ಕೊಲ್ಲಂ: ವ್ಯಕ್ತಿಯೊಬ್ಬ ತನ್ನ ಪತ್ನಿ ಮಲಗಿದ್ದಾಗ ನಾಗರಹಾವು ಬಿಟ್ಟು ಹತ್ಯೆ ಮಾಡಿದ ಹತ್ಯೆ ಮಾಡಿದ ಭಯಾನಕ ಪ್ರಕರಣವನ್ನು ಕೇರಳ ಪೊಲೀಸರು ಭೇದಿಸಿದ್ದು, ಇದೊಂದು ಪೂರ್ವನಿಯೋಜಿತ ಕೃತ್ಯ ಎಂದು ಪೊಲೀಸರು ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ಅಂಚಲ್ ನಿವಾಸಿ ಎಸ್.ಉತ್ತರ ಎಂಬ 25 ವರ್ಷದ ಮಹಿಳೆ ಹಾವು ಕಚ್ಚಿ ಸಾವನ್ನಪ್ಪಿದ್ದರು. ಆದರೆ ಮಹಿಳೆ ಪೋಷಕರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಆಕೆಯ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಪತ್ನಿಯನ್ನು ಕೊಲೆ ಮಾಡಿದ ಪತಿ ಸೂರಜ್ ನನ್ನು ಬಂಧಿಸಿದ್ದಾರೆ. ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದ ಸೂರಜ್ 10 ಸಾವಿರ ರೂ. ಪಾವತಿಸಿ ಹಾವಾಡಿಗ ಸುರೇಶ್ನಿಂದ ಹಾವನ್ನು ತಂದಿದ್ದ. ಬಳಿಕ ತನ್ನ ರೂಮ್ನಲ್ಲಿ ಹಾವನ್ನು ಬಿಟ್ಟು ಪತ್ನಿಗೆ ಕಚ್ಚುವಂತೆ ಮಾಡಿದ್ದ. ಮೊದಲ ಬಾರಿಗೆ ಹಾವು ಕಚ್ಚಿದಾಗಲೇ ಪತ್ನಿ ಸಾಯುತ್ತಾಳೆ ಎಂದು ಸೂರಜ್ ಅಂದುಕೊಂಡಿದ್ದ. ಆದರೆ ಅದೃಷ್ಟವಶಾತ್ ಉತ್ತರ ಬದುಕುಳಿದಿದ್ದಳು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಗುಣಮುಖಳಾಗಿ ತವರು ಮನೆಗೆ ತೆರಳಿದ್ದಳು. ಆದರೆ ಎರಡನೇ ಬಾರಿ ಸುರೇಶ್ ನಿಂದ ಹಾವನ್ನು ಬಾಡಿಗೆ ಪಡೆದು ಪತ್ನಿ ಮಲಗಿದ್ದಾಗ ಅದನ್ನು ಬಿಟ್ಟಿದ್ದಾನೆ. ಎರಡನೇ ಬಾರಿ ಹಾವು ಕಚ್ಚಿದ್ದರಿಂದ ಪತ್ನಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಳಿಯ ಸೂರಜ್ ವರದಕ್ಷಿಣೆಗಾಗಿ ನಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದ. ಮದುವೆಯ ಸಮಯದಲ್ಲಿ ನೀಡಿದ್ದ ಕೆಲವು ಆಭರಣಗಳು ಲಾಕರ್ ನಿಂದ ಕಾಣೆಯಾಗಿವೆ ಎಂದು ಸಹ ಪೋಷಕರು ದೂರಿದ್ದಾರೆ.
ಆರೋಪಿ ಸೂರಜ್ ಕಳೆದ ಮೂರು ತಿಂಗಳಿಂದ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ. ಮೊದಲ ಬಾರಿ ಆತನ ಸಂಚು ವಿಫಲವಾಗಿತ್ತು. ಆದರೆ ಎರಡನೇ ಬಾರಿ ಹಾವು ಕಚ್ಚಿಸಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಇದೊಂದು ವಿಚಿತ್ರ ಪ್ರಕರಣ ಎಂದು ಕೊಲ್ಲಂ ಗ್ರಾಮೀಣ ಪೊಲೀಸ್ ಠಾಣೆ ಅಧೀಕ್ಷಕ ಕೆಎಸ್.ಹರಿಶಂಕರ್ ಅವರು ಹೇಳಿದ್ದಾರೆ.
ಈ ಸಂಬಂಧ ಮೂವರು ಆರೋಪಿಗಳು ಬಂಧಿಸಿದ್ದೇವೆ. ತನಿಖೆ ನಡೆಯುತ್ತಿರುವುದರಿಂದ ಯಾವುದೇ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
Advertisement