಳೀಯ ಕೋರ್ಟ್ ನಲ್ಲೂ ಅರ್ಜಿ ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಅರ್ಜಿಯಲ್ಲಿ ಅರ್ಜಿದಾರರು ತೆಲಂಗಾಣ ಸರ್ಕಾರ, ಸೈಬರ್ ಪೊಲೀಸ್ ಆಯುಕ್ತ, ಶಾಡ್  ನಗರ ಪೊಲೀಸ್ ಠಾಣೆಯ ಮುಖ್ಯಸ್ಥರು, ಸೆನ್ಸಾರ್ ಮಂಡಳಿ ಹೆಸರನ್ನು ಉಲ್ಲೇಖಿಸಲಾಗಿದೆ.

ಕಳೆದ ಡಿಸೆಂಬರ್ ನಲ್ಲಿ ಕೆಲಸದ ನಿಮಿತ್ತ ಗಾಡಿಯಲ್ಲಿ ತೆರಳುತ್ತಿದ್ದ ದಿಶಾ ಬೈಕ್ ಪಂಚರ್ ಆದ ಹಿನ್ನಲೆಯಲ್ಲಿ ಪೆಟ್ರೋಲ್ ಬಂಕ್ ಬಳಿ ಬೈಕ್ ಅನ್ನು ನಿಲ್ಲಿಸಿದ್ದರು. ಈ ವೇಳೆ ಅಲ್ಲಿಯೇ ಇದ್ದ ನಾಲ್ಕು ಮಂದಿ ದುಷ್ಕರ್ಮಿಗಳು ಆಕೆಯನ್ನು ಪುಸಲಾಯಿಸಿ ಕರೆದೊಯ್ದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ  ಆತ್ಯಾಚಾರ ಮಾಡಿದ್ದರು. ಬಳಿಕ ಆಕೆಯನ್ನು ಕೊಂದು ಶವವನ್ನು ಶಾಡ್ ನಗರ ಸೇತುವೆ ಕೆಳಗೆ ಸುಟ್ಟುಹಾಕಿದ್ದರು. ಈ ಸುದ್ದಿ ವ್ಯಾಪಕ ವೈರಲ್ ಆಗಿತ್ತು. ಬಳಿಕ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸಿದ್ದರು. ಸ್ಥಳ ಮಹಜರು ಪ್ರಕ್ರಿಯೆಗಾಗಿ ಶವವನ್ನು ಸುಟ್ಟ ಜಾಗಕ್ಕೆ ಕರೆದೊಯ್ಯುತ್ತಿದ್ದಾಗ ಆರೋಪಿಗಳು ಪೊಲೀಸರ  ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಈ ವೇಳೆ ಪೊಲೀಸರು ಎನ್ ಕೌಂಟರ್ ಮಾಡಿ ಎಲ್ಲ ಆರೋಪಿಗಳನ್ನು ಕೊಂದು ಹಾಕಿದ್ದರು.

ಇದೇ ಕಥೆಯನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಚಿತ್ರ ಮಾಡುವುದಾಗಿ ಹೇಳಿ ಅದರ ಟೀಸರ್ ಕೂಡ ಬಿಡುಗಡೆ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com