ನವದೆಹಲಿ: ತನ್ನ ಮಗಳನ್ನು ಅಪಹರಿಸಲು ಬಂದ ಇಬ್ಬರ ಜೊತೆ ಹೋರಾಡಿ ತಾಯಿ 4 ವರ್ಷದ ಕಂದಮ್ಮನ್ನು ರಕ್ಷಣೆ ಮಾಡಿದ್ದು ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದುಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನವದೆಹಲಿಯ ಶಕರ್ ಪುರ್ ಪ್ರದೇಶದಲ್ಲಿ ಹಾಡಹಗಲಲ್ಲೇ ಬೈಕಿನಲ್ಲಿ ಆಗಮಿಸಿದ ಅಪಹರಣಕಾರರು ಮನೆಯ ಬಾಗಿಲಲ್ಲಿ ತಾಯಿಯ ಜೊತೆಗೆ ನಿಂತಿದ್ದ ನಾಲ್ಕು ವರ್ಷದ ಮಗುವನ್ನು ಕಿತ್ತುಕೊಂಡು ಪರಾರಿ ಆಗಲು ಯತ್ನಿಸಿದ್ದರು.
ಬಾಲಕಿಯ ಮಾವ ಉಪೇಂದ್ರ ಈ ಅಪಹರಣದ ಪ್ರಮುಖ ರುವಾರಿ. ಬಾಲಕಿಯನ್ನು ಅಪಹರಿಸಿ, ಆಕೆಯ ಪಾಲಕರಿಂದ ಹಣಕ್ಕೆ ಬೇಡಿಕೆ ಇಡಬಹುದು ಎಂದು ಉಪೇಂದ್ರ ಸಿನಿಮೀಯ ಶೈಲಿಯಲ್ಲಿ ಯೋಚನೆ ಮಾಡಿದ್ದ. ಬಾಲಕಿ ಕಿಡ್ನ್ಯಾಪ್ ಮಾಡಲು ಇಬ್ಬರನ್ನು ರೆಡಿ ಮಾಡಿದ್ದ.
ಉಪೇಂದ್ರನಿಂದ ನೇಮಿಸಲ್ಪಟ್ಟ ಇಬ್ಬರು ಮುಖವಾಡ ಧರಿಸಿ, ಬೈಕ್ ಏರಿ ಹೊರಟಿದ್ದರು. ಆಗತಾನೇ ಬಾಲಕಿ ಹಾಗೂ ಬಾಲಕಿಯ ತಾಯಿ ಅಂಗಡಿಯಿಂದ ಮರಳುತ್ತಿದ್ದರು. ಮುಸುಕುಧಾರಿಗಳನ್ನು ನೋಡಿ ಬಾಲಕಿ ತಾಯಿಗೆ ಭಯವಾಗಿತ್ತು. ನೋಡ ನೋಡುತ್ತಿದ್ದಂತೆ ಬಾಲಕಿಯನ್ನು ಎಳೆದು ಬೈಕ್ನಲ್ಲಿ ಕೂರಿಸಿಕೊಂಡು ಪರಾರಿಯಾಗಲು ಮುಂದಾಗಿದ್ದರು.
ಈ ವೇಳೆ ಎಚ್ಚೆತ್ತುಕೊಂಡ ತಾಯಿ ಬೈಕ್ ಅನ್ನೇ ದೂಡಿ ಹಾಕಿದ್ದಾಳೆ. ಓರ್ವ ಓಡಿ ಹೋದರೆ, ಮತ್ತೋರ್ವ ಬೈಕ್ ಎತ್ತಿಕೊಂಡು ಪರಾರಿಯಾಗಿದ್ದ. ಈ ವೇಳೆ ಓರ್ವ ವ್ಯಕ್ತಿ ಬೈಕ್ ಅಡ್ಡ ಹಾಕಿ ಆತನನ್ನು ಹಿಡಿಯಲು ಮುಂದಾಗಿದ್ದರೂ ಅದು ಸಾಧ್ಯವಾಗಿಲ್ಲ.
ಬೈಕ್ ನಂಬರ್ ಹಾಗೂ ಅವರ ಬ್ಯಾಗ್ನಲ್ಲಿದ್ದ ವಸ್ತುಗಳನ್ನು ಆಧರಿಸಿ ಅಪಹರಣ ಕಾರರನ್ನು ಹಿಡಿಯಲಾಗಿದೆ. ಈ ವೇಳೆ ಅವರು ಬಾಲಕಿಯ ಮಾವ ಉಪೇಂದ್ರನ ಹೆಸರನ್ನು ಬಾಯ್ಬಿಟ್ಟಿದ್ದಾರೆ. ಉಪೇಂದ್ರನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಅಪಹರಣ ಮಾಡಲು ಪ್ರಯತ್ನಿಸಿದವರಿಗೆ ಒಂದು ಲಕ್ಷ ರೂಪಾಯಿ ಹಣ ನೀಡುವುದಾಗಿ ಉಪೇಂದ್ರ ನಂಬಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಉಪೇಂದ್ರ ಮಗುವಿನ ತಾಯಿಯ ತಮ್ಮ. ಈ ಮೊದಲಿನಿಂದಲೂ ಆತನನ್ನು ಕಂಡರೆ ಆಕೆಗೆ ಆಗುತ್ತಿರಲಿಲ್ಲ. ಈತನಿಗೆ ತುರ್ತಾಗಿ ಹಣ ಬೇಕಿತ್ತು. ಹೀಗಾಗಿ ಬೇರೆ ದಾರಿ ಕಾಣದೆ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ. ಇನ್ನು, ತಾಯಿಯ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಗುವಿನ ರಕ್ಷಣೆಗೆ ತಾಯಿ ಏನನ್ನು ಮಾಡಲೂ ಸಿದ್ಧರಿರುತ್ತಾಳೆ ಎಂಬುದು ಸಾಬೀತಾಗಿದೆ ಎಂದು ಬರೆದುಕೊಂಡಿದ್ದಾರೆ.
Advertisement