ರಾಹುಲ್ ಗಾಂಧಿ ರಾಜಕೀಯದಲ್ಲಿರುವುದೇ ನರೇಂದ್ರ ಮೋದಿಗೆ ದೊಡ್ಡ ಲಾಭ: ರಾಮಚಂದ್ರ ಗುಹಾ 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಆರಿಸಿ ಸಂಸತ್ತಿಗೆ ಕಳುಹಿಸಿ ಕೇರಳ ಬಹಳ ದೊಡ್ಡ ತಪ್ಪು ಮಾಡಿದೆ ಎಂದು ಇತಿಹಾಸ ತಜ್ಞ ರಾಮಚಂದ್ರ ಗುಹಾ ಹೇಳಿದ್ದಾರೆ.
ರಾಹುಲ್ ಗಾಂಧಿ ರಾಜಕೀಯದಲ್ಲಿರುವುದೇ ನರೇಂದ್ರ ಮೋದಿಗೆ ದೊಡ್ಡ ಲಾಭ: ರಾಮಚಂದ್ರ ಗುಹಾ 

ಕೋಝಿಕ್ಕೋಡು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಆರಿಸಿ ಸಂಸತ್ತಿಗೆ ಕಳುಹಿಸಿ ಕೇರಳ ಬಹಳ ದೊಡ್ಡ ತಪ್ಪು ಮಾಡಿದೆ ಎಂದು ಇತಿಹಾಸ ತಜ್ಞ ರಾಮಚಂದ್ರ ಗುಹಾ ಹೇಳಿದ್ದಾರೆ.


ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಭಾರತದ ಅತಿದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ ಇಂದು ಹೀನಾಯವಾಗಿ ಕುಟುಂಬ ರಾಜಕೀಯ ವ್ಯವಸ್ಥೆಯಲ್ಲಿ ಸಿಲುಕಿ ಹೋಗಿರುವುದರಿಂದ ಭಾರತದಲ್ಲಿ ಹಿಂದುತ್ವ ಮತ್ತು ಅತಿರೇಕದ ರಾಷ್ಟ್ರಪ್ರೇಮದ ಮಾತುಗಳು ಕಂಡುಬರುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.


ಅವರು ನಿನ್ನೆ ಕೇರಳದ ಕೋಝಿಕ್ಕೋಡಿನಲ್ಲಿ ಕೇರಳ ಸಾಹಿತ್ಯ ಹಬ್ಬದಲ್ಲಿ ರಾಷ್ಟ್ರಪ್ರೇಮ ಮತ್ತು ಅತಿರೇಕರದ ರಾಷ್ಟ್ರಪ್ರೇಮ ವಿಷಯ ಕುರಿತು ಮಾತನಾಡಿ ಹೀಗೆ ಹೇಳಿದ್ದಾರೆ.


ವೈಯಕ್ತಿಕವಾಗಿ ನನಗೆ ರಾಹುಲ್ ಗಾಂಧಿ ವಿರುದ್ಧ ಯಾವುದೇ ಭಿನ್ನಾಭಿಪ್ರಾಯ, ಅಸಮಾಧಾನ ಇಲ್ಲ, ಅವರು ಸಭ್ಯ ವ್ಯಕ್ತಿ, ಉತ್ತಮ ನಡತೆ ಹೊಂದಿರುವವರು. ಆದರೆ ನವ ಭಾರತಕ್ಕೆ ಇಂದು 5ನೇ ತಲೆಮಾರಿನ ಕುಟುಂಬ ರಾಜಕೀಯ ಬೇಕಾಗಿಲ್ಲ. ನೀವು ಮಲಯಾಳಿಗಳಾಗಿದ್ದರೆ 2024ರ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ರಾಹುಲ್ ಗಾಂಧಿಯವರನ್ನು ಆಯ್ಕೆ ಮಾಡಿ ತಪ್ಪು ಮಾಡಿ ನರೇಂದ್ರ ಮೋದಿಯವರಿಗೆ ಲಾಭ ಮಾಡಿ ಕೊಡುತ್ತೀರಷ್ಟೆ ಎಂದರು.


ಕೇರಳಿಗರು ಭಾರತದ ಬೆಳವಣಿಗೆಗೆ ಹಲವು ಉತ್ತಮ ಅದ್ಭುತ ಕೆಲಸಗಳನ್ನು ಮಾಡಿದ್ದಾರೆ. ಆದರೆ ರಾಹುಲ್ ಗಾಂಧಿಯವರನ್ನು ಸಂಸತ್ತಿಗೆ ಕಳುಹಿಸಿ ಮಾತ್ರ ತಪ್ಪು ಮಾಡಿದ್ದೀರಾ ಎಂದರು.


ನರೇಂದ್ರ ಮೋದಿಯವರ ಅತಿದೊಡ್ಡ ಅನುಕೂಲವೆಂದರೆ ಅವರು ರಾಹುಲ್ ಗಾಂಧಿಯಾಗಿಲ್ಲದಿರುವುದು. ಅವರು ಸ್ವಪ್ರಯತ್ನದಿಂದಲೇ ಉನ್ನತ ಸ್ಥಾನಕ್ಕೆ ಬಂದವರು. 15 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಒಂದು ರಾಜ್ಯವನ್ನು ಮುನ್ನಡೆಸಿದರು. ಅವರಿಗೆ ಆಡಳಿತದ ಅನುಭವವಿದೆ. ಅಷ್ಟೇ ಶ್ರಮಜೀವಿ ಕೂಡ, ರಜೆ, ವಿರಾಮ ಎಂದು ಯುರೋಪ್ ಸುತ್ತಲು ಹೋಗುವುದಿಲ್ಲ. ನಾನು ಹೇಳುತ್ತಿರುವ ಈ ವಿಷಯಗಳೆಲ್ಲವೂ ನಿಜವಾದುದು, ಸುಮ್ಮನೆ ತಮಾಷೆಗೆ ಹೇಳುತ್ತಿಲ್ಲ. ರಾಹುಲ್ ಗಾಂಧಿಯವರು ಅದಕ್ಕಿಂತಲೂ ಹೆಚ್ಚು ಬುದ್ಧಿವಂತ, ಶ್ರಮ ಜೀವಿಯಾಗಿದ್ದರೂ ರಾಜಕೀಯದಲ್ಲಿ 5ನೇ ತಲೆಮಾರಿನವರಾಗಿರುವುದರಿಂದ ನರೇಂದ್ರ ಮೋದಿ ಎದುರಿಗೆ ಅವರಿಗೆ ಅನನುಕೂಲತೆಗಳೇ ಹೆಚ್ಚು ಎಂದು ರಾಮಚಂದ್ರ ಗುಹಾ ಹೇಳಿದರು.


ಇನ್ನು ಸೋನಿಯಾ ಗಾಂಧಿ ಬಗ್ಗೆ ಪ್ರಸ್ತಾಪಿಸಿ ಹಿಂದಿನ ಮೊಘಲ್ ರಾಜವಂಶ ನನಗೆ ನೆನಪಾಗುತ್ತಿದೆ. ತಮ್ಮ ರಾಜ್ಯಭಾರದಿಂದ ಎಷ್ಟು ದೂರದಲ್ಲಿ ಮೊಘಲರಿದ್ದರೋ ಹಾಗೆಯೇ ಇಂದು ಸೋನಿಯಾ ಗಾಂಧಿ ಪರಿಸ್ಥಿತಿಯಾಗಿದೆ. ಇಂದು ಭಾರತ ಹೆಚ್ಚು ಪ್ರಜಾಸತ್ತಾತ್ಮಕವಾಗುತ್ತಿದ್ದು, ಊಳಿಗಮಾನ್ಯ ಪದ್ಧತಿಯಂತಹ ಸ್ಥಿತಿ ದೂರವಾಗುತ್ತಿದೆ. ಇದು ಸೋನಿಯಾ ಗಾಂಧಿಯವರಿಗೆ ಅರ್ಥವಾಗುತ್ತಿಲ್ಲ. ಸೋನಿಯಾ ಗಾಂಧಿ ದೆಹಲಿಯಲ್ಲಿರುತ್ತಾರೆ. ನಿಮ್ಮ ಸಾಮ್ರಾಜ್ಯ ದಿನೇ ದಿನೇ ಅಲುಗಾಡುತ್ತಿದೆ, ಆದರೂ ನಿಮ್ಮ ಚಮಚಾಗಳು ನೀವು ಇನ್ನೂ ಬಾದ್ ಶಾ ಎಂದು ಹೇಳುತ್ತಲೇ ನಿಮ್ಮನ್ನು ಮರುಳು ಮಾಡುತ್ತಿದ್ದಾರೆ ಎಂದರು.


ನರೇಂದ್ರ ಮೋದಿಯವರು ಎಲ್ಲೇ ಹೋದರು ಈ ದೇಶವನ್ನು, ಕಾಶ್ಮೀರವನ್ನು ನೆಹರೂ ಹಾಳು ಮಾಡಿದರು, ನೆಹರೂ ಹಾಗೆ ಮಾಡಿದರು, ಹೀಗೆ ಮಾಡಿದರು ಎಂದು ಹೋದಲ್ಲಿ, ಬಂದಲ್ಲಿ ದೂರುತ್ತಾರೆ. ಯಾಕೆಂದರೆ ರಾಜಕೀಯದಲ್ಲಿ ರಾಹುಲ್ ಗಾಂಧಿ ಇದ್ದಾರೆ. ಅದೇ ರಾಹುಲ್ ಗಾಂಧಿ ರಾಜಕೀಯದಲ್ಲಿ ಇರದಿದ್ದರೆ ಮೋದಿಯವರು ತಮ್ಮದೇ ನೀತಿಗಳ ಬಗ್ಗೆ ಮಾತನಾಡಿ ಅವು ಯಾಕೆ ವಿಫಲವಾದವು ಎಂದು ಹೇಳಬೇಕು, ಜನರಿಗೆ ಉತ್ತರ ಕೊಡಬೇಕಾಗುತ್ತಿತ್ತು, ಅದರಿಂದ ಮೋದಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com