ನವದೆಹಲಿ: ಇದೇ 20 ರಂದು ನಿರ್ಭಯಾ ಅಪರಾಧಿಗಳಿಗೆ ಡೆತ್ ವಾರಂಟ್ ವಿಧಿಸಿ ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ಪ್ರಕರಣದ ಆರೋಪಿ ಮುಕೇಶ್ ಮತ್ತೊಮ್ಮೆ ಸುಪ್ರೀಂಕೊರ್ಟ್ ಮೆಟ್ಟಿಲೇರಿದ್ದಾನೆ.
ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಪಟಿಯಾಲ ಹೌಸ್ ನ್ಯಾಯಾಲಯ ನೀಡಿದ ಹೊಸ ಡೆತ್ ವಾರಂಟ್ ಆದೇಶ ಹೊರಬಿದ್ದ ಬಳಿಕ, ಗಲ್ಲುಶಿಕ್ಷೆಯನ್ನು ಜೀವಾವಧಿಗೆ ಬದಲಿಸುವಂತೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದಾನೆ. ಜತೆಗೆ ಕ್ಷಮಾದಾನ ಕೋರಿ ಮತ್ತೊಮ್ಮೆ ರಾಷ್ಟ್ರಪತಿಯವರಿಗೆ ಮನವಿ ಮಾಡಿದ್ದಾನೆ.
ದೆಹಲಿಯಲ್ಲಿ 2012 ಡಿಸೆಂಬರ್ 16ರಂದು ನಡೆದ ವೈದ್ಯಕೀಯೇತರ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್ (32), ಪವನ್ ಗುಪ್ತ, ವಿನಯ್ ಕುಮಾರ್ ಶರ್ಮಾ(26), ಅಕ್ಷಯ್ ಸಿಂಗ್ (31) ಅವರನ್ಹು ಇದೇ 20ರಂದು ಬೆಳಗ್ಗೆ 5.30ಕ್ಕೆ ಗಲ್ಲಿಗೇರಿಸುವಂತೆ ಪಟಿಯಾಲಾ ಹೌಸ್ ನ್ಯಾಯಾಲಯ ಆದೇಶಿಸಿದೆ.
ತನ್ನ ಪರ ವಾದ ಮಂಡಿಸಿದ ಆ್ಯಮಿಕಸ್ ಕ್ಯೂರಿ ವಿರುದ್ಧವೇ ಆರೋಪ
ಇನ್ನು ಅರ್ಜಿ ಸಲ್ಲಿಕೆ ವೇಳೆ ಅಪರಾಧಿ ಮುಕೇಶ್ ಈ ಹಿಂದೆ ತನ್ನ ಪರವಾದ ಮಂಡಿಸಿದ್ದ ಆ್ಯಮಿಕಸ್ ಕ್ಯೂರಿ ವೃಂದಾ ಗ್ರೋವರ್ ಅವರೇ ಬಲವಂತವಾಗಿ ಕ್ಯುರೇಟಿವ್ ಮತ್ತು ಕ್ಷಮಾದಾನ ಅರ್ಜಿ ಮೇಲೆ ನನ್ನ ಸಹಿ ಪಡೆದಿದ್ದರು. ಅಲ್ಲದೆ ಈ ಬಗ್ಗೆ ಕೋರ್ಟ್ ಗೆ ತಪ್ಪು ಮಾಹಿತಿ ನೀಡಿದ್ದರು ಎಂದು ಆರೋಪಿಸಿದ್ದಾನೆ. ಅಲ್ಲದೆ ತನ್ನ ಹಕ್ಕನ್ನು ತನಗೆ ನೀಡಿ ತನಗೆ ನೀಡಿರುವ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಬದಲಿಸಲು ಅವಕಾಶ ನೀಡಬೇಕು ಎಂದು ಕೇಳಿದ್ದಾನೆ.
ಪುನರ್ ಪರಿಶೀಲನಾ ಅರ್ಜಿ ವಜಾಗೊಂಡ ಬಳಿಕ ದಿನದಿಂದ ಮೂರು ವರ್ಷಗಳು ಅಂದರೆ ಜುಲೈ 2021ರವರೆಗೂ ತನಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಈ ಕುರಿತ ತನ್ನ ಹಕ್ಕನ್ನು ನೀಡಬೇಕು ಎಂದು ಮುಕೇಶ್ ಅರ್ಜಿಯಲ್ಲಿ ಮನವಿ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಒಟ್ಟಾರೆ ನಿರ್ಭಯಾ ಅಪರಾಧಿಗಳು ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಾನೂನಿನಲ್ಲಿರುವ ಸಣ್ಣಸಣ್ಣ ಅವಕಾಶವನ್ನೂ ಕೂಡ ಹೆಕ್ಕಿತೆಗೆದು ಅರ್ಜಿಗಳ ಮೇಲೆ ಅರ್ಜಿಗಳನ್ನು ಸಲ್ಲಿಕೆ ಮಾಡುತ್ತಿದ್ದು, ಅಪರಾಧಿಗಳ ಈ ಆಟ ನೋಡುತ್ತಿರುವ ಸರ್ವೋಚ್ಛ ನ್ಯಾಯಾಲಯ ಮುಂದಿನ ದಿನಗಳಲ್ಲಿ ಎಂತಹ ನಡೆ ಅನುಸರಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ.
Advertisement