ಗಡಿ ಒಪ್ಪಂದವನ್ನು ಚೀನಾ ಪಾಲಿಸದಿರುವುದೇ ಭಾರತದ ಜೊತೆಗಿನ ಸಂಬಂಧ ಹದಗೆಡಲು ಕಾರಣ: ವಿದೇಶಾಂಗ ಸಚಿವ ಎಸ್ ಜೈಶಂಕರ್
ನವದೆಹಲಿ: ಒಪ್ಪಂದಗಳನ್ನು ಪಾಲಿಸದಿರುವುದರಿಂದ ಭಾರತ-ಚೀನಾ ಸಂಬಂಧಗಳ ಅಡಿಪಾಯಕ್ಕೆ ಭಂಗವುಂಟಾಗುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ 40 ವರ್ಷಗಳಿಂದ ಚೀನಾ ಜೊತೆಗೆ ಭಾರತದ ಸಂಬಂಧ ಸ್ಥಿರವಾಗಿತ್ತು. ಚೀನಾ ದೇಶವು ಭಾರತದ ಎರಡನೇ ಅತಿದೊಡ್ಡ ವ್ಯಾಪಾರ-ವಹಿವಾಟು ಸದಸ್ಯ ರಾಷ್ಟ್ರವಾಗಿ ಹೊರಹೊಮ್ಮಿದೆ. ಆದರೆ ಕಳೆದೊಂದು ವರ್ಷದಿಂದ ಭಾರತ-ಚೀನಾ ನಡುವಿನ ಸಂಬಂಧ ತೀವ್ರ ಹದಗೆಟ್ಟಿದ್ದು ಇದಕ್ಕೆ ಗಡಿಯ ವಿಚಾರದಲ್ಲಿ ಮಾಡಿಕೊಂಡ ಒಪ್ಪಂದದಂತೆ ಚೀನಾ ನಡೆದುಕೊಳ್ಳದಿರುವುದೇ ಕಾರಣವಾಗಿದೆ ಎಂದಿದ್ದಾರೆ. ವಿದೇಶಾಂಗ ಸಚಿವ ಜೈಶಂಕರ್ ಅವರು ಮಾಸ್ಕೊದಲ್ಲಿ ನಿನ್ನೆ ವಿಶ್ವ ಆರ್ಥಿಕತೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ಕುರಿತ ಉಪನ್ಯಾಸ ವೇಳೆ ಕೇಳಲಾದ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ.
ಮಾಸ್ಕೊಗೆ ಮೂರು ದಿನಗಳ ಪ್ರವಾಸಕ್ಕೆ ಆಗಮಿಸಿರುವ ಅವರು ಅಲ್ಲಿನ ವಿದೇಶಾಂಗ ಸಚಿವ ಸರ್ಜಿ ಲವ್ರೊವ್ ಜೊತೆ ದ್ವಿಪಕ್ಷೀಯ ಸಂಬಂಧ ಕುರಿತು ಮಾತುಕತೆ ನಡೆಸುವ ಸಾಧ್ಯತೆಯಿದೆ. ಅಮೆರಿಕ ತನ್ನ ಸೇನಾಪಡೆಯನ್ನು ಹಿಂತೆಗೆದುಕೊಂಡ ನಂತರ ಆಫ್ಘಾನಿಸ್ತಾನ ಜೊತೆಗೆ ಸಂಬಂಧ ಹದಗೆಟ್ಟಿರುವ ಬಗ್ಗೆ ಉಭಯ ನಾಯಕರು ಮಾತುಕತೆ ನಡೆಸುವ ಸಾಧ್ಯತೆಯಿದೆ.
ಎರಡೂ ದೇಶಗಳ ಮಧ್ಯೆ ಪರಮಾಣು ತಯಾರಿಕೆಯಲ್ಲಿ ಸ್ಪರ್ಧೆಯೇರ್ಪಟ್ಟಿದೆಯೇ ಎಂದು ಕೇಳಿದ್ದಕ್ಕೆ ಚೀನಾದ ಪರಮಾಣು ಕಾರ್ಯಕ್ರಮದ ವಿಕಸನವು ಭಾರತಕ್ಕಿಂತ ದೊಡ್ಡದಾಗಿದೆ, ಎರಡು ದೇಶಗಳ ಮಧ್ಯೆ ಪರಮಾಣು ಸ್ಪರ್ಧೆಯಿದೆ ಎಂದು ನನಗೆ ಅನಿಸುತ್ತಿಲ್ಲ.ಚೀನಾ ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರವಾಗಿ 1964ರಲ್ಲಿಯೇ ಹೊರಹೊಮ್ಮಿತ್ತು, ಭಾರತ ಪರಮಾಣು ಶಕ್ತಿ ರಾಷ್ಟ್ರವಾಗಿದ್ದು 1998ರಲ್ಲಿ ಎಂದರು.
ಎರಡನೆಯ ಮಹಾಯುದ್ಧದ ನಂತರ ಉಭಯ ದೇಶಗಳ ನಡುವಿನ ಸಂಬಂಧವು ವಿಶ್ವದ ಪ್ರಮುಖ ಸಂಬಂಧಗಳಲ್ಲಿ ಸ್ಥಿರವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. "ರಷ್ಯನ್ನರು ಖಂಡಿತವಾಗಿಯೂ ಯುನೈಟೆಡ್ ಸ್ಟೇಟ್ಸ್, ಯುರೋಪ್, ಚೀನಾ, ಜಪಾನ್, ಟರ್ಕಿ ಮತ್ತು ಇರಾನ್ ಜೊತೆಗಿನ ಸಂಬಂಧಗಳಲ್ಲಿನ ಏರಿಳಿತವನ್ನು ನೆನಪಿಸಿಕೊಳ್ಳುತ್ತಾರೆ ಎಂದು ರಷ್ಯಾ ಜೊತೆಗಿನ ಸಂಬಂಧದ ಬಗ್ಗೆ ಜೈಶಂಕರ್ ವ್ಯಾಖ್ಯಾನ ನೀಡಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ