ನವದೆಹಲಿ: ದೆಹಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಗದ್ದಲ ವೆಬ್ಬಿಸಿ, ಅಶಿಸ್ತಿನ ವರ್ತನೆ ತೋರಿದ ಕಾರಣದಿಂದಾಗಿ ಕಾಂಗ್ರೆಸ್ 7 ಸಂಸದರನ್ನು ಸ್ಪೀಕರ್ ಓಂ ಬಿರ್ಲಾ ಅವರು ಬಾಕಿ ಉಳಿದಿರುವ ಕಲಾಪದಿಂದ ಅಮಾನತು ಮಾಡಿದ್ದಾರೆ.
ಕಾಂಗ್ರೆಸ್ ನ ಸಂಸದರಾದ ಗೌರವ್ ಗೊಗೊಯಿ, ಟಿ.ಎನ್.ಪ್ರತಾಪನ್, ಮಾಣಿಕಂ ಟಾಗೋರ್, ಗುರ್ಜೀತ್ ಸಿಂಗ್ ಔಜಲಾ, ಬೆನ್ನಿ ಬೆಹಾನನ್, ರಾಜಮೋಹನ್ ಉನ್ನಿತಾನ್ ಮತ್ತು ಡೀನ್ ಕುರಿಯಾಕೋಸ್ ಅವರನ್ನು ಸ್ಪೀಕರ್ ಓಂ ಬಿರ್ಲಾ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ. ಸತತ ಎಚ್ಚರಿಕೆ ಹೊರತಾಗಿಯೂ ಸದನದಲ್ಲಿ ಅಶಿಸ್ತಿನಿಂದ ವರ್ತನೆ ತೋರಿದ ಕಾರಣ 7 ಸಂಸದರನ್ನು ಬಾಕಿ ಉಳಿದಿರುವ ಕಲಾಪದಿಂದ ಅಮಾನತು ಮಾಡಲಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು.
ಇನ್ನು ಸಂಸದರ ಅಮಾನತು ಆದೇಶವನ್ನು ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಪಾಸ್ ಮಾಡಲಾಯಿತು.
Advertisement