ನವದೆಹಲಿ: ಭಾರತದ ಯಾವುದೇ ಭೂ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದ್ದೀಯಾ ಎಂಬುದರ ಬಗ್ಗೆ ದೇಶದ ಜನತೆಗೆ ಸತ್ಯವನ್ನು ಹೇಳುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ದೇಶದ ಭೂ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿಲ್ಲ ಎಂದು ಪ್ರಧಾನ ಮಂತ್ರಿ ಹೇಳುತ್ತಿದ್ದರೆ ಸ್ಯಾಟಲೈಟ್ ಫೋಟೋಗಳು ಬೇರೆ ರೀತಿಯಲ್ಲಿವೆ.ಹಾಗಾದರೆ ಮೋದಿ ಅವರ ಹೇಳಿಕೆಯಿಂದ ನೆರೆಯ ರಾಷ್ಟ್ರ ಚೀನಾ ಲಾಭ ಪಡೆಯುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಹುತಾತ್ಮ ಭಾರತೀಯ ಯೋಧರ ಗೌರವಾರ್ಥ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ 'ಸ್ಪೀಕ್ ಆಪ್ ಪಾರ್ ಅವರ ಜವಾನ್ಸ್ ' ಪ್ರಚಾಂದೋಲನದ ಭಾಗವಾಗಿ ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, ದೇಶದ ಒಂದು ಇಂಚು ಭೂ ಪ್ರದೇಶವನ್ನು ಯಾರೊಬ್ಬರಿಗೂ ನೀಡಿಲ್ಲ ಎಂದು ಪ್ರಧಾನಿ ಹೇಳುತ್ತಾರೆ.ಆದರೆ, ಪೂರ್ವ ಲಡಾಖ್ ನಲ್ಲಿ ಮೂರು ಪಾಯಿಂಟ್ ಗಳಷ್ಟು ಭೂ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂದು ಪರಿಣಿತರು ಹಾಗೂ ಸ್ಯಾಟಲೈಟ್ ಫೋಟೋಗಳು ತೋರಿಸುತ್ತಿವೆ.ಇಡೀ ದೇಶ ಪ್ರಧಾನಿ ಜೊತೆಗಿದ್ದು, ಚೀನಾದ ವಿರುದ್ಧ ಒಗ್ಗಟ್ಟಾಗಿ ಹೋರಾಡಿ ಅವರನ್ನು ಹೊರಗೆ ಅಟ್ಟಬೇಕಾಗಿದೆ ಎಂದಿದ್ದಾರೆ.
ಪ್ರಧಾನಿ ಮಂತ್ರಿ ಅವರೇ, ಮಾತನಾಡಿ, ಭಯಪಡಬೇಡಿ, ದೇಶದ ಜನತೆಗೆ ಸತ್ಯ ಹೇಳಿ, ಚೀನಾ ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದೆ ಎಂದು ಹೇಳುವುದರಲ್ಲಿ ಭಯಪಡಬೇಡಿ.ಅವರ ವಿರುದ್ಧ ಒಗ್ಗಟ್ಟಾಗಿ ಹೋರಾಡೋಣ, ಇಡೀ ದೇಶ ನಿಮ್ಮ ಜೊತೆಯಲ್ಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ಪೂರ್ವ ಲಡಾಖ್ ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಸೇನಾಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾದದ್ದನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಶಸಾಸ್ತ್ರಗಳಿಲ್ಲದೆ ಯೋಧರನ್ನು ಗಡಿಗೆ ಕಳುಹಿಸಿದವರು ಯಾರು ಎಂಬುದನ್ನು ಸರ್ಕಾರ ವಿವರಿಸಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.
Advertisement