ನವದೆಹಲಿ: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಮೂರನೇ ಕಂತಿನ ಹಣ ದೇಶದ 5 ಕೋಟಿಗೂ ಅಧಿಕ ರೈತರಿಗೆ ಸಿಗಬೇಕಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಂಕಿಅಂಶ ಹೇಳುತ್ತದೆ.
ವಾರ್ಷಿಕವಾಗಿ ರೈತರ ಖಾತೆಗಳಿಗೆ 6 ಸಾವಿರ ರೂಪಾಯಿ ನೀಡುವ ಯೋಜನೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಾಗಿದ್ದು ಇದು 2018ರ ಡಿಸೆಂಬರ್ 1ರಂದು ಜಾರಿಗೆ ಬಂದಿತ್ತು. ಡಿಸೆಂಬರ್ 2018ರಿಂದ ನವೆಂಬರ್ 2019ರವರೆಗೆ 9 ಕೋಟಿಗೂ ಅಧಿಕ ರೈತರು ಈ .ಯೋಜನೆಯಡಿ ದಾಖಲಿಸಿಕೊಂಡಿದ್ದಾರೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂಪಾಯಿಗಳಂತೆ ಒಟ್ಟು 6 ಸಾವಿರ ರೂಪಾಯಿಗಳನ್ನು ಬಡ ರೈತರ ಖಾತೆಗಳಿಗೆ ನೀಡುವುದಾಗಿದೆ.
ದೇಶದ ಸುಮಾರು 2.51 ಕೋಟಿ ರೈತರಿಗೆ ಎರಡನೇ ಕಂತಿನ ಹಣ ಮತ್ತು 5.16 ಕೋಟಿ ಜನರಿಗೆ ಮೂರನೇ ಕಂತಿನ ಹಣ ಬಂದಿಲ್ಲ. ಒಟ್ಟು 7.62 ಕೋಟಿ ಅಥವಾ ಶೇಕಡಾ 84ರಷ್ಟು ರೈತರಿಗೆ ಮೊದಲ ಕಂತಿನ ಹಣ ಬಂದಿದೆ.
ಎರಡನೇ ಕಂತಿನಲ್ಲಿ ಸುಮಾರು 6.5ಕೋಟಿ ರೈತರಿಗೆ ಮತ್ತು ಮೂರನೇ ಕಂತಿನಲ್ಲಿ 3.85 ಕೋಟಿ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಸಿಕ್ಕಿರುವ ಅಂಕಿಅಂಶದಿಂದ ಬಹಿರಂಗವಾಗಿದೆ.
Advertisement