ಭೂಪಾಲ್: ಆಡಳಿತರೂಢ ಕಾಂಗ್ರೆಸ್ ಪಕ್ಷದ 22 ಶಾಸಕರು ರಾಜೀನಾಮೆ ನೀಡಿರುವುದರಿಂದ ಮಧ್ಯಪ್ರದೇಶ ಸರ್ಕಾರದಲ್ಲಿ ಬಿಕ್ಕಟ್ಟು ಉಂಟಾಗುತ್ತಿದ್ದಂತೆ ಸಮಾಜವಾದಿ ಹಾಗೂ ಬಿಎಸ್ಪಿ ಶಾಸಕರು ಬಿಜೆಪಿ ಮುಖಂಡ ಶಿವರಾಜ್ ಸಿಂಗ್ ಚೌಹ್ಹಾಣ್ ಅವರನ್ನು ಇಂದು ಭೇಟಿ ಮಾಡಿದ್ದಾರೆ.
ಬಿಎಸ್ಪಿಯ ಇಬ್ಬರು ಹಾಗೂ ಎಸ್ ಪಿಯ ಒಬ್ಬ ಶಾಸಕರು ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಬಿಎಸ್ಪಿ ಶಾಸಕ ಕುಶ್ವಾಹಾದ ಭಿಂದ್ ಸಂಜೀವ್ ಸಿಂಗ್ ಹಾಗೂ ಮೆಹಗಾಂವ್ ಎಸ್ಪಿ ಶಾಸಕ ರಾಜೀಶ್ ಶುಕ್ಲಾ , ಚೌಹ್ಹಾಣ್ ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಭೇಟಿ ಬಳಿಕ ಮಾತನಾಡಿದ ಶಿವರಾಜ್ ಸಿಂಗ್ ಚೌಹ್ಹಾಣ್, ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಇದೊಂದು ಔಪಾಚಾರಿಕ ಭೇಟಿಯಾಗಿದೆ ಎಂದು ತಿಳಿಸಿದರು.
ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬಂತಹ ಕಾಂಗ್ರೆಸ್ ಆರೋಪದ ಮಧ್ಯೆ ಶುಕ್ಲಾ ಹಾಗೂ ಕುಶ್ವಾಹಾ ಅವರ ಮೊಬೈಲ್ ಫೋನ್ ಕಳೆದೆರಡು ವಾರಗಳಿಂದ ಸ್ವಿಚ್ ಆಫ್ ಆಗಿತ್ತು. ಮಾರ್ಚ್ 4ರಂದು ಭೂಪಾಲ್ ಗೆ ಮರಳಿದ ಈ ಇಬ್ಬರು ಶಾಸಕರು, ತಮ್ಮ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಆರೋಪವನ್ನು ತಳ್ಳಿಹಾಕಿದ್ದರು.
Advertisement