ಗಲ್ವಾನ್ ಸಂಘರ್ಷ: ವಿವಾದಿತ ಪ್ರದೇಶದಿಂದ ಭಾರತ-ಚೀನಾ ಸೇನೆ ಹಿಂತೆಗೆದ ಕಾರ್ಯ ಪೂರ್ಣ!

ಗಲ್ವಾನ್ ಸಂಘರ್ಷದ ಬಳಿಕ ಗಡಿಯಲ್ಲಿ ಪರಸ್ಪರ ಮುಖಾಮುಖಿಯಾಗಿದ್ದ ಭಾರತ ಮತ್ತು ಚೀನಾ ಸೇನೆ ಇದೀಗ ವಿವಾದಿತ ಪ್ರದೇಶದಿಂದ ಸಂಪೂರ್ಣವಾಗಿ ಸೈನಿಕರನ್ನು ಹಿಂದಕ್ಕೆ ಪಡೆದುಕೊಂಡಿವೆ.
ವಿವಾದಿತ ಪ್ರದೇಶದಿಂದ ಚೀನಾ ಸೇನೆ ಹಿಂದಕ್ಕೆ
ವಿವಾದಿತ ಪ್ರದೇಶದಿಂದ ಚೀನಾ ಸೇನೆ ಹಿಂದಕ್ಕೆ

ನವದೆಹಲಿ: ಗಲ್ವಾನ್ ಸಂಘರ್ಷದ ಬಳಿಕ ಗಡಿಯಲ್ಲಿ ಪರಸ್ಪರ ಮುಖಾಮುಖಿಯಾಗಿದ್ದ ಭಾರತ ಮತ್ತು ಚೀನಾ ಸೇನೆ ಇದೀಗ ವಿವಾದಿತ ಪ್ರದೇಶದಿಂದ ಸಂಪೂರ್ಣವಾಗಿ ಸೈನಿಕರನ್ನು ಹಿಂದಕ್ಕೆ ಪಡೆದುಕೊಂಡಿವೆ.

ಹೌದು.. ಕಳೆದ 2 ದಿನಗಳಿಂದ ನಡೆದಿದ್ದ ಸೇನೆ ಹಿಂದಕ್ಕೆ ಕರೆಸಿಕೊಳ್ಳುವ ಕಾರ್ಯ ಇಂದು ಪೂರ್ಣಗೊಂಡಿದ್ದು ವಿವಾದಿತ ಗಲ್ವಾನ್ ಕಣಿವೆಯಿಂದ ಚೀನಾ ಸೇನೆ ತನ್ನ ಯೊಧರನ್ನು 2 ಕಿ,ಮೀ ಹಿಂದಕ್ಕೆ ಕರೆಯಿಸಿಕೊಂಡಿದೆ. ಈ ಬಗ್ಗೆ ಭಾರತೀಯ ಸೇನಾ ಮೂಲಗಳು ಮಾಹಿತಿ ನೀಡಿದ್ದು, ಗಲ್ವಾನ್ ಕಣಿವೆಯಲ್ಲಿ ಮೊಕ್ಕಾಂ ಹೂಡಿದ್ದ ಚೀನಾ ಸೇನೆ ಇದೀಗ ವಿವಾದಿತ ಪ್ರದೇಶದಿಂದ ಸುಮಾರು  2 ಕಿ.ಮೀ ನಷ್ಚು ಹಿಂದಕ್ಕೆ ಹೋಗಿದೆ. 

ಸೇನೆ ಹಿಂದಕ್ಕೆ ಕರೆಯಿಸಿಕೊಳ್ಳುವ ಕಾರ್ಯಕ್ಕೆ ಕಳೆದ 2 ದಿನಗಳ ಹಿಂದೆಯೇ ಚೀನಾ ಸೇನೆ ಚಾಲನೆ ನೀಡಿತ್ತು. ಇಂದು ಆ ಕಾರ್ಯ ಪೂರ್ಣಗೊಂಡಿದೆ. ವಿವಾದಿತ ಸ್ಥಳದಲ್ಲಿ ಚೀನಾ ಸೈನಿಕರು ನಿರ್ಮಿಸಿದ್ದ ಸಂಪೂರ್ಣ ಟೆಂಟ್ ಗಳನ್ನು ತೆರವು ಗೊಳಿಸಿದ್ದು ಮಾತ್ರವಲ್ಲದೇ ಎಲ್ಲ ಸೈನಿಕರೂ ಪ್ಯಾಟ್ರಲಿಂಗ್ ಪಾಯಿಂಟ್ 2 ಕಿ.ಮೀ ಹಿಂದಕ್ಕೆ ಹೋಗಿದ್ದಾರೆ. ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾ ಪ್ರದೇಶಗಳಿಂದ ಉಭಯ ಸೈನಿಕರೂ ಸಂಪೂರ್ಣವಾಗಿ ತಮ್ಮ ತಮ್ಮ ಟೆಂಟ್ ಗಳನ್ನು ಖಾಲಿ ಮಾಡಿ ಹಿಂದಕ್ಕೆ ಸರಿದಿದ್ದಾರೆ.

ಈ ಹಿಂದೆ ಗಲ್ವಾನ್ ಸಂಘರ್ಷದ ಬಳಿಕ ಉಭಯ ದೇಶಗಳ ಸೇನಾಧಿಕಾರಿಗಳ ನಡುವಿನ ಮಾತುಕತೆ ಫಲಪ್ರದವಾಗಿತ್ತು. ಆದರೂ ಚೀನಾ ಸೇನೆ ವಿವಾದಿತ ಪ್ರದೇಶದಿಂದ ಹಿಂದಕ್ಕೆ ಸರಿದಿರಲಿಲ್ಲ. ಈ ಬಗ್ಗೆ ಚೀನಾ ಗೃಹ ಸಚಿವಾಲಯವೇ ಈ ಬಗ್ಗೆ ಅಸಮಾಧಾನ ಹೊರ ಹಾಕಿತ್ತು. ಬಳಿಕ ಕಳೆದ ಭಾನುವಾರ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ವಿಡಿಯೊ ಕಾಲಿಂಗ್ ಮೂಲಕ ಮಾತುಕತೆ ನಡೆಸಿದ್ದರು. 

ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಪೂರ್ಣವಾಗಿ ಶಾಂತಿ ಸ್ಥಾಪಿಸುವ ವಿಚಾರ ಮತ್ತು ಗಲ್ವಾನ್ ಕಣಿವೆ ಸಂಘರ್ಷದಂತಹ ಘಟನೆಗಳು ಮರುಕಳಿಸದಂತೆ ಭಾರತ–ಚೀನಾ ಜೊತೆಯಾಗಿ ಕಾರ್ಯನಿರ್ವಹಿಸಬೇಕಿದೆ. ಗಡಿ ಉದ್ವಿಗ್ನತೆ ಶಮನಕ್ಕೆ ಚೀನಾ ತನ್ನ ಸೈನ್ಯವನ್ನು ಹಿಂಪಡೆಯುವುದೊಂದೇ ದಾರಿ. ಗಡಿ ತಕರಾರು ಸಂಬಂಧ ಪರಸ್ಪರ ಆದ ಒಪ್ಪಂದಗಳಿಗೆ ಧಕ್ಕೆ ತರಬಾರದು ಎಂದು ಧೋವಲ್ ಹೇಳಿದ್ದರು.  ಅಂತೆಯೇ ಶಾಂತಿ ಮಾತುಕತೆಗಳಿಗೂ ಮುನ್ನ ಗಡಿಯಿಂದ ಸೈನ್ಯ ಹಿಂಪಡೆಯುವ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ಧೋವಲ್ ಹೇಳಿದ್ದರು.

ಧೋವಲ್ ಮಾತಿಗೆ ಧ್ವನಿಗೂಡಿಸಿದ ಚೀನಾ ವಿದೇಶಾಂಗ ಸಚಿವ ವಾಂಗ್ ಯೀ, ಗಲ್ವಾನ್ ಗಡಿಯಿಂದ ಸೈನ್ಯವನ್ನು ಹಿಂಪಡೆಯುವ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಈ ಮಾತುಕತೆ ಬೆನ್ನಲ್ಲೇ ಗಲ್ವಾನ್‌ ಕಣಿವೆಯ ಕೆಲವು ಪ್ರದೇಶಗಳಲ್ಲಿ ಬೀಡು ಬಿಟ್ಟಿದ್ದ ಚೀನಾದ ಸೈನಿಕರು ಟೆಂಟ್‌ಗಳನ್ನು ತೆರವು ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com