ಕೊರೋನಾ ವೈರಸ್: ಭಾರತದ ಹೋರಾಟದ ಚಿತ್ರಣವನ್ನೇ ಬದಲಿಸಿದ ನಿಜಾಮುದ್ದೀನ್ ಮಸೀದಿ ಪ್ರಕರಣ, ಎರಡೇ ದಿನದಲ್ಲಿ 647 ಸೋಂಕು ಪ್ರಕರಣ ಪತ್ತೆ

ಭಾರತದಲ್ಲಿ ಮೊದಲ ವೈರಸ್ ಸೋಂಕು ಪತ್ತೆಯಾದ ದಿನದಿಂದ ಸೋಂಕು ಪ್ರಕರಣಗಳ ಏರಿಕೆ ಕುಂಟುತ್ತಾ ಸಾಗಿತ್ತು. ಆದರೆ ಕೇಂದ್ರ ಸರ್ಕಾರ ಮತ್ತು ದೆಹಲಿ  ಸರ್ಕಾರಗಳು ಮಾಡಿದ ಒಂದೇ ಒಂದು ಎಡವಟ್ಟು ಇದೀಗ ಭಾರತದಲ್ಲಿ ಕೊರೋನಾ ವೈರಸ್ ವಿರುದ್ಧದ ಹೋರಾಟದ ಚಿತ್ರಣವನ್ನೇ ಬದಲಿಸಿದೆ.
ಜಮಾತ್ ಸಭೆಯಲ್ಲಿ ಭಾಗವಹಿಸಿದವರು(ಸಂಗ್ರಹ ಚಿತ್ರ))
ಜಮಾತ್ ಸಭೆಯಲ್ಲಿ ಭಾಗವಹಿಸಿದವರು(ಸಂಗ್ರಹ ಚಿತ್ರ))

ನವದೆಹಲಿ: ವಿಶ್ವದ 190 ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿದ್ದ ಮಾರಕ ಕೊರೋನಾ ವೈರಸ್ ಗೆ ಭಾರತ ಸಡ್ಡು ಹೊಡೆದಿತ್ತು. ಲಾಕ್ ಡೌನ್, ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಯಾನಗಳ ಸಂಚಾರ ನಿಷೇಧ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಸ್ವಚ್ಛತೆ  ಅಳವಡಿಸಿಕೊಳ್ಳುವಿಕೆಯಂತಹ ಹಲವು ಕ್ರಮಗಳಿಂದ ಭಾರತದಲ್ಲಿ ಸೋಂಕು ಪ್ರಕರಣಗಳ ಏರಿಕೆ ನಿಯಂತ್ರಣದಲ್ಲಿತ್ತು. ಭಾರತದಲ್ಲಿ ಮೊದಲ ವೈರಸ್ ಸೋಂಕು ಪತ್ತೆಯಾದ ದಿನದಿಂದ ಸೋಂಕು ಪ್ರಕರಣಗಳ ಏರಿಕೆ ಕುಂಟುತ್ತಾ ಸಾಗಿತ್ತು. ಆದರೆ ಕೇಂದ್ರ ಸರ್ಕಾರ ಮತ್ತು ದೆಹಲಿ  ಸರ್ಕಾರಗಳು ಮಾಡಿದ ಒಂದೇ ಒಂದು ಎಡವಟ್ಟು ಇದೀಗ ಭಾರತದಲ್ಲಿ ಕೊರೋನಾ ವೈರಸ್ ವಿರುದ್ಧದ ಹೋರಾಟದ ಚಿತ್ರಣವನ್ನೇ ಬದಲಿಸಿದೆ.

ಕೇವಲ ಎರಡೇ ಎರಡು ದಿನದಲ್ಲಿ ಭಾರತದಲ್ಲಿ ಮಸೀದಿಯಲ್ಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಬರೊಬ್ಬರಿ 647 ಮಂದಿಗೆ ಮಾರಕ ಕೊರೋನಾ ವೈರಸ್ ಸೋಂಕು ಹಬ್ಬಿದೆ. ಈ 647 ಮಂದಿ ಅಂಡಮಾನ್ ಮತ್ತು ನಿಕೋಬಾರ್, ದೆಹಲಿ, ಅಸ್ಸಾಂ, ಹಿಮಾಚಲ ಪ್ರದೇಶ,  ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಉತ್ತರಾಖಂಡ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶದ 14 ವಿವಿಧ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಅಲ್ಲದೆ ಸಭೆಯಲ್ಲಿ ಪಾಲ್ಗೊಂಡಿದ್ದ ಇನ್ನೂ ನೂರಾರು  ಮಂದಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಸಭೆಯಲ್ಲಿ ಪಾಲ್ಗೊಂಡಿದ್ದವರನ್ನು ಕಂಡು ಹಿಡಿದು ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅಲ್ಲದೆ ಸಭೆಯಲ್ಲಿ ಪಾಲ್ಗೊಂಡಿದ್ದವರನ್ನು ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ ಮಾಡಲಾಗುತ್ತಿದೆ.

ಅಂತೆಯೇ ವೈರಸ್ ಸೋಂಕಿಗೆ ತುತ್ತಾಗಿ ಬಲಿಯಾದವ ಸಂಖ್ಯೆ ದೇಶದಲ್ಲಿ 56ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಗುರುವಾರದಿಂದ 12 ಮಂದಿ ಸಾವಿಗೀಡಾಗಿದ್ದು, ಮೃತರೆಲ್ಲರೂ ಇದೇ ನಿಜಾಮುದ್ದೀನ್ ಮರ್ಕಜ್ ಮಸೀದಿ ಧಾರ್ಮಿಕ ಸಭೆಗೆ ತೆರಳಿದ್ದವರಾಗಿದ್ದಾರೆ ಎನ್ನಲಾಗಿದೆ. ಇನ್ನು ದೇಶದಲ್ಲಿ  ಕೋವಿಡ್19 ವೈರಸ್ ಪರೀಕ್ಷೆಗಾಗಿ 182 ಲ್ಯಾಬ್ ಗಳನ್ನು ಗುರುತಿಸಲಾಗಿದ್ದು, ಈ ಪೈಕಿ 130 ಸರ್ಕಾರಿ ಲ್ಯಾಬೋರೇಟರಿಗಳು ಕೂಡ ಇವೆ. ಇಲ್ಲಿ ಪರೀಕ್ಷೆಗೆ ಬೇಕಾದ ಎಲ್ಲ ರೀತಿಯ ತಾಂತ್ರಿಕ ಸಿದ್ಧತೆ ಮಾಡಲಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್)  ಹೇಳಿದೆ.

 ಗುರುವಾರ ಒಂದೇ ದಿನ ದೇಶಾದ್ಯಂತ 8 ಸಾವಿರಕ್ಕೂ ಅಧಿಕ ರಕ್ತದ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಕೋವಿಡ್ 19 ವೈರಸ್ ಕುರಿತ ಜಾಗೃತಿಗಾಗಿ ಸರ್ಕಾರ ಬಿಡುಗಡೆ ಮಾಡಿರುವ ಆರೋಗ್ಯಸೇತು ಆ್ಯಪ್ ಅನ್ನು 30ಲಕ್ಷಕ್ಕೂ ಅಧಿಕ ಮಂದಿ ಡೌನ್ಲೋಡ್  ಮಾಡಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದ್ದಾರೆ.

ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ವಿದೇಶಿಗರ ವೀಸಾ ರದ್ದು!
ದೆಹಲಿಯ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ವಿದೇಶಿಗರ ವೀಸಾ ರದ್ದು ಮಾಡುವುದಾಗಿ ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಈ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದ್ದು, ದೆಹಲಿಯ ನಿಜಾಮುದ್ದೀನ್  ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ವಿದೇಶಿಗರ ವೀಸಾ ರದ್ದು ಮಾಡುವಂತೆ ಸೂಚಿಸಿದ್ದಾರೆ. ಅಲ್ಲದೆ ಇದೇ ವಿಚಾರವಾಗಿ ದೇಶದ ಎಲ್ಲ ರಾಜ್ಯಗಳ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಲಾಗಿದ್ದು, ಧಾರ್ಮಿಕಸಭೆಯಲ್ಲಿ ಪಾಲ್ಗೊಂಡಿದ್ದ 960 ವಿದೇಶಿಗರು ಲಾಕ್ ಡೌನ್  ನಿಯಮ ಉಲ್ಲಂಘಿಸಿದ ಹಿನ್ನಲೆಯಲ್ಲಿ ಅವರ ವೀಸಾ ರದ್ದು ಮಾಡುವಂತೆ ಸೂಚಿಸಿದ್ದಾರೆ. ಈ ಹಿಂದೆ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ 960 ವಿದೇಶಿಗರ ವೀಸಾವನ್ನು ಕಪ್ಪುಪಟ್ಟಿಗೆ ಸೇರಿಸಿತ್ತು.  ಇದೀಗ ಎಲ್ಲ ವೀಸಾಗಳನ್ನೂ ರದ್ದು ಮಾಡಿ ಆದೇಶ ಹೊರಡಿಸಿದೆ.

9,000 ತಬ್ಲಿಘಿ ಜಮಾತ್ ಸದಸ್ಯರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ
ಇದೇ ವೇಳೆ ದೆಹಲಿ ನಿಜಾಮುದ್ದೀನ್ ಮಸೀದಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಸುಮಾರು 9,000 ಜಮಾತ್ ಸದಸ್ಯರನ್ನು ಮತ್ತು ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವವರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ದೆಹಲಿಯಲ್ಲಿ   2,000ದಷ್ಟು  ತಬ್ಲಿಘಿ ಜಮಾತ್ ಸದಸ್ಯರಿದ್ದು, 1,804 ಜನರನ್ನು ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿದೆ. ಸೋಂಕು ಲಕ್ಷಣವಿರುವ 334 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ತಬ್ಲಿಗಿ ಜಮಾತ್ ಸದಸ್ಯರನ್ನು ಪತ್ತೆ  ಹಚ್ಚುವ ಕಾರ್ಯಕ್ಕಾಗಿ ಆರೋಗ್ಯ  ಸಚಿವಾಲಯ ಕಠಿಣ ಶ್ರಮವಹಿಸಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com