ನವದೆಹಲಿ: ಮಹಾತ್ಮ ಗಾಂಧೀಜಿಯವರ ಕುರಿತು ನಿಂದನಾತ್ಮಕ ಹೇಳಿಕೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಅಸಮಾಧಾನಗೊಂಡಿದ್ದು, ಇದರ ಪರಿಣಾಮ ಮಂಗಳವಾನ ನಡೆಯಲಿರುವ ಬಿಜೆಪಿ ಸಂಸದೀಯ ಸಭೆಗೆ ಸಂಸದ ಅನಂತ್ ಕುಮಾರ್ ಹೆಗಡೆಗೆ ನಿರ್ಬಂಧ ಹೇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಗಾಂಧೀಜಿ ಕುರಿತಂತೆ ನಿಂದನಾತ್ಮಕ ಹೇಳಿಕೆ ನೀಡಿದೆ ಹಿನ್ನೆಲೆಯಲ್ಲಿ ಈಗಾಗಲೇ ಬಿಜೆಪಿ ಅನಂತ್ ಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಹೇಳಿಕೆ ಸಂಬಂಧ ನಿಮ್ಮ ವಿರುದ್ಧ ಕ್ರಮವೇಕೆ ಕೈಗೊಳ್ಳಬಾರದು ಎಂದು ಪ್ರಶ್ನಿಸಿದೆ.
ಬೆಂಗಳೂರುನಲ್ಲಿ ಶನಿವಾರ ನಡೆದ ವೀರ ಸಾವರಕರ್ ಕುರಿತ ಸಮಾರಂಭವೊಂದರಲ್ಲಿ ಮಾತನಾಡಿದ್ದ ಅನಂತ ಕುಮಾರ್ ಹೆಗಡೆಯವರು, ದೇಶದಲ್ಲಿ ಎರಡು ಥರದ ಸ್ವಾತಂತ್ರ್ಯ ಹೋರಾಟಗಾರರು ಇದ್ದರು. ಇವರಲ್ಲಿ ಒಬ್ಬರು ಶಸ್ತ್ರದಲ್ಲಿ ನಂಬಿಕೆ ಇಟ್ಟರೆ, ಇನ್ನೊಬ್ಬರು ಶಾಸ್ತ್ರದಲ್ಲಿ ನಂಬಿಕೆ ಇಟ್ಟವರು. ಇದರ ಜೊತೆಗೆ ಇನ್ನೂ ಒಂದು ವರ್ಗವಿತ್ತು. ಆ ವರ್ಗವು ಸ್ವಾತಂತ್ರ್ಯ ಹೋರಾಟ ಹೇಗೆ ಮಾಡಬೇಕು? ನೀವು ಹೇಗೆ ಕೇಳುತ್ತೀರೋ ಹಾಗೆ ಮಾಡುತ್ತೇನೆಂದು ಬ್ರಿಟೀಷರನ್ನೇ ಕೇಳುತ್ತಿತ್ತು. ಅಡ್ಜಸ್ಟ್ ಮೆಂಟ್. ಅಂಡರ್ ಸ್ಟ್ಯಾಂಡಿಂಗ್, 20:20. ಆಯ್ತು... ನಾವು ಹೋರಾಟ ಮಾಡಿದಂಗೆ ಮಾಡುತ್ತೇವೆ.
ನೀವು ನಮ್ಮನ್ನು ತಗೊಂಡು ಹೋಗಿ ಒಳಗಡೆ ಇಡಿ. ಚೆನ್ನಾಗಿ ನೋಡಿಕೊಂಡ್ರೆ ಸಾಕು ಎಂದು ಆ ವರ್ಗ ಕೇಳಿತ್ತಿತ್ತು ಎಂದರು. ಇವರು ಒಂದು ಲಾಠಿಯೇಟನ್ನೂ ತಿಂದಿಲ್ಲ. ಅಂಥವರು ಈಗ ಇತಿಹಾಸದ ಪುಟಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಅಬ್ಬಬ್ಬಾ... ಉಪವಾಸ ಸತ್ಯಾಗ್ರಹದಿಂದಲೇ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ಸತ್ಯಾಗ್ರಹಕ್ಕೆ ಬ್ರಿಟೀಷರು ಕಂಗಾಲಾಗಿ, ಪುಕ್ಕಟೆ ನಮಗೆ ಸ್ವಾತಂತ್ರ್ಯ ಕೊಟ್ಟರು ಎಂಬು ನಂಬಿಸಿದರು ಎಂದು ಹೆಗಡೆ ಹೇಳಿದರು. ಇಂಥವರು ಮಹಾಪುರುಷರು ಎನ್ನಿಸಿಕೊಂಡರು. ಆದರೆ, ದೇಶಕ್ಕೆ ಬಲಿದಾನಗೈದವರು ಇತಿಹಾಸದ ಕತ್ತಲಲ್ಲಿ ಹೂತುಹೋದರು ಇದು ದುರಂತ ಎಂದು ತಿಳಿಸಿದ್ದರು.
Advertisement