ಮುಂಬೈ: ಅಮೆರಿಕಾದ ಖ್ಯಾತ ಹಾಸ್ಯ ಬರಹಗಾರ, ಲೇಖಕ ಮಾರ್ಕ್ ಟ್ವೈನ್, 'ನನ್ನ ಸಾವಿನ ವರದಿಗಳು ಬಹಳ ಉತ್ಪ್ರೇಕ್ಷೆಯಾಗಿದೆ' ಎಂದು ಹೇಳಿದ್ದರು. ಅವರ ಸಾವಿನ ಬಗ್ಗೆ ಸುಳ್ಳು ವದಂತಿ ಹಬ್ಬಿದಾಗ ಹೇಳಿದ್ದ ಮಾತುಗಳಾಗಿದ್ದವು. ಹಲವು ಮಂದಿ ಸೆಲೆಬ್ರಿಟಿಗಳು ಮೃತಪಟ್ಟರು ಎಂಬ ಸುಳ್ಳುಸುದ್ದಿ ಹಬ್ಬಿದ ಘಟನೆ ಈ ಹಿಂದೆ ನಡೆದಿವೆ.ಕೊನೆಗೆ ಅವರೇ ಸ್ಪಷ್ಟೀಕರಣ ನೀಡಿದ್ದೂ ಉಂಟು.
ಮಾಜಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಗೆ ಕೂಡ ಅಂತಹದ್ದೇ ಪ್ರಸಂಗ ಎದುರಾಗಿದೆ. ಇಂದು ಅವರೇ ನಾನು ಬದುಕಿದ್ದೇನೆ ಎಂದು ಹೇಳಿದ್ದಾರೆ.
ನಿನ್ನೆ ರಾತ್ರಿ ಕೆಲವು ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ನಿಧನಕ್ಕೆ ಸಂತಾಪ ಸೂಚಿಸಿದ್ದರು.
ಸುಮಿತ್ರಾ ಮಹಾಜನ್ ಅವರು ಇನ್ನೂ ಜೀವಂತವಾಗಿದ್ದು ಆರೋಗ್ಯವಾಗಿದ್ದಾರೆ ಎಂದು ಬಿಜೆಪಿ ಗಮನಕ್ಕೆ ತಂದ ಮೇಲೆ ಶಶಿ ತರೂರ್ ಅವರು ತಮ್ಮ ಟ್ವೀಟ್ ನ್ನು ಡಿಲೀಟ್ ಮಾಡಿದ್ದರು.
ಈ ಬಗ್ಗೆ ಆಡಿಯೊ ಮೂಲಕ ಸ್ಪಷ್ಟೀಕರಣ ನೀಡಿರುವ ಸುಮಿತ್ರಾ ಮಹಾಜನ್, ಇದಕ್ಕೆ ನಾನು ಏನು ಮಾಡಬೇಕು, ಸುದ್ದಿ ದೃಢಪಡಿಸದೆ ಕೆಲವರು ನಾನು ಮೃತಪಟ್ಟಿದ್ದೇನೆ ಎಂದು ಸುದ್ದಿ ಹಬ್ಬಿಸಿದರು. ಹಾಗೆ ಸುದ್ದಿ ಹಬ್ಬಿಸುವ ಮುನ್ನ ಇಂದೋರ್ ಜಿಲ್ಲಾಡಳಿತ ಬಳಿ ದೃಢಪಡಿಸಬೇಕಾಗಿತ್ತಲ್ಲವೇ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಮತ್ತು ಲೋಕಸಭಾಧ್ಯಕ್ಷ ಒಂ ಬಿರ್ಲಾ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕು. ಇದು ದೇಶ ಮಟ್ಟದಲ್ಲಿ ಸುದ್ದಿಯಾಗಿ ಮುಂಬೈಯಲ್ಲಿ ನನ್ನ ಸ್ನೇಹಿತರಿಂದ ಬಂಧುಗಳಿಂದ ದೂರವಾಣಿ ಕರೆ ಬರಲಾರಂಭಿಸಿದವು. ನನ್ನ ಸೋದರನ ಮಗಳು ತರೂರ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿ ಈ ಸುಳ್ಳು ಸುದ್ದಿಯನ್ನು ನಿಮಗೆ ಯಾರು ಕೊಟ್ಟರು ಎಂದು ಕೇಳಿದಳು. ಮುಂಬೈಯಲ್ಲಿರುವ ಕೆಲವು ನ್ಯೂಸ್ ಚಾನೆಲ್ ಗಳು ಕೂಡ ನನ್ನ ಸಾವಿನ ಬಗ್ಗೆ ಏಕೆ ಮತ್ತು ಹೇಗೆ ಸುಳ್ಳು ಸುದ್ದಿ ನೀಡಿದವು ಎಂದು ನನಗೆ ಅಚ್ಚರಿಯಾಗುತ್ತಿದೆ ಎಂದು ಸುಮಿತ್ರಾ ಮಹಾಜನ್ ಪ್ರಶ್ನಿಸಿದ್ದಾರೆ.
ಸತ್ಯ ವಿಷಯ ಗೊತ್ತಾದ ಬಳಿಕ ಶಶಿ ತರೂರ್ ಅವರು ಟ್ವೀಟ್ ಡಿಲೀಟ್ ಮಾಡಿ ತಮಗೆ ನಂಬಲರ್ಹ ಮೂಲಗಳಿಂದ ಸುದ್ದಿ ಬಂದಿತ್ತು, ಕ್ಷಮೆಯಿರಲಿ ಎಂದು ಸ್ಪಷ್ಟನೆ ನೀಡಿದ್ದಾರೆ.
ತಮ್ಮ ತಾಯಿ ಆರೋಗ್ಯವಾಗಿದ್ದು, ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ನಿನ್ನೆ ಸುಮಿತ್ರಾ ಮಹಾಜನ್ ಪುತ್ರ ಮಂದರ್ ನಿನ್ನೆ ವಿಡಿಯೊ ಕ್ಲಿಪ್ ವೊಂದರಲ್ಲಿ ಹೇಳಿದ್ದಾರೆ. ಇಂದೋರ್ ಲೋಕಸಭಾ ಕ್ಷೇತ್ರವನ್ನು 8 ಬಾರಿ ಪ್ರತಿನಿಧಿಸಿದ್ದ ಸುಮಿತ್ರಾ ಮಹಾಜನ್ 2014ರಿಂದ 2019ರವರೆಗೆ ಲೋಕಸಭಾಧ್ಯಕ್ಷೆಯಾಗಿದ್ದರು.
Advertisement