ನವದೆಹಲಿ: ಕೇಂದ್ರ ಸರ್ಕಾರ ಲಾಕ್ ಡೌನ್ ಸಮಯದಲ್ಲಿ ಬಡವರ ಬಗ್ಗೆ ಕೆಟ್ಟ ಮತ್ತು ನಿರ್ಲಕ್ಷ್ಯದ ಮಾರ್ಗವನ್ನು ಅನುಸರಿಸುತ್ತಿದೆ ಎಂದು ಆರೋಪಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು, ಸರ್ಕಾರ ಬಡವರಿಗೆ ತಕ್ಷಣ ನಗದು ಸಹಾಯ ಮಾಡಬೇಕು ಎಂದು ಬುಧವಾರ ಒತ್ತಾಯಿಸಿದ್ದಾರೆ.
ಸರ್ಕಾರದಿಂದ ಒಂದು ರೂಪಾಯಿಯನ್ನು ಸಹ ಪಡೆಯದ ಸಾಕಷ್ಟು ಬಡವರಿದ್ದಾರೆ ಅವರಿಗೂ ಅನ್ಯಾಯವಾಗಬಾರದು. ಶೇ. 23ರಷ್ಟು ನಿರುದ್ಯೋಗಿಗಳು ಮತ್ತು ದಿನಗೂಲಿ ಕಾರ್ಮಿಕರಿಗೆ ಸರ್ಕಾರ ತಕ್ಷಣ ಸಹಾಯ ಮಾಡುಬೇಕು ಎಂದು ಸರಣಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿಯ ಲಾಕ್ ಡೌನ್ ಸಮರ್ಥಿಸಿಕೊಂಡವರಲ್ಲಿ ಚಿದಂಬರಂ ಮೊದಲಿಗರಾಗಿದ್ದು, ಏಪ್ರಿಲ್ 14 ರ ನಂತರ ಲಾಕ್ಡೌನ್ ಅನ್ನು ತೆಗೆದುಹಾಕುವ ಬಗ್ಗೆ ಕೇಂದ್ರ ಸರ್ಕಾರ ರಾಜ್ಯಗಳ ಜೊತೆ ಸಮಾಲೋಚಿಸುತ್ತಿರುವುದನ್ನು ಸ್ವಾಗತಿಸಿದ್ದಾರೆ. ಈ ಸಂಬಂಧ ಕೇಂದ್ರ ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಚಿದಂಬರಂ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಲಾಕ್ಡೌನ್ ಕೊನೆಗಾಣಿಸುವ ಮುನ್ನ, ಹಾಗೂ ಇದರ ಬಗ್ಗೆ ಕೇಂದ್ರ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಲ್ಲ ರಾಜ್ಯಗಳ ಸಲಹೆ, ಅಭಿಪ್ರಾಯ ಕೇಳಬೇಕು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
Advertisement