ನವದೆಹಲಿ: ಕೋವಿಡ್-19 ಸಾಂಕ್ರಾಮಿಕದಿಂದ ಜನರ ಜೀವ ಮತ್ತು ಜೀವನವನ್ನು ರಕ್ಷಿಸಲು ದೇಶದ ಎಲ್ಲರೂ ಒಗ್ಗಟ್ಟಾಗಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಕರೆ ನೀಡಿದ್ದಾರೆ.
ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರ ಜನ್ಮದಿನಾಚರಣೆ ನಿಮಿತ್ತ ಅವರನ್ನು ನೆನೆದ ವೆಂಕಯ್ಯನಾಯ್ಡು ಅವರು, ಭಾರತೀಯ ಆರ್ಥಿಕತೆಯು ಕುಸಿತದ ಅಂಚಿನಲ್ಲಿದ್ದಾಗ ನಿರ್ಣಾಯಕ ಹಂತದಲ್ಲಿ ಆರ್ಥಿಕ ಸುಧಾರಣೆಗಳನ್ನು ತರುವಲ್ಲಿ ಅವರ ಪಾತ್ರವನ್ನು ನೆನಪಿಸಿಕೊಂಡರು. ಅಂತೆಯೇ ಕಂಪನಿಗಳಿಗೆ ಪರವಾನಗಿ ನೀಡುವ ಕುರಿತಂತೆ ದೇಶದಲ್ಲಿ ಬೆಳವಣಿಗೆಯಾಗಿದ್ದ ಪರವಾನಗಿ ಮಾಫಿಯಾವನ್ನು ತಡೆಯುವಲ್ಲಿ ಪಿವಿ ನರಸಿಂಹರಾವ್ ಅವರ ಪಾತ್ರವನ್ನು ವೆಂಕಯ್ಯನಾಯ್ಡು ನೆನಪಿಸಿಕೊಂಡರು.
ಇದೇ ವೇಳೆ ಕೊರೋನಾ ಸಾಂಕ್ರಾಮಿಕದ ಕುರಿತಂತೆ ಮಾತನಾಡಿದ ವೆಂಕಯ್ಯನಾಯ್ಡು ಅವರು, ಕೋವಿಡ್-19 ಸಾಂಕ್ರಾಮಿಕದಿಂದ ಜನರ ಜೀವ ಮತ್ತು ಜೀವನವನ್ನು ರಕ್ಷಿಸಲು ದೇಶದ ಎಲ್ಲರೂ ಒಗ್ಗಟ್ಟಾಗಬೇಕು. ಹಲವು ದೇಶಗಳು ಲಾಕ್ಡೌನ್ ಅಂತ್ಯಗೊಳಿಸಿದ್ದು, ಆರ್ಥಿಕತೆಯ ಮೇಲೆ ಗಮನ ಹರಿಸಿವೆ. ಆರ್ಥಿಕತೆಗೆ ಉತ್ತೇಜನ ನೀಡಲು ಸರ್ಕಾರ ನಿರಂತರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದ ಅವರು, ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಸರ್ಕಾರವನ್ನು ಬೆಂಬಲಿಸುವಂತೆ ಜನರನ್ನು ಮನವಿ ಮಾಡಿದರು.
Advertisement