ಅಪಹರಣಕಾರರ ವಿರುದ್ಧ ಹೋರಾಡಿ 4 ವರ್ಷದ ಮಗುವನ್ನು ರಕ್ಷಿಸಿದ ತಾಯಿ: ವಿಡಿಯೋ ವೈರಲ್

ತನ್ನ ಮಗಳನ್ನು ಅಪಹರಿಸಲು ಬಂದ ಇಬ್ಬರ ಜೊತೆ ಹೋರಾಡಿ ತಾಯಿ 4 ವರ್ಷದ ಕಂದಮ್ಮನ್ನು ರಕ್ಷಣೆ ಮಾಡಿದ್ದು ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದುಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ತನ್ನ ಮಗಳನ್ನು ಅಪಹರಿಸಲು ಬಂದ ಇಬ್ಬರ ಜೊತೆ ಹೋರಾಡಿ ತಾಯಿ 4 ವರ್ಷದ ಕಂದಮ್ಮನ್ನು ರಕ್ಷಣೆ ಮಾಡಿದ್ದು ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದುಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ನವದೆಹಲಿಯ ಶಕರ್ ಪುರ್ ಪ್ರದೇಶದಲ್ಲಿ ಹಾಡಹಗಲಲ್ಲೇ ಬೈಕಿನಲ್ಲಿ ಆಗಮಿಸಿದ ಅಪಹರಣಕಾರರು ಮನೆಯ ಬಾಗಿಲಲ್ಲಿ ತಾಯಿಯ ಜೊತೆಗೆ ನಿಂತಿದ್ದ ನಾಲ್ಕು ವರ್ಷದ ಮಗುವನ್ನು ಕಿತ್ತುಕೊಂಡು ಪರಾರಿ ಆಗಲು ಯತ್ನಿಸಿದ್ದರು.

ಬಾಲಕಿಯ ಮಾವ ಉಪೇಂದ್ರ ಈ ಅಪಹರಣದ ಪ್ರಮುಖ ರುವಾರಿ. ಬಾಲಕಿಯನ್ನು ಅಪಹರಿಸಿ, ಆಕೆಯ ಪಾಲಕರಿಂದ ಹಣಕ್ಕೆ ಬೇಡಿಕೆ ಇಡಬಹುದು ಎಂದು ಉಪೇಂದ್ರ ಸಿನಿಮೀಯ ಶೈಲಿಯಲ್ಲಿ ಯೋಚನೆ ಮಾಡಿದ್ದ. ಬಾಲಕಿ ಕಿಡ್ನ್ಯಾಪ್​ ಮಾಡಲು ಇಬ್ಬರನ್ನು ರೆಡಿ ಮಾಡಿದ್ದ.

ಉಪೇಂದ್ರನಿಂದ ನೇಮಿಸಲ್ಪಟ್ಟ ಇಬ್ಬರು ಮುಖವಾಡ ಧರಿಸಿ, ಬೈಕ್​ ಏರಿ ಹೊರಟಿದ್ದರು. ಆಗತಾನೇ ಬಾಲಕಿ ಹಾಗೂ ಬಾಲಕಿಯ ತಾಯಿ ಅಂಗಡಿಯಿಂದ ಮರಳುತ್ತಿದ್ದರು. ಮುಸುಕುಧಾರಿಗಳನ್ನು ನೋಡಿ ಬಾಲಕಿ ತಾಯಿಗೆ ಭಯವಾಗಿತ್ತು. ನೋಡ ನೋಡುತ್ತಿದ್ದಂತೆ ಬಾಲಕಿಯನ್ನು ಎಳೆದು ಬೈಕ್​ನಲ್ಲಿ ಕೂರಿಸಿಕೊಂಡು ಪರಾರಿಯಾಗಲು ಮುಂದಾಗಿದ್ದರು.

ಈ ವೇಳೆ ಎಚ್ಚೆತ್ತುಕೊಂಡ ತಾಯಿ ಬೈಕ್​ ಅನ್ನೇ ದೂಡಿ ಹಾಕಿದ್ದಾಳೆ. ಓರ್ವ ಓಡಿ ಹೋದರೆ, ಮತ್ತೋರ್ವ ಬೈಕ್​ ಎತ್ತಿಕೊಂಡು ಪರಾರಿಯಾಗಿದ್ದ. ಈ ವೇಳೆ ಓರ್ವ ವ್ಯಕ್ತಿ ಬೈಕ್​ ಅಡ್ಡ ಹಾಕಿ ಆತನನ್ನು ಹಿಡಿಯಲು ಮುಂದಾಗಿದ್ದರೂ ಅದು ಸಾಧ್ಯವಾಗಿಲ್ಲ.

ಬೈಕ್​ ನಂಬರ್​ ಹಾಗೂ ಅವರ ಬ್ಯಾಗ್​ನಲ್ಲಿದ್ದ ವಸ್ತುಗಳನ್ನು ಆಧರಿಸಿ ಅಪಹರಣ ಕಾರರನ್ನು ಹಿಡಿಯಲಾಗಿದೆ. ಈ ವೇಳೆ ಅವರು ಬಾಲಕಿಯ ಮಾವ ಉಪೇಂದ್ರನ ಹೆಸರನ್ನು ಬಾಯ್ಬಿಟ್ಟಿದ್ದಾರೆ. ಉಪೇಂದ್ರನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಅಪಹರಣ ಮಾಡಲು ಪ್ರಯತ್ನಿಸಿದವರಿಗೆ ಒಂದು ಲಕ್ಷ ರೂಪಾಯಿ ಹಣ ನೀಡುವುದಾಗಿ ಉಪೇಂದ್ರ ನಂಬಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಉಪೇಂದ್ರ ಮಗುವಿನ ತಾಯಿಯ ತಮ್ಮ. ಈ ಮೊದಲಿನಿಂದಲೂ ಆತನನ್ನು ಕಂಡರೆ ಆಕೆಗೆ ಆಗುತ್ತಿರಲಿಲ್ಲ. ಈತನಿಗೆ ತುರ್ತಾಗಿ ಹಣ ಬೇಕಿತ್ತು. ಹೀಗಾಗಿ ಬೇರೆ ದಾರಿ ಕಾಣದೆ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ. ಇನ್ನು, ತಾಯಿಯ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಗುವಿನ ರಕ್ಷಣೆಗೆ ತಾಯಿ ಏನನ್ನು ಮಾಡಲೂ ಸಿದ್ಧರಿರುತ್ತಾಳೆ ಎಂಬುದು ಸಾಬೀತಾಗಿದೆ ಎಂದು ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com