ನವದೆಹಲಿ:ದೆಹಲಿಯ ಪ್ರತಿಷ್ಠಿತ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಭಾನುವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಮಾಸ್ಕ್ ಧರಿಸಿದ್ದ ದುಷ್ಕರ್ಮಿಗಳ ಗುಂಪೊಂದು ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಉಪನ್ಯಾಸಕರ ಮೇಲೆ ಹಲ್ಲೆ ನಡೆಸಿದ್ದು, ಕ್ಯಾಂಪಸ್ ಆಸ್ತಿ ಪಾಸ್ತಿ ಹಾಳು ಮಾಡಿದ್ದಾರೆ.
ಸುಮಾರು 2 ಗಂಟೆಗೂ ಹೆಚ್ಚು ಕಾಲ ನಡೆದ ಹಿಂಸಾಚಾರದಲ್ಲಿ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಷೆ ಘೋಷ್ ಸೇರಿದಂತೆ ಸುಮಾರು 28 ಮಂದಿ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತಿಪಕ್ಷಗಳು, ಬಾಲಿವುಡ್ ನಟ ನಟಿಯರು ಮತ್ತಿತರರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಮುಂಬೈನ ಗೇಟ್ ವೇ ಮುಂಭಾಗ ನೆರೆದಿದ್ದ ಸಹಸ್ರಾರು ವಿದ್ಯಾರ್ಥಿಗಳು ಜೆಎನ್ ಯು ಹಿಂಸಾಚಾರ ಖಂಡಿಸಿ ಮಧ್ಯರಾತ್ರಿಯಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್ , ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಏಕೆ ಮೌನವಹಿಸಿದ್ದಾರೆ ಎಂದು ಪ್ರಶ್ನಿಸಿದ್ದು, ಅವರಿಂದಲೇ ಈ ಗಲಾಟೆ ನಡೆದಿದೆ. ವಿಶ್ವವಿದ್ಯಾಲಯಗಳ ಮೂಲಕ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಗೂಂಡಾಗಳು ಭೀತಿಯನ್ನು ಹರಡುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
ಬಿಜೆಪಿ ಬೆಂಬಲದಿಂದ ಅಮಾಯಕ ವಿದ್ಯಾರ್ಥಿಗಳು ಹಲ್ಲೆಗೊಳಗಾಗಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಆರೋಪಿಸಿದ್ದಾರೆ.
ಇದು ವಿದ್ಯಾರ್ಥಿಗಳು , ಯುವಕರ ಮೇಲಿನ ಮೋದಿ ಸರ್ಕಾರದ ಸೇಡಿನ ಕ್ರಮನಾ? ಎಂದು ಸುರ್ಜಿವಾಲಾ ಪ್ರಶ್ನಿಸಿದ್ದಾರೆ.
ಜೆಎನ್ ಯುನಲ್ಲಿ ನಡೆದಿರುವ ಹಲ್ಲೆ ಭಯದ ಪ್ರತಿಬಿಂಬವಾಗಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ದೂರಿದ್ದಾರೆ.
ಈ ಘಟನೆಯನ್ನು ತೀವ್ರವಾಗಿ ಬಲವಾಗಿ ಖಂಡಿಸುವುದಾಗಿ ಹೇಳಿರುವ ಬಿಜೆಪಿ, ವಿಶ್ವವಿದ್ಯಾಲಯಗಳು ಶಿಕ್ಷಣ ಹಾಗೂ ಕಲಿಕಾ ಕೇಂದ್ರವಾಗಿ ಉಳಿಯಬೇಕು ಎಂದು ಹೇಳಿದೆ.
Advertisement