ಮಿಕ್ಸೋಪತಿ ವಿರುದ್ಧ ಐಎಂಎ ತಿರುಪತಿಯಲ್ಲಿ ಪ್ರತಿಭಟನೆ (ಸಂಗ್ರಹ ಚಿತ್ರ)
ಮಿಕ್ಸೋಪತಿ ವಿರುದ್ಧ ಐಎಂಎ ತಿರುಪತಿಯಲ್ಲಿ ಪ್ರತಿಭಟನೆ (ಸಂಗ್ರಹ ಚಿತ್ರ)

ಉತ್ತರಾಖಂಡ್ ನಲ್ಲಿ ಮಿಕ್ಸೋಪತಿಗೆ ಐಎಂಎ ತೀವ್ರ ವಿರೋಧ: ಏನಿದು ಮಿಕ್ಸೋಪತಿ?

ಉತ್ತರಾಖಂಡ್ ನ ಆಯುಷ್ ಸಚಿವ ಹರಕ್ ಸಿಂಗ್ ರಾವತ್ ಅವರು ಆಯುರ್ವೇದದ ವೈದ್ಯರು ರೋಗಿಗಳಿಗೆ ತುರ್ತು ಪರಿಸ್ಥಿತಿಗಳಲ್ಲಿ ಅಲೋಪತಿ ಔಷಧಗಳನ್ನು ಸಲಹೆ ನೀಡುವುದಕ್ಕೆ ಅನುಮತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದರು.
Published on

ನವದೆಹಲಿ: ಕೊರೋನಾ ಪ್ರಾರಂಭವಾದಾಗಿನಿಂದಲೂ ಆಯುರ್ವೇದ vs ಅಲೋಪತಿ ಹಗ್ಗಜಗ್ಗಾಟ ನಡೆಯುತ್ತಲೇ ಇದ್ದು, ಉತ್ತರಾಖಂಡ್ ಸರ್ಕಾರ ಆಯುರ್ವೇದದ ವೈದ್ಯರು ಅಲೋಪತಿ ಔಷಧಗಳನ್ನು ತುರ್ತು ಪರಿಸ್ಥಿತಿಗಳಲ್ಲಿ ನೀಡುವುದಕ್ಕೆ ಅನುಮತಿ ನೀಡುವ ನಿರ್ಧಾರ ಪ್ರಕಟಿಸಿದಾಗಿನಿಂದಲೂ ಇದು ಮತ್ತಷ್ಟು ಹೆಚ್ಚಾಗಿದೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಉತ್ತರಾಖಂಡ್ ನ ಆಯುಷ್ ಸಚಿವ ಹರಕ್ ಸಿಂಗ್ ರಾವತ್ ಅವರು ಆಯುರ್ವೇದದ ವೈದ್ಯರು ರೋಗಿಗಳಿಗೆ ತುರ್ತು ಪರಿಸ್ಥಿತಿಗಳಲ್ಲಿ ಅಲೋಪತಿ ಔಷಧಗಳನ್ನು ಸಲಹೆ ನೀಡುವುದಕ್ಕೆ ಅನುಮತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದರು.

ಸರ್ಕಾರದ ಈ ನಿರ್ಧಾರದಿಂದ, ರಾಜ್ಯದಲ್ಲಿನ ಪರ್ವತ ಪ್ರದೇಶದಲ್ಲಿ ಬಹುತೇಕ ಇರುವ ಜನತೆಗೆ ಸಹಾಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

"ಉತ್ತರಾಖಂಡ್ ನಲ್ಲಿ 800 ಆಯುರ್ವೇದಿಕ್ ವೈದ್ಯರುಗಳಿದ್ದು, ಶೇ.90 ರಷ್ಟು ಪರ್ವತ ಪ್ರದೇಶಗಳಲ್ಲಿದ್ದಾರೆ. ಸರ್ಕಾರದ ಮಿಕ್ಸೋಪತಿಯ ಈ ನಿರ್ಧಾರ ಜಾರಿಗೊಳ್ಳಲು ಉತ್ತರ ಪ್ರದೇಶದ ಭಾರತೀಯ ಚಿಕಿತ್ಸಾ ಅಧಿನಿಯಮ್ ಗೆ ತಿದ್ದುಪಡಿ ತರುವ ಅಗತ್ಯವಿದ್ದು, ಅಪಘಾತ ಹೆಚ್ಚು ಸಂಭವಿಸುವ ಪರ್ವತಗಳಲ್ಲಿನ ಪ್ರದೇಶಗಳಲ್ಲಿರುವವರಿಗೆ ತುರ್ತು ಸಂದರ್ಭಗಳಲ್ಲಿ ಅತ್ಯಂತ ಸಹಕಾರಿಯಾಗಲಿದೆ" ಎಂದು ಸಚಿವರು ವಿವರಿಸಿದ್ದಾರೆ.

ಸರ್ಕಾರದ ಈ ನಿರ್ಧಾರಕ್ಕೆ ಐಎಂಎ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದು, ಉತ್ತರಾಖಂಡ್ ವಿಭಾಗದ ಐಎಂಎ ಸರ್ಕಾರದ ನಿರ್ಧಾರವನ್ನು "ಅಕ್ರಮ" ಎಂದು ಹೇಳಿದೆ. "ಸರ್ಕಾರದ ಈ ನಿರ್ಧಾರ ಅಕ್ರಮವಾಗಿದ್ದು ಇದು ಮಿಕ್ಸೋಪತಿ ವಿಭಾಗಕ್ಕೆ ಬರಲಿದೆ" ಎಂದು ಐಎಂಎ ಉತ್ತರಾಖಂಡ್ ನ ಕಾರ್ಯದರ್ಶಿ ಅಜಯ್ ಖನ್ನಾ ಹೇಳಿದ್ದಾರೆ.

"ಮಿಕ್ಸೋಪತಿ ತುರ್ತುಪರಿಸ್ಥಿತಿಗಳಲ್ಲಿ ರೋಗಿಗಳು ಹಾನಿಯನ್ನಷ್ಟೇ ಉಂಟುಮಾಡುತ್ತದೆ. ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಗೆ ಸ್ಪಷ್ಟತೆ ಇದೆ. ಆಯುರ್ವೇದದ ವೈದ್ಯರು ಅಲೋಪತಿ ವೈದ್ಯಪದ್ಧತಿಯನ್ನು ಅಭ್ಯಾಸ ಮಾಡುವುದಕ್ಕೆ ಅರ್ಹರಲ್ಲದ ಕಾರಣ ಆಯುರ್ವೇದಿಕ್ ವೈದ್ಯರು ಅಲೋಪತಿ ಔಷಧಗಳನ್ನು ನೀಡುವಂತಿಲ್ಲ ಎನ್ನುತ್ತಾರೆ" ಅಜಯ್ ಖನ್ನಾ ಅಲೋಪತಿಯ ಬಗ್ಗೆ ಏನೂ ಅರಿಯದೇ ಇದ್ದರೂ ಅಲೋಪತಿ ಔಷಧಗಳನ್ನು ನೀಡುವುದಕ್ಕೆ ಹೇಗೆ ಸಾಧ್ಯ ಎಂದು ಖನ್ನಾ ಪ್ರಶ್ನಿಸಿದ್ದಾರೆ.

ಆದರೆ ಭಾರತೀಯ ಚಿಕಿತ್ಸಾ ಪರಿಷತ್, ಉತ್ತರಾಖಂಡ್ ನ ಅಧ್ಯಕ್ಷ ಹಾಗೂ ಹಿರಿಯ ಫಿಸಿಶಿಯನ್ ಜೆಎನ್ ನೌತಿಯಾಲ್ ಈ ಬಗ್ಗೆ ಮಾತನಾಡಿದ್ದು, ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ, ಅಷ್ಟೇ ಅಲ್ಲದೇ ಆರೋಗ್ಯ ಸೇವೆಗಳಿಗೆ ವಂಚಿತರಾಗಿರುವ ರಾಜ್ಯದ ಜನತೆಯ ಶೇ.80 ರಷ್ಟು ಮಂದಿಗೆ ಈ ನಿರ್ಧಾರದಿಂದ ಸಹಾಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಐಎಂಎ ದ್ವಿಮುಖ ನೀತಿ ಅನುಸರಿಸುತ್ತಿದೆ. ಆಯುಷ್ ವೈದ್ಯರುಗಳು ಆಸ್ಪತ್ರೆಯ ಐಸಿಯು ಹಾಗೂ ತುರ್ತು ವಾರ್ಡ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವಿಷಯದಲ್ಲಿ ಐಎಂಎ ಗೆ ಯಾವುದೇ ಸಮಸ್ಯೆಗಳೂ ಇಲ್ಲ. ಆದರೆ ದೇಶದ ರಾಜ್ಯವೊಂದರ ಬಹುಪಾಲು ಜನಕ್ಕೆ ಸಹಾಯವಾಗುವಂತಹದ್ದಕ್ಕೆ ಐಎಂಎ ವಿರೋಧಿಸುತ್ತಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com