ನವದೆಹಲಿ: ಮುಂಬೈನಲ್ಲಿ ಶಿವಸೇನೆ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಮದನ್ ಶರ್ಮಾ ಅವರೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಮಾತನಾಡಿದ್ದಾರೆ.
ಮುಂಬೈಯಲ್ಲಿ ಗೂಂಡಾಗಳಿಂದ ಹಲ್ಲೆಗೊಳಗಾದ ನಿವೃತ್ತ ನೌಕಾಧಿಕಾರಿ ಮದನ್ ಶರ್ಮಾ ಅವರೊಂದಿಗೆ ಮಾತನಾಡಿ,ಆರೋಗ್ಯದ ಬಗ್ಗೆ ವಿಚಾರಿಸಿದ್ದೇನೆ.ಮಾಜಿ ಸೈನಿಕರ ಮೇಲಿನ ಇಂತಹ ದಾಳಿಗಳು ಖಂಡಿತ ಸ್ವೀಕಾರ್ಹವಲ್ಲಾ ಮತ್ತು ಖಂಡನೀಯ.ಮದನ್ ಜೀ ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಆಶಿಸುತ್ತೇನೆ ಎಂದು ರಾಜ್ ನಾಥ್ ಸಿಂಗ್ ಶನಿವಾರ ಟ್ವೀಟ್ ನಲ್ಲಿ ಹೇಳಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಅಪಹಾಸ್ಯ ಮಾಡುವಂತಹ ವ್ಯಂಗ್ಯಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ವಿನಿಮಯ ಮಾಡಿಕೊಂಡ ನಂತರ ಕಂಡಿವಲಿ ಪ್ರದೇಶದಲ್ಲಿ ನಿವೃತ್ತ ನೌಕಾಪಡೆಯ ಅಧಿಕಾರಿ ಮದನ್ ಶರ್ಮಾ ಮೇಲೆ ಹಲ್ಲೆ ನಡೆಸಿದ್ದ ಶಿವಸೇನೆಯ ಶಾಖಾ ಪ್ರಮುಖ್ ಸೇರಿದಂತೆ ಆರು ಜನರನ್ನು ಮುಂಬೈ ಪೊಲೀಸರು ಬಂಧಿಸಿದ್ದರು.
ಬಂಧಿಸಲ್ಪಟ್ಟ ಶಿವಸೇನೆ ಕಾರ್ಯಕರ್ತರನ್ನು ಶನಿವಾರ 5,000 ರೂ ಶ್ಯೂರಿಟಿಯೊಂದಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಸದ್ಯ, 62 ವರ್ಷದ ಮದನ್ ಶರ್ಮಾ ಅವರು ಕಣ್ಣಿನ ಗಾಯದಿಂದ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement