ಪುಲ್ವಾಮ ಎನ್ ಕೌಂಟರ್: ಉಗ್ರ ಮಸೂದ್ ಅಜರ್ ಸಂಬಂಧಿ ಸೇರಿ ಇಬ್ಬರು ಜೈಷ್ ಉಗ್ರರು ಹತ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನಾಪಡೆ ನಡೆಸಿದ ಎನ್ಕೌಂಟರ್ ನಲ್ಲಿ ಉಗ್ರ ಮಸೂದ್ ಅಜರ್ ಸಂಬಂಧಿ ಸೇರಿ ಇಬ್ಬರು ಜೈಷ್ ಉಗ್ರರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.
ಸೇನಾ ಎನ್ ಕೌಂಟರ್
ಸೇನಾ ಎನ್ ಕೌಂಟರ್
Updated on

ಪುಲ್ವಾಮ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನಾಪಡೆ ನಡೆಸಿದ ಎನ್ಕೌಂಟರ್ ನಲ್ಲಿ ಉಗ್ರ ಮಸೂದ್ ಅಜರ್ ಸಂಬಂಧಿ ಸೇರಿ ಇಬ್ಬರು ಜೈಷ್ ಉಗ್ರರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.

ಪುಲ್ವಾಮದ ನಾಗ್ಬೆರನ್-ಟಾರ್ಸಾರ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಮಾಹಿತಿ ತಿಳಿದುಬರುತ್ತಿದ್ದಂತೆಯೇ ಸೇನಾಪಡೆ ಸ್ಥಳದಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಸೇನಾಪಡೆಗಳು ಕಾರ್ಯಾಚರಣೆ ಆರಂಭಿಸುತ್ತಿದ್ದಂತೆಯೇ ಅಡಗಿ ಕುಳಿತಿದ್ದ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದಾರೆ.  ಕೂಡಲೇ ಸ್ಥಳದಲ್ಲಿ ಎನ್ಕೌಂಟರ್ ಆರಂಭಿಸಿದ ಸೇನಾಪಡೆ ಇದೀಗ ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ. ಬಳಿಕ ಮೃತ ಉಗ್ರರ ಬಳಿ ಇದ್ದ ಎಕೆ 47 ಬಂದೂಕು, ಬುಲೆಟ್ ಕಾರ್ಟ್ರಿಡ್ಜ್ ಮತ್ತು ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ. 

ಉಗ್ರ ಮಸೂದ್ ಅಜರ್ ಸಂಬಂಧಿ ಸೇರಿ ಇಬ್ಬರು ಜೈಷ್ ಉಗ್ರರು ಹತ
ಇನ್ನು ಈ ಎನ್ ಕೌಂಟರ್ ನಲ್ಲಿ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಕುಟುಂಬಕ್ಕೆ ಸೇರಿದಂತೆ ಇಬ್ಬರು ಜೈಶ್ ಉಗ್ರರನ್ನು ಹೊಡೆದುರುಳಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಐಜಿ (ಕಾಶ್ಮೀರ ರೇಂಜ್) ವಿಜಯ್ ಕುಮಾರ್, 'ಭದ್ರತಾ ಪಡೆಗಳು ಇಂದು ಬೆಳಗ್ಗೆ ನಮೀಬಿಯಾನ್ ಮತ್ತು ಮಾರ್ಸರ್ ಅರಣ್ಯ ಪ್ರದೇಶದಲ್ಲಿ ಮತ್ತು ದಾಚಿಗಾಂನ ಸಾಮಾನ್ಯ ಪ್ರದೇಶದಲ್ಲಿ ಉಗ್ರರ ಅಡಗುತಾಣದ ಬಗ್ಗೆ ಮಾಹಿತಿ ಪಡೆದ ನಂತರ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ  ಸೇನಾ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಮೃತ ಉಗ್ರರ ಪೈಕಿ ಓರ್ವ ಉಗ್ರ  ಜೈಶ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸಂಬಂಧಿ ಎಂದು ತಿಳಿದುಬಂದಿದೆ. ಆತನನ್ನು ಮೊಹಮ್ಮದ್ ಇಸ್ಮಲ್ ಅಲ್ವಿ ಅಲಿಯಾಸ್ ಲಂಬೂ ಅಲಿಯಾಸ್ ಅದ್ನಾನ್ ಎಂದು ಗುರುತಿಸಲಾಗಿದ್ದು,  ಮತ್ತೋರ್ವ ಉಗ್ರ ಪಾಕಿಸ್ತಾನ ಮೂಲದವನು ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ.

ಅಂತೆಯೇ ಎನ್ಕೌಂಟರ್ ನಲ್ಲಿ ಹತನಾದ ಲಂಬೂ, ಜೈಶ್-ಎ-ಮೊಹಮ್ಮದ್ (ಜೆಇಎಂ) ಎಂಬ ನಿಷೇಧಿತ ಭಯೋತ್ಪಾದಕ ಸಂಘಟನೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದ. ಮೃತ ಉಗ್ರರಿಬ್ಬರೂ ಲೆಥ್‌ಪೊರಾ ಪುಲ್ವಾಮಾ ದಾಳಿಯ ಸಂಚಿನಲ್ಲಿ ಭಾಗಿಯಾಗಿದ್ದರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)  ತಯಾರಿಸಿದ ಚಾರ್ಜ್ ಶೀಟ್‌ನಲ್ಲಿ ಇವರು ಹೆಸರಿತ್ತು. 

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆತ್‌ಪೋರಾದಲ್ಲಿರುವ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಫೆಬ್ರವರಿ 14, 2019 ರಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಬೆಂಗಾವಲು ವಾಹನಗಳಿಗೆ  ಆತ್ಮಾಹುತಿ ಬಾಂಬರ್ ಸ್ಫೋಟಕ ತುಂಬಿದ ವಾಹನವನ್ನು ಸ್ಫೋಟಿಸಲಾಗಿತ್ತು.  ಅಂದು 40 ಸಿಆರ್‌ಪಿಎಫ್ ಸಿಬ್ಬಂದಿ ಸಾವನ್ನಪ್ಪಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com