ನವದೆಹಲಿ: ದೆಹಲಿ ಹಿಂಸಾಚಾರದ ವೇಳೆ ಗುಪ್ತಚರ ಇಲಾಖೆ ಅಧಿಕಾರಿ ಅಂಕಿತ್ ಶರ್ಮಾ ಸಾವಿಗೆ ಸಂಬಂಧಿಸಿದಂತೆ ಆಪ್ ಕೌನ್ಸಿಲರ್ ತಾಹಿರ್ ಹುಸೇನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೆಹಲಿ ಹಿಂಸಾಚಾರದ ನಡುವೆಯೇ ಈಶಾನ್ಯ ದೆಹಲಿಯ ಚಾಂದ್ ಬಾಗ್ ನ ಮೋರಿಯಲ್ಲಿ ಗುಪ್ತಚರ ಇಲಾಖೆ ಅಧಿಕಾರಿ ಅಂಕಿತ್ ಶರ್ಮಾ ಅವರ ಮೃತದೇಹ ಪತ್ತೆಯಾಗಿತ್ತು. ದೇಹದ ಮೇಲೆ ಹಲವು ಬಾರಿ ಚಾಕು ಇರಿತಿದ ಗುರುತುಗಳು ಪತ್ತೆಯಾಗಿತ್ತು. ಇನ್ನು ಹತ್ಯೆಯ ಹಿಂದೆ ಸ್ಛಳೀಯ ಕೌನ್ಸಿಲರ್ ಆಪ್ ಮುಖಂಡ ತಾಹಿರ್ ಹುಸೇನ್ ಕೈವಾಡ ಇದೆ ಎಂದು ಅಂಕಿತ್ ಅವರ ತಂದೆ ರವೀಂದ್ರ ಶರ್ಮಾ ಆರೋಪಿಸಿದ್ದರು. ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ರವೀಂದ್ರ ಶರ್ಮಾ ಅವರು, ಹಿಂಸಾಚಾರ ನಡೆದ ದಿನ ತಾಹಿರ್ ಹುಸೇನ್ ರ ಹುಡುಗರು ನಮ್ಮ ಮನೆ ಸುತ್ತುವರೆದಿದ್ದರು. ಈ ವೇಳೆ ಮಗನನ್ನು ಕೊಂದು ಮೋರಿಗೆ ಎಸೆದಿದ್ದಾರೆ ಎಂದು ಹೇಳಿದರು.
ಅಲ್ಲದೆ ದೆಹಲಿ ಎಎಪಿ ಕಾರ್ಪೊರೇಟರ್ ತಾಹಿರ್ ಹುಸೇನ್ ಒಡೆತನದ ಕಟ್ಟಡದಿಂದಲೇ ಆತನ ಸಹಚರರು ಪೆಟ್ರೋಲ್ ಬಾಂಬ್ಗಳನ್ನು ಎಸೆಯುತ್ತಿದ್ದರು. ಅಲ್ಲದೆ ಕಟ್ಟಡದ ತಾರಸಿಯಿಂದ ಕಲ್ಲು ಮತ್ತು ಪೆಟ್ರೋಲ್ ಬಾಂಬ್ಗಳನ್ನು ಎಸೆಯಲಾಗಿದೆ ಎಂದು ಸ್ಥಳೀಯರೂ ಹೇಳಿದ್ದಾರೆ. ಹಿಂಸಾಚಾರದಲ್ಲಿ ತಾಹಿರ್ ಕೈವಾಡ ಇದೆ ಎಂದು ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರೂ ಆರೋಪಿಸಿದ್ದಾರೆ. ಅಲ್ಲದೆ ತಾಹಿರ್ ಒಡೆತನದ ಕಟ್ಟಡದಲ್ಲಿ ಆ್ಯಸಿಡ್ ಪೊಟ್ಟಣಗಳು ಪತ್ತೆಯಾಗಿದ್ದವು. ಇದೇ ಕಾರಣಕ್ಕೆ ತಾಹಿರ್ ವಿರುದ್ಧ ಐಪಿಸಿ ಸೆಕ್ಷನ್ 302/365/201/34 ರ ಅಡಿಯಲ್ಲಿ ಕೊಲೆ ಮತ್ತು ಗಲಭೆ ಪ್ರಕರಣ ದಾಖಲಿಸಲಾಗಿದೆ.
ಅಂತೆಯೇ ಎಎಪಿಯು ತಾಹಿರ್ ಹುಸೇನ್ನನ್ನು ಪಕ್ಷ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿ ಗುರುವಾರ ರಾತ್ರಿ ಆದೇಶ ಹೊರಡಿಸಿದೆ.
Advertisement