ತ್ರಿಸ್ಸೂರ್: ಕೊಡಕಾರ ಹವಾಲಾ ದರೋಡೆ ಪ್ರಕರಣದಲ್ಲಿ ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಅವರನ್ನು ವಿಶೇಷ ತನಿಖಾ ತಂಡ ವಿಚಾರಣೆಗೊಳಪಡಿಸಿದೆ.
ತ್ರಿಸ್ಸೂರು ವಲಯದ ಡಿಐಜಿ ಎ ಅಕ್ಬರ್ ನೇತೃತ್ವದ ತಂಡ ಸುರೇಂದ್ರನ್ ಅವರನ್ನು ವಿಚಾರಣೆಗೊಳಪಡಿಸಿದೆ. ಜುಲೈ 6 ರಂದು ಹಾಜರಾಗುವಂತೆ ಸುರೇಂದ್ರನ್ ಅವರಿಗೆ ನೋಟಿಸ್ ನೀಡಲಾಗಿತ್ತು, ಆದರೆ ಪಕ್ಷದ ಸಭೆಗಳಿದ್ದ ಕಾರಣ ಒಂದು ವಾರ ಸಮಯ ಕೋರಿದ್ದರು. ಹೀಗಾಗಿ ಬುಧವಾರ ಬೆಳಗ್ಗೆ 10.30ಕ್ಕೆ ತ್ರಿಸ್ಸೂರು ಪೊಲೀಸ್ ಕ್ಲಬ್ ನಲ್ಲಿ ಸುರೇಂದ್ರನ್ ಹಾಜರಾಗಿದ್ದರು.
ತ್ರಿಶೂರ್ನ ಹೊರವಲಯದಲ್ಲಿರುವ ಕೊಡಕರದಲ್ಲಿ ನಡೆದ ಹವಾಲಾ ಹಣ ದರೋಡೆ ಪ್ರಕರಣದ ವಹಿವಾಟಿನೊಂದಿಗೆ ತನಗೂ ತಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸುರೇಂದ್ರನ್ ತಮ್ಮ ಹೇಳಿಕೆಯನ್ನು ಪುನರಾವರ್ತಿಸಿದರು.
ಸುಮಾರು 1 ಗಂಟೆಗಳ ಕಾಲ ವಿಚಾರಣೆ ನಡೆಯಿತು. ಇದೇ ಮೊದಲ ಬಾರಿಗೆ ನಮ್ಮ ರಾಜ್ಯದ ಪೊಲೀಸರು ದೂರವಾಣಿ ಕರೆ ಮೂಲಕ ಬಂದ ದೂರಿನ ಆಧಾರದ ಮೇಲೆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಸುರೇಂದ್ರನ್ ತಿಳಿಸಿದ್ದಾರೆ.
ಆರ್ಎಸ್ಎಸ್ ಕಾರ್ಯಕರ್ತ ಧರ್ಮರಾಜನ್ ಅವರ ಹೇಳಿಕೆಗಳ ಆಧಾರದ ಮೇಲೆ ತನಿಖಾ ತಂಡದ ಮುಂದೆ ಹಾಜರಾಗುವಂತೆ ಸುರೇಂದ್ರನ್ ಅವರಿಗೆ ನೋಟಿಸ್ ನೀಡಲಾಗಿತ್ತು. ಅವರ ಚಾಲಕ ಶಮ್ಜೀರ್ ಈ ಪ್ರಕರಣದಲ್ಲಿ ದೂರುದಾರರಾಗಿದ್ದಾರೆ.
ಧರ್ಮರಾಜನ್ ಏಪ್ರಿಲ್ 3 ರಂದು ಕೋಜಿಕ್ಕೋಡ್ ನಿಂದ ಕೊಚ್ಚಿಗೆ ಹಣವನ್ನು ಕೊಂಡೊಯ್ಯುತ್ತಿದ್ದರು. ಕೊಡಕಾರ ಪ್ರದೇಶದಲ್ಲಿ ಧರ್ಮರಾಜನ್ ಅವರ ವಾಹನವನ್ನು ಲೂಟಿ ಮಾಡಿದ ತಂಡವೊಂದು 25 ಲಕ್ಷ ಹಣ ದರೋಡೆ ಮಾಡಲಾಗಿತ್ತು.
ಸುಮಾರು ಮೂರುವರೆ ಕೋಟಿ ರು ಹಣವನ್ನು ಕೊಂಡೊಯ್ಯಲಾಗುತಿತ್ತು ಎಂದು ಹೆಚ್ಚಿನ ತನಿಖೆಯಲ್ಲಿ ತಿಳಿದು ಬಂದಿದೆ. ರಾಷ್ಟ್ರೀಯ ಪಕ್ಷದ ಚುನಾವಣಾ ಪ್ರಚಾರಕ್ಕಾಗಿ ಈ ಹಣವನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಎರಡು ಕೋಟಿ ರು. ಹಣವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
Advertisement