ಕೋಲ್ಕತ್ತಾ:ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಸರ್ಕಾರದ ನಡುವೆ ವಾಗ್ಯುದ್ಧ ಮುಂದುವರಿದಿದೆ.
ಕೊರೋನಾ ವೈರಸ್ ಬಿಕ್ಕಟ್ಟನ್ನು ನಿಭಾಯಿಸುವ ವಿಚಾರದಲ್ಲಿ ಆರಂಭದಿಂದಲೂ ಟೀಕೆ ಪ್ರತಿಟೀಕೆಗಳನ್ನು ಎದುರಿಸುತ್ತಲೇ ಬಂದಿರುವ ಮಮತಾ ಬ್ಯಾನರ್ಜಿ, ಗೃಹ ಸಚಿವ ಅಮಿತ್ ಶಾ ಅವರಿಗೆ ನಮ್ಮ ಸರ್ಕಾರ ಕೊರೋನಾ ಬಿಕ್ಕಟ್ಟನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಅನ್ನಿಸುವುದಾದರೆ ಅವರೇ ಏಕೆ ಪ್ರಯತ್ನ ಮಾಡಬಾರದು. ವಲಸಿಗರನ್ನು ರೈಲಿನಲ್ಲಿ ಕರೆದುಕೊಂಡು ಬರುವ ವಿಚಾರದಲ್ಲಿ ಕೂಡ ರೈಲ್ವೆ ಸಚಿವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಮಿತ್ ಶಾ ಅವರೇ ನೀವು ಪಶ್ಚಿಮ ಬಂಗಾಳಕ್ಕೆ ಆಗಾಗ ಕೇಂದ್ರ ತಂಡವನ್ನು ಕಳುಹಿಸುತ್ತಿರುತ್ತೀರಿ. ಅದನ್ನೇ ಮುಂದುವರಿಸಿ. ಆದರೆ ನೀವು ಪಶ್ಚಿಮ ಬಂಗಾಳ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅನಿಸುವುದಾದರೆ ನೀವೇ ಏಕೆ ಮಾಡಬಾರದು, ನೀವೇ ಮಾಡಿದರೆ ನನಗೆ ಏನೂ ತೊಂದರೆಯಿಲ್ಲ, ಬೇರೆ ರಾಜ್ಯಗಳಿಂದ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ, ನಾನು ಕೊರೋನಾ ಹಬ್ಬುವುದಕ್ಕೆ ಏನು ಮಾಡಲು ಸಾಧ್ಯ, ಈ ಪರಿಸ್ಥಿತಿಯಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು ಎಂದು ನಿನ್ನೆ ಕೋಲ್ಕತ್ತಾದಲ್ಲಿ ತಿಳಿಸಿದರು.
ಕೇವಲ ಅಮಿತ್ ಶಾ ಮತ್ತು ಮಮತಾ ಬ್ಯಾನರ್ಜಿಯವರು ಪರಸ್ಪರ ದೋಷಾರೋಪ ಮಾಡಿಕೊಂಡಿದ್ದು ಮಾತ್ರವಲ್ಲದೆ ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ ಪರಸ್ಪರ ಪತ್ರಗಳನ್ನು ಬದಲಾಯಿಸಿಕೊಂಡಿದ್ದಾರೆ. ಅವುಗಳಲ್ಲಿ ಒಂದು ಪತ್ರ ಸರ್ಕಾರಕ್ಕೆ ತಲುಪುವ ಮೊದಲೇ ಮಾಧ್ಯಮಕ್ಕೆ ಸಿಕ್ಕಿ ಮಮತಾ ಬ್ಯಾನರ್ಜಿ ಸಿಟ್ಟು, ಆಕ್ರೋಶಗಳನ್ನು ಹೊರಹಾಕಿದ್ದರು.
Advertisement