ಪಾಟ್ನಾ: ಸುಶಾಂತ್ ಸಿಂಗ್ ರಜ್ಪೂತ್ ಪ್ರಕರಣದ ಖ್ಯಾತಿಯ ಬಿಹಾರ ಡಿಜಿಪಿ ಗುಪ್ತೇಶ್ವರ್ ಪಾಂಡೇ ಸ್ವಯಂ ನಿವೃತ್ತಿ ಪಡೆದಿದ್ದಾರೆ.
ಬಿಹಾರ ರಾಜ್ಯಪಾಲರು ಗುಪ್ತೇಶ್ವರ್ ಪಾಂಡೆ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ಅಕ್ಟೋಬರ್-ನವೆಂಬರ್ ವೇಳೆಯಲ್ಲಿ ಬಿಹಾರ ವಿಧಾನಸಭಾ ಚುನಾವಣೆ ಇರುವಾಗ ಗುಪ್ತೇಶ್ವರ್ ಪಾಂಡೇ ಅವರ ಸ್ವಯಂ ನಿವೃತ್ತಿ ಕುತೂಹಲ ಮೂಡಿಸಿದೆ. 2014 ರಲ್ಲಿಯೂ ಸ್ವಯಂ ನಿವೃತ್ತಿಗೆ ಮನವಿ ಮಾಡಿದ್ದ ಪಾಂಡೇ ಬಿಜೆಪಿ ಟಿಕೆಟ್ ನಿಂದ ಚುನಾವಣೆಗೆ ಸ್ಪರ್ಧಿಸುವ ವದಂತಿ ಇತ್ತು. ಆದರೆ ಸ್ವಯಂ ನಿವೃತ್ತಿಗೆ ಮನವಿ ಮಾಡಿದ್ದ 9 ತಿಂಗಳೊಳಗಾಗಿ ರಾಜೀನಾಮೆ ಹಿಂಪಡೆದು ಪುನಃ ಸೇವೆಗೆ ಮರಳಲು ಮನವಿ ಸಲ್ಲಿಸಿದ್ದರು. ಬಿಹಾರ ಸರ್ಕಾರ ಇವರ ಮನವಿಯನ್ನು ಒಪ್ಪಿ ಪುನಃ ಸೇವೆಗೆ ಮರಳಲು ಅವಕಾಶ ನೀಡಿತ್ತು.
1987 ಬ್ಯಾಚ್ ನ ಐಪಿಎಸ್ ಅಧಿಕಾರಿ, ಬಿಹಾರ ಕೇಡರ್ ನ ಅಧಿಕಾರಿಯಾಗಿರುವ ಗುಪ್ತೇಶ್ವರ್ ಪಾಂಡೆ, ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಸುದ್ದಿಯಲ್ಲಿದ್ದರು. ಬಿಹಾರದ ಅಧಿಕಾರಿಯನ್ನು ಕ್ವಾರಂಟೈನ್ ಗೆ ಕಳಿಸಿದ್ದ ಮುಂಬೈ ಪೊಲೀಸರ ಕ್ರಮವನ್ನು ನೇರಾ ನೇರವಾಗಿ ಟೀಕಿಸಿದ್ದಷ್ಟೇ ಅಲ್ಲದೇ ರಿಯಾ ಚಕ್ರವರ್ತಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬಗ್ಗೆ ಮಾತನಾಡುವಷ್ಟು ಉನ್ನತ ಸ್ಥಾನ ಹೊಂದಿಲ್ಲ ಎಂದೂ ಹೇಳಿ ವಿವಾದಕ್ಕೆ ಗುರಿಯಾಗಿದ್ದರು.
Advertisement