ಪಾಟ್ನಾ: ಆರ್ ಜೆಡಿ ಮುಖಂಡರಾದ ತೇಜಸ್ವಿ ಯಾದವ್ ಹಾಗೂ ತೇಜ್ ಪ್ರತಾಪ್ ಚುನಾವಣಾ ಅಫಿಡವಿಟ್ ನಲ್ಲಿ ತಮ್ಮ ಆಸ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಮರೆ ಮಾಚಿದ್ದಾರೆ ಎಂದು ಆರೋಪಿಸಿರುವ ಜೆಡಿಯು, ಇಬ್ಬರು ಸಹೋದರರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಅವರಿಬ್ಬರ ವಿರುದ್ಧ ಎಫ್ ಐಆರ್ ದಾಖಲಿಸಬೇಕು ಮತ್ತು ನಾಮಪತ್ರಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದೆ.
ರಾಜ್ಯ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ನೀರಾಜ್ ಕುಮಾರ್ ನೇತೃತ್ವದ ನಿಯೋಗವೊಂದು ಮುಖ್ಯ ಚುನಾವಣಾಧಿಕಾರಿ ಹೆಚ್ ಆರ್ ಶ್ರೀನಿವಾಸ ಅವರನ್ನು ಭೇಟಿ ಮಾಡಿದ್ದು, ಮನವಿ ಪತ್ರವನ್ನು ಸಲ್ಲಿಸಿದೆ.
ತೇಜಸ್ವಿ ಯಾದವ್ ಹಾಗೂ ತೇಜ್ ಪ್ರತಾಪ್ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಇರುವ ಮಾಹಿತಿ ಬಗ್ಗೆ ಆಯೋಗದೊಂದಿಗೆ ಸಂವಹನ ನಡೆಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಭರವಸೆ ನೀಡಿರುವುದಾಗಿ ಕುಮಾರ್ ತಿಳಿಸಿದ್ದಾರೆ.
ರಂಗೊಪುರ್ ಮತ್ತು ಹಸನ್ ಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕ್ರಮವಾಗಿ ತೇಜಸ್ವಿ ಯಾದವ್ ಹಾಗೂ ತೇಜ್ ಪ್ರತಾಪ್ ವಿರುದ್ಧದ ಆರೋಪಗಳ ಬಗೆಗಿನ ಪುರಾವೆಗಳನ್ನೊಳಗೊಂಡ ಕಿರುಚಿತ್ರವೊಂದನ್ನು ಕೂಡಾ ಜೆಡಿಯು ತಂಡ ಸಲ್ಲಿಸಿದೆ.
ಆಸ್ತಿಯ ಬಗ್ಗೆ ಸಮರ್ಪಕ ಮಾಹಿತಿ ನೀಡದವರ ವಿರುದ್ಧ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ ಎ 123 (2) 125 ಎ ಅಡಿಯಲ್ಲಿ ಅಪರಾದವಾಗಿದ್ದು, ಗರಿಷ್ಠ ಆರು ತಿಂಗಳವರೆಗೂ ದಂಡ ಮತ್ತು ಸೆಕ್ಷನ್ 8 ಎಡಿಯಲ್ಲಿ ಅನರ್ಹಗೊಳಿಸಬಹುದಾಗಿದೆ ಎಂದು ಕುಮಾರ್ ಹೇಳಿದ್ದಾರೆ. ತೇಜಸ್ವಿ ಹಾಗೂ ಅವರ ಸಹೋದರ ತೇಜ್ ಪ್ರತಾಪ್ ಮಾಡಿರುವುದು ರಾಜಕೀಯ ವಂಚನೆ ಎಂದು ಜೆಡಿಯು ಮುಖಂಡ ವಾಗ್ದಾಳಿ ನಡೆಸಿದ್ದಾರೆ.
Advertisement