ಕೊರೋನಾ ಲಾಕ್ಡೌನ್ ಅಂತ್ಯ ಜನರ ಕೈಯಲ್ಲೇ ಇದೆ: ತಮಿಳುನಾಡು ಸಿಎಂ ಸ್ಟಾಲಿನ್

ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ನಿಗ್ರಹಿಸಲು ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸುವುದನ್ನು ಹೊರತುಪಡಿಸಿ ಬೇರಾವುದೇ ಮಾರ್ಗವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮಂಗಳವಾರ ಹೇಳಿದ್ದಾರೆ. 
ತಮಿಳುನಾಡು ಸಿಎಂ ಸ್ಟಾಲಿನ್
ತಮಿಳುನಾಡು ಸಿಎಂ ಸ್ಟಾಲಿನ್

ಚೆನ್ನೈ: ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ನಿಗ್ರಹಿಸಲು ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸುವುದನ್ನು ಹೊರತುಪಡಿಸಿ ಬೇರಾವುದೇ ಮಾರ್ಗವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮಂಗಳವಾರ ಹೇಳಿದ್ದಾರೆ. 

ಜನರನ್ನುದ್ದೇಶಿಸಿ ಮಾತನಾಡಿ ವಿಡಿಯೋ ಬಿಡುಗಡೆ ಮಾಡಿರುವ ಸ್ಟಾಲಿನ್ ಅವರು, ಲಾಕ್ಡೌನ್ ನಿಂದಾಗಿ ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಆದರೆ, ಇದನ್ನು ಹೆಚ್ಚಿನ ಸಮಯ ವಿಸ್ತರಿಸಲು ಸಾಧ್ಯವಿಲ್ಲ. ಇದಕ್ಕೆ ಪೂರ್ಣ ವಿರಾಮ ಹಾಕಲೇಬೇಕಿದೆ. ಆದರೆ, ಇದರ ಸಾಧ್ಯತೆಗಳು ಜನರ ಕೈಯಲ್ಲೇ ಇದೆ ಎಂದು ಹೇಳಿದ್ದಾರೆ. 

ಸರ್ಕಾರ ಮಾರ್ಗಸೂಚಿಗಳನ್ನು ಜನರು ಕಟ್ಟುನಿಟ್ಟಾಗಿ ಪಾಟನೆ ಮಾಡಿದ್ದೇ ಆದರೆ, ಕೊರೋನಾ ಸೋಂಕಿಗೆ ಪೂರ್ಣ ವಿರಾಮ ಹಾಕಬಹುದಾಗಿದೆ. ಸೋಂಕು ಹರಡುವುದನ್ನು ನಿಲ್ಲಿಸಿದ್ದೇ ಆದರೆ, ಕೊರೋನಾವನ್ನೂ ನಿಗ್ರಹಿಸಬಹುದು. ಲಾಕ್ಡೌನ್ ಉತ್ತಮ ಪ್ರಯೋಜನವನ್ನು ನೀಡು್ತತಿದೆ. ಚೆನ್ನೈನಲ್ಲಿ ಈ ಹಿಂದೆ ಪ್ರತೀನಿತ್ಯ 7,000 ಪ್ರಕರಣಗಳು ಪತ್ತೆಯಾಗುತ್ತಿದ್ದವು. ಕೆಲವೇ ದಿನಗಳಲ್ಲಿ ಈ ಸಂಖ್ಯೆ 2,000ಕ್ಕೆ ಇಳಿದಿದೆ. ಇದನ್ನೂ ಪೂರ್ಣಪ್ರಮಾಣದಲ್ಲಿ ಇಳಿಸಬಹುದು. ಕೊಯಮತ್ತೂರು ಸೇರಿದಂತೆ ಪಶ್ಚಿಮ ವಲಯದಲ್ಲಿ, ಕಳೆದ ವಾರದಲ್ಲಿ ಸೋಂಕು ಅಧಿಕವಾಗಿತ್ತು ಆದರೆ ಎರಡು ದಿನಗಳಿಂದ ಸೋಂಕು ಕಡಿಮೆಯಾಗಲು ಆರಂಭವಾಗಿದೆ. ಸಂಪೂರ್ಣ ಲಾಕ್ಡೌನ್ ಹೊರತುಪಡಿಸಿ ನಮಗೆ ಬೇರೆ ದಾರಿಯಿಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ. 

ಸರ್ಕಾರ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿದೆ, ತರಕಾರಿ, ಅಗತ್ಯ ವಸ್ತುಗಳ ಅಂಗಡಿಗಳು ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಬಡವರಿಗೆ ಶೀಘ್ರದಲ್ಲೇ ಸರ್ಕಾರ ಕೊರೋನಾ ಪರಿಹಾರ ಕಿಟ್ ನೀಡಲಿದೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಹಾಸಿಗೆ ಕೊರತೆ ಹಾಗೂ ವೈದ್ಯಕೀಯ ಆಕ್ಸಿಜನ್ ಕುರಿತು ತೆಗೆದುಕೊಂಡ ಶೀಘ್ರಗತಿಯ ಕ್ರಮಗಳ ಕುರಿತು ಮಾತನಾಡಿದ ಅವರು, ಸಾಕಷ್ಟು ಆಸ್ಪತ್ರೆಗಳಲ್ಲಿ ಇದೀಗ ಹಾಸಿಗೆಗಳ ಕೊರತೆಯಿಲ್ಲ. ಪ್ರತೀನಿತ್ಯ ಮೂರು ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗುತ್ತದೆ. ಇಷ್ಟು ವೇಗದಲ್ಲಿ ಲಸಿಕೆಯನ್ನು ದೇಶದ ಯಾವುದೇ ರಾಜ್ಯವೂ ನೀಡುತ್ತಿಲ್ಲ. ಇದಲ್ಲದೆ, ರಾಜ್ಯದಲ್ಲಿ ಪ್ರತೀನಿತ್ಯ 1.70 ಲಕ್ಷಕ್ಕೂ ಹೆಚ್ಚು ಕೊರೋನಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಯಾವುದೇ ರಾಜ್ಯವೂ ಪರೀಕ್ಷೆಗಳನ್ನು ನಡೆಸುತ್ತಿಲ್ಲ ಎಂದಿದ್ದಾರೆ. 

ಇದೇ ವೇಳೆ ಕೊಯಿಮತ್ತೂರಿನ ಇಎಸ್ಐ ಆಸ್ಪತ್ರೆಯ ಕೋವಿಡ್ ವಾರ್ಡ್'ಗೆ ಭೇಟಿ ನೀಡಿದ್ದರ ಕುರಿತು ಮಾತನಾಡಿರವ ಅವರು, ಕೋವಿಡ್ ವಾರ್ಡ್'ಗೆ ಭೇಟಿ ನೀಡಿದ್ದನ್ನು ಹಲವರು ಶ್ಲಾಘಿಸಿದ್ದಾರೆ. ಕೆಲವರು ಸೋಂಕಿನಿಂದ ಮೊದಲು ನನ್ನನ್ನು ರಕ್ಷಿಸಿಕೊಳ್ಳುವಂತೆ ಕಿಚಾಯಿಸಿದ್ದಾರೆ. ತಮಿಳುನಾಡು ಜನರನ್ನು ರಕ್ಷಿಸಲು ನನ್ನನ್ನು ನಾನೇ ಸಮರ್ಪಿಸಿಕೊಂಡಿದ್ದೇನೆಂದು ಹೇಳಿದ್ದಾರೆ. 

ಕೊರೋನಾ ವಾರ್ಡ್'ಗೆ ಭೇಟಿ ನೀಡಿದ್ದಕ್ಕೆ ನನ್ನ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ತೋರಿದವರಿಗೆ ಇದೇ ನನ್ನ ಉತ್ತರವಾಗಿದೆ. ಸೋಂಕು ನಿಗ್ರಹಿಸಲು ಮುಂಜಾಗ್ರತೆ ವಹಿಸಬೇಕೆಂಬುದನ್ನು ಪ್ರತೀಯೊಬ್ಬರೂ ತಿಳಿಯಬೇಕು. ಕೊರೋನಾ ಮೊದಲ ಅಲೆ ತಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇದೀಗ ನಾವು ಎರಡನೇ ಅಲೆಯನ್ನು ಎದುರಿಸುತ್ತಿದ್ದೇವೆ. ವಿವಿಧ ಇಲಾಖೆಗಳಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲು ನಾವು ಪ್ರಸ್ತುತ ಎದುರಾಗಿರುವ ಬಿಕ್ಕಟ್ಟಿನಿಂದ ಹೊರಬರಲೇಬೇಕಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com