ಕೊಲ್ಕತ್ತಾ: ಟ್ವಿಟರ್ ನಿಯಂತ್ರಿಸುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಯತ್ನದ ವಿರುದ್ಧ ಗುರುವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ. ಮೈಕ್ರೊಬ್ಲಾಗ್ಗಿಂಗ್ ವೇದಿಕೆ ಮೇಲೆ ಪ್ರಭಾವ ಬೀರುವಲ್ಲಿ ವಿಫಲವಾಗಿ, ಇದೀಗ ಅದನ್ನು ನಾಶಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರದಿಂದ ತನ್ನ ಸರ್ಕಾರ ಕೂಡಾ ಅದೇ ರೀತಿಯ ಬೆದರಿಕೆ ಎದುರಿಸುತ್ತಿದೆ. ಅದನ್ನು ನಾನು ಖಂಡಿಸುತ್ತೇನೆ, ಟ್ವಿಟರ್ ನ್ನು ನಿಯಂತ್ರಿಸಲು ಅವರಿಗೆ ಸಾಧ್ಯವಿಲ್ಲ, ಆದ್ದರಿಂದ ಅದನ್ನು ನಾಶಪಡಿಸಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಬಗ್ಗದ ಪ್ರತಿಯೊಬ್ಬರನ್ನು ನಿಯಂತ್ರಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಅವರನ್ನು ನನನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದ್ದರಿಂದ ನನ್ನ ಸರ್ಕಾರವನ್ನು ಕೂಡಾ ನಾಶಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಐಟಿ ಕಾನೂನುಗಳನ್ನು ಪಾಲಿಸದ ಟ್ವಿಟರ್, ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕಡ್ಡಾಯವಾಗಿ ಪ್ರಮುಖ ನೇಮಕದಲ್ಲೂ ವಿಫಲವಾಗಿರುವುದರಿಂದ ದೇಶದಲ್ಲಿ ಕಾನೂನು ವಿನಾಯಿತಿಯನ್ನು ಕಳೆದುಕೊಂಡಿದೆ. ಮೂರನೇ ವ್ಯಕ್ತಿಯ ಕಾನೂನುಬಾಹಿರ ವಿಷಯಕ್ಕಾಗಿ ಭಾರತೀಯ ದಂಡ ಸಂಹಿತೆಯಡಿ ಕ್ರಮ ಕೈಗೊಳ್ಳಲು ಈಗ ಅದು ಜವಾಬ್ದಾರವಾಗಿರುತ್ತದೆ.
ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ ಮುಂದುವರೆದಿದೆ ಎಂದು ಬಿಜೆಪಿ ಆರೋಪಿಸುತ್ತಿದ್ದರೆ, ಅದು ಕೇಸರಿ ಪಕ್ಷದ ಗಿಮ್ಮಿಕ್, ಇದು ಸಂಪೂರ್ಣವಾಗಿ ಆಧಾರ ರಹಿತವಾದದ್ದು, ರಾಜ್ಯದಲ್ಲಿ ಇದೀಗ ಯಾವುದೇ ರಾಜಕೀಯ ಹಿಂಸಾಚಾರ ನಡೆಯುತ್ತಿಲ್ಲ, ಒಂದೆರಡು ಸಣ್ಣಪುಟ್ಟ ಘಟನೆಗಳು ನಡೆಯುತ್ತಿರಬಹುದು ಆದರೆ, ಅವುಗಳಿಗೆ ರಾಜಕೀಯ ಹಿಂಸಾಚಾರವೆಂದು ಹಣೆಪಟ್ಟಿ ಕಟ್ಟಬಾರದು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
Advertisement