ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ವಿರುದ್ಧದ ಸುಲಿಗೆ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ

ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಮತ್ತು ಇತರ 27 ಜನರ ವಿರುದ್ಧದ ಸುಲಿಗೆ ಆರೋಪ ಪ್ರಕರಣದ ತನಿಖೆಗಾಗಿ ಥಾಣೆ ನಗರ ಪೊಲೀಸರು ವಿಶೇಷ ತನಿಖಾ ತಂಡವನ್ನು(ಎಸ್ಐಟಿ) ರಚಿಸಿದ್ದಾರೆ.
ಪೊಲೀಸ್ ಅಧಿಕಾರಿ ಪರಮ್ ಬೀರ್ ಸಿಂಗ್
ಪೊಲೀಸ್ ಅಧಿಕಾರಿ ಪರಮ್ ಬೀರ್ ಸಿಂಗ್

ಥಾಣೆ: ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಮತ್ತು ಇತರ 27 ಜನರ ವಿರುದ್ಧದ ಸುಲಿಗೆ ಆರೋಪ ಪ್ರಕರಣದ ತನಿಖೆಗಾಗಿ ಥಾಣೆ ನಗರ ಪೊಲೀಸರು ವಿಶೇಷ ತನಿಖಾ ತಂಡವನ್ನು(ಎಸ್ಐಟಿ) ರಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಕಳೆದ ವಾರ ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ಬಿಲ್ಡರ್ ಕೇತನ್ ತನ್ನಾ ನೀಡಿದ ದೂರಿನ ಮೇರೆಗೆ ಸಿಂಗ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಇನ್ನೂ ಯಾರನ್ನೂ ಬಂಧಿಸಿಲ್ಲ. ಎಫ್ಐಆರ್ ನಲ್ಲಿ ಹೆಸರಿಸಲಾದ ಇತರ ಆರೋಪಿಗಳಲ್ಲಿ ಪೊಲೀಸ್ ಉಪ ಆಯುಕ್ತ ದೀಪಕ್ ದೇವರಾಜ್, ಸಹಾಯಕ ಪೊಲೀಸ್ ಆಯುಕ್ತ ಎನ್ ಟಿ ಕದಮ್, ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ, ಇನ್ಸ್‌ಪೆಕ್ಟರ್ ರಾಜಕುಮಾರ ಕೊತ್ಮಿರೆ, ಜೈಲು ಸೇರಿದ ದರೋಡೆಕೋರ ರವಿ ಪೂಜಾರಿ ಮತ್ತು ನಗರ ಮೂಲದ ಪತ್ರಕರ್ತರು ಸೇರಿದ್ದಾರೆ.

ಸಿಂಗ್ ಅವರು ಥಾಣೆ ಪೊಲೀಸ್ ಆಯುಕ್ತರಾಗಿದ್ದಾಗ ಜನವರಿ 2018 ರಿಂದ ಫೆಬ್ರವರಿ 2019 ರ ನಡುವೆ ಆರೋಪಿಗಳು 25 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಮತ್ತು ಹಣ ನೀಡದಿದ್ದರೆ ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.

ಮಹಾರಾಷ್ಟ್ರದ ಅಪರಾಧ ತನಿಖಾ ಇಲಾಖೆ(ಸಿಐಡಿ) ಈಗಾಗಲೇ ಸಿಂಗ್ ವಿರುದ್ಧ ಬುಕ್ಕಿ ಸೋನು ಜಲನ್ ದಾಖಲಿಸಿದ ಮತ್ತೊಂದು ದೂರಿನ ಕುರಿತು ತನಿಖೆ ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com