ನವದೆಹಲಿ: ದೇಶದಲ್ಲಿ ಕೋವಿಡ್-19 ಲಸಿಕೆಗಳಿಗೆ ಕೊರತೆಯಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರ ಸರ್ಕಾರ ತೊಂದರೆಗೀಡಾಗಿರುವ ರಾಜ್ಯಗಳಿಗೆ ಮುಂದಿನ ವಾರದೊಳಗೆ ಲಸಿಕೆ ಪೂರೈಕೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದೆ.
ದೇಶಾದ್ಯಂತ ಮಾರಕ ಕೊರೋನಾ ವೈರಸ್ ನ 2ನೇ ಭಾರಿ ಅವಾಂತರವನ್ನೇ ಸೃಷ್ಟಿ ಮಾಡುತ್ತಿದ್ದು, ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಏತನ್ಮಧ್ಯೆ ಕೋವಿಡ್ ಲಸಿಕೆಗಳ ಕೊರತೆ ಕುರಿತು ಹಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದವು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ, ದೇಶದಲ್ಲಿ ಸಾಕಷ್ಟು ಲಸಿಕೆ ದಾಸ್ತಾನಿದೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. ಹೆಚ್ಚು ತೊಂದರೆಗೀಡಾಗಿರುವ ರಾಜ್ಯಗಳಿಗೆ ಮುಂದಿನ ವಾರದ ಒಳಗಾಗಿ ಸಾಕಷ್ಟು ಲಸಿಕೆ ಪೂರೈಕೆ ಮಾಡಲಾಗುತ್ತದೆ ಎಂದು ಹೇಳಿದೆ.
ಕೋವಿಡ್ ಸೋಂಕು ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿರುವ ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಮಧ್ಯ ಪ್ರದೇಶ, ಕೇರಳ, ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿನ ಪರಿಸ್ಥಿತಿಯ ಬಗ್ಗೆ ಹರ್ಷವರ್ಧನ್ ರಾಜ್ಯ ಸಚಿವರೊಂದಿಗೆ ಪರಾಮರ್ಶೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕು 2ನೇ ಅಲೆ ವೇಳೆ ಅಗತ್ಯವಿಲ್ಲ. ಹೆಚ್ಚು ತೊಂದರೆಗೀಡಾಗಿರುವ ರಾಜ್ಯಗಳಿಗೆ ಮುಂದಿನ ವಾರದ ಒಳಗಾಗಿ ಸುಮಾರು 1.17 ಕೋಟಿ ಡೋಸ್ ಲಸಿಕೆ ಪೂರೈಸಲಾಗುವುದು. ಜತೆಗೆ, 6,300ಕ್ಕೂ ಹೆಚ್ಚು ವೆಂಟಿಲೇಟರ್ಗಳನ್ನೂ ಒದಗಿಸಲಾಗುವುದು ಎಂದೂ ಹೇಳಿದ್ದಾರೆ.
'ಈವರೆಗೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ 14.15 ಕೋಟಿ ಡೋಸ್ ಲಸಿಕೆ ಕಳುಹಿಸಿಕೊಟ್ಟಿದೆ. ಅದರಲ್ಲಿ ವ್ಯರ್ಥವಾಗಿರುವ ಲಸಿಕೆಗಳೂ ಸೇರಿ 12.57 ಕೋಟಿ ಡೋಸ್ ಲಸಿಕೆ ಬಳಸಲಾಗಿದೆ. ಇನ್ನು 1.50 ಕೋಟಿ ಡೋಸ್ ಲಸಿಕೆಗಳು ರಾಜ್ಯ ಸರ್ಕಾರಗಳ ಬಳಿ ಲಭ್ಯವಿವೆ. ಇದಲ್ಲದೆ ಇನ್ನೂ 1.17 ಕೋಟಿ ಡೋಸ್ ಲಸಿಕೆಗಳನ್ನು ಮುಂದಿನ ವಾರದ ಒಳಗೆ ಪೂರೈಸಲಾಗುವುದು. ಪ್ರತಿ ಸಣ್ಣ ರಾಜ್ಯಗಳಿಗೂ ಅವುಗಳ ಪಾಲನ್ನು 7 ದಿನಗಳಿಗೆ ಒಂದು ಬಾರಿಯಂತೆ ಕಳುಹಿಸಿಕೊಡಲಾಗುತ್ತದೆ. ದೊಡ್ಡ ರಾಜ್ಯಗಳಿಗೆ 4 ದಿನಗಳಿಗೊಮ್ಮೆ ಕಳುಹಿಸಿಕೊಡಲಾಗುತ್ತದೆ ಎಂದು ಹರ್ಷವರ್ಧನ್ ಮಾಹಿತಿ ನೀಡಿದರು.
ಅಂತೆಯೇ, 'ಎಲ್ಲ ರಾಜ್ಯಗಳು ಆಕ್ಸಿಜನ್ ಮತ್ತು ರೆಮ್ಡಿಸಿವಿರ್ ಕೊರತೆ ವಿಷಯ ಪ್ರಸ್ತಾಪಿಸಿದ್ದವು. ಇವೆರಡರ ಉತ್ತಮ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ಕ್ರಮಗಳ ಬಗ್ಗೆಯೂ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಈ ಮಧ್ಯೆ, ಮಹಾರಾಷ್ಟ್ರಕ್ಕೆ 1,121, ಉತ್ತರ ಪ್ರದೇಶಕ್ಕೆ 1,700, ಜಾರ್ಖಂಡ್ಗೆ 1,500, ಗುಜರಾತ್ಗೆ 1,600, ಮಧ್ಯ ಪ್ರದೇಶಕ್ಕೆ 152 ಹಾಗೂ ಛತ್ತೀಸ್ಗಡಕ್ಕೆ 230 ವೆಂಟಿಲೇಟರ್ಗಳನ್ನು ಪೂರೈಸುವುದಾಗಿಯೂ ಹರ್ಷವರ್ಧನ್ ಭರವಸೆ ನೀಡಿದ್ದಾರೆ.
Advertisement