ನವದೆಹಲಿ: ಅಫ್ಘಾನಿಸ್ತಾನದ ಕಾಬೂಲ್ ನಿಂದ ಭಾನುವಾರ ಬೆಳ್ಳಂಬೆಳಗ್ಗೆ ಹೊರಟ ಭಾರತೀಯ ವಾಯುಪಡೆಯ ಸಿ-17 ವಿಮಾನ 107 ಮಂದಿ ಭಾರತೀಯರು ಸೇರಿದಂತೆ 168 ಮಂದಿಯನ್ನು ಹೊತ್ತು ಗಾಜಿಯಾಬಾದ್ನ ಹಿಂಡನ್ ವಾಯುನೆಲೆಯಲ್ಲಿ ಬಂದು ನಿಂತಿತು.
ಕೋವಿಡ್-19 ಹಿನ್ನೆಲೆಯಲ್ಲಿ ಆರ್ ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯವಾಗಿರುವುದರಿಂದ ಒಬ್ಬೊಬ್ಬರಾಗಿಯೇ ಪರೀಕ್ಷೆ ಮಾಡಿಸಿಕೊಂಡು ವಿಮಾನ ನಿಲ್ದಾಣದಿಂದ ಹೊರಬರಲು ಸ್ವಲ್ಪ ಸಮಯ ಹಿಡಿಯುತ್ತಿದೆ.
ಭಾರತ ನೆಲಕ್ಕೆ ಬಂದಿಳಿಯುತ್ತಿದ್ದಂತೆ ಹಲವರು ಆನಂದಪರವಶರಾದರು. ಭಾವುಕರಾಗಿ ಕಣ್ಣೀರು ಹರಿಸಿದರು. ಅಫ್ಘಾನಿಸ್ತಾನದ ಸಂಸದ ನರೇಂದರ್ ಸಿಂಗ್ ಖಲ್ಸ ಕಾಬುಲ್ ನಿಂದ ಇಂದು ಬೆಳಗ್ಗೆ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ಕಣ್ಣೀರು ಹಾಕಿದರು.
ನನಗೆ ನಿಜಕ್ಕೂ ದುಃಖವಾಗುತ್ತಿದೆ. ಕಳೆದ 20 ವರ್ಷಗಳಲ್ಲಿ ಕಟ್ಟಿದ್ದೆಲ್ಲವೂ ಇಂದು ನಾಶವಾಗಿದೆ. ನಿಜಕ್ಕೂ ಇಂದು ನಾವು ಶೂನ್ಯರಾಗಿದ್ದು ಎಲ್ಲ ಕಳೆದುಕೊಂಡಿದ್ದೇವೆ ಎಂದು ಕಣ್ಣೀರು ಹಾಕಿದರು.
ಮತ್ತೊಬ್ಬ ಅಫ್ಘನ್ ಮಹಿಳೆ, ಅಲ್ಲಿ ಪರಿಸ್ಥಿತಿ ಹದಗೆಡುತ್ತಿದೆ. ಹಾಗಾಗಿ ನಾನಿಲ್ಲಿಗೆ ನನ್ನ ಮಗಳು ಮತ್ತು ಇಬ್ಬರು ಮೊಮ್ಮಕ್ಕಳೊಂದಿಗೆ ಬಂದಿದ್ದೇನೆ. ನಮ್ಮ ಭಾರತೀಯ ಸೋದರ, ಸೋದರಿಯರು ನಮ್ಮ ರಕ್ಷಣೆಗೆ ನಿಂತಿದ್ದಾರೆ. ತಾಲಿಬಾನಿಯರು ನನ್ನ ಮನೆಯನ್ನು ಸುಟ್ಟುಹಾಕಿದ್ದಾರೆ. ಭಾರತ ಸರ್ಕಾರಕ್ಕೆ ನಮ್ಮನ್ನು ರಕ್ಷಿಸಿದ್ದಕ್ಕೆ ವಂದನೆಗಳು ಎಂದರು.
ಅಫ್ಘಾನಿಸ್ತಾನದ ಕಾಬೂಲ್ನಿಂದ ಸ್ಥಳಾಂತರಗೊಂಡ ಜನರು ತಮ್ಮ ಆರ್ಟಿಪಿಸಿಆರ್ ಪರೀಕ್ಷೆಗಳಿಗಾಗಿ ಗಾಜಿಯಾಬಾದ್ನ ಹಿಂಡನ್ ವಾಯುಪಡೆ ನಿಲ್ದಾಣದಲ್ಲಿ ಕಾಯುತ್ತಿದ್ದಾರೆ.
ಉಚಿತ ಪೋಲಿಯೊ ಲಸಿಕೆ: ಪೋಲಿಯೊ ವೈರಸ್ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಅಫ್ಘಾನಿಸ್ತಾನದಿಂದ ಮರಳಿದವರಿಗೆ ಉಚಿತ ಪೋಲಿಯೋ ಲಸಿಕೆ - ಒಪಿವಿ ಮತ್ತು ಎಫ್ಐಪಿವಿ ಲಸಿಕೆ ಹಾಕಲು ನಾವು ನಿರ್ಧರಿಸಿದ್ದು, ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.
Advertisement