ಕೆರೆಯಲ್ಲಿ ಮುಳುಗಿ ಮೊಮ್ಮಗ ಸಾವು: ಸಂತಾಪ ಸೂಚಿಸಲು ಬಂದಿದ್ದ ನೆರೆಮನೆಯವರ ಮೇಲೆ ವೃದ್ಧನಿಂದ ಗುಂಡಿನ ದಾಳಿ!
ಗ್ವಾಲಿಯರ್: ಮೊಮ್ಮಗನ ಸಾವಿಗೆ ಸಂತಾಪ ಸೂಚಿಸಲು ಬಂದಿದ್ದ ನೆರೆಮನೆಯವರ ಮೇಲೆ ವೃದ್ಧರೊಬ್ಬರು ಗುಂಡಿನ ದಾಳಿ ನಡೆಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಬಂದೋಲಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಪರ್ಮಲ್ ಸಿಂಗ್ ಪರಿಹಾರ್ (60) ಗುಂಡಿನ ದಾಳಿ ನಡೆಸಿದ ವ್ಯಕ್ತಿಯಾಗಿದ್ದಾರೆ. ಘಟನೆ ಬಳಿಕ ವ್ಯಕ್ತಿ ನಾಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಪರಿಹಾರ್ ಅವರ ಮೊಮ್ಮಗ ಸಾಹಿಲ್ ಎಂಬಾತ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದ. ಬಳಿಕ ಮೃತದೇಹವನ್ನು ಮನೆಗೆ ಕರೆತರಲಾಗಿತ್ತು. ಈ ವೇಳೆ ಸಂತಾಪ ಸೂಚಿಸಲು ನೆರೆಮನೆಯವರು ಸ್ಥಳಕ್ಕೆ ಬಂದಿದ್ದಾರೆ. ನೆರೆಮನೆಯವರನ್ನು ಮೊದಲಿನಿಂದಲೂ ಶತ್ರುಗಳಂತೆ ಕಾಣುತ್ತಿದ್ದ ಪರಿಹಾರ್ ಅವರು, ಮನೆ ಬಳಿಯೇ ಬಂದ ಹಿನ್ನೆಲೆಯಲ್ಲಿ ತೀವ್ರವಾಗಿ ಕೆಂಡಾಮಂಡಲಗೊಂಡು ತಮ್ಮ ರೂಮಿಗೆ ತೆರಳಿ, ಪರವಾನಗಿ ಹೊಂದಿದ್ದ ಗನ್ ತೆಗೆದುಕೊಂಡು ಬಂದು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.
ಘಟನೆಯಲ್ಲಿ ಅಜ್ಮೇರ್ ಸಿಂಗ್, ಕಲ್ಲು ಸಿಂಗ್, ರಾಜೇಂದ್ರ, ಅಶೋಕ್, ದೇವೇಂದ್ರ ಮತ್ತು ವೀರೇಂದ್ರ ಸಿಂಗ್ ಎಂಬುವವರು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಗ್ವಾಲಿಯರ್ ನಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇದೀಗ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪರಿಹಾರ್ ಮೊಮ್ಮಗನ ಮೃತದೇಹವನ್ನು ಇದೀಗ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.