ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಹಲವು ತಿಂಗಳುಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸುಮಾರು 750 ರೈತರ ಮೃತಪಟ್ಟಿದ್ದಾರೆ. ಈ ರೈತರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಒಮ್ಮೆ ಸಂಸತ್ತಿನಲ್ಲಿ ಸಂತಾಪ ಸೂಚಿಸಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಅವರು ಶನಿವಾರ ಹೇಳಿದ್ದಾರೆ.
ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಟಿಕಾಯತ್ ಅವರು, ಈಗೀರುವ ವ್ಯವಸ್ಥೆಯೇ ಮುಂದುವರಿಯುತ್ತದೆ ಎಂಬ ಸರ್ಕಾರದ ಆಶ್ವಾಸನೆಯು ಕೇವಲ "ಕಾಗದಕ್ಕೆ ಮಾತ್ರ ಸೀಮಿತ". ಆದರೆ ಅದು ವಾಸ್ತವದಲ್ಲಿ ಜಾರಿಯಾಗಬೇಕು ಎಂದು ರೈತರು ಬಯಸುತ್ತಾರೆ ಎಂದರು.
'ಕ್ರೋಧದ ಬೀಜಗಳು: ಭಯ ಮತ್ತು ವಾಸ್ತವ: ಕೃಷಿ ಬಿಕ್ಕಟ್ಟನ್ನು ಪರಿಹರಿಸುವುದು ಹೇಗೆ' ಎಂಬ ಶೀರ್ಷಿಕೆಯ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಸಂಸದ ರಾಜೇಂದ್ರ ಅಗರ್ವಾಲ್, ಮೂರು ಕೇಂದ್ರ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ ಎಂದು ಟಿಕಾಯತ್ ಅವರಿಗೆ ತಿರುಗೇಟು ನೀಡಿದರು.
"ರೈತರು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಪಡೆಯಲು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರವು ಎಮ್ಎಸ್ಪಿ ಇದೆ ಮತ್ತು ಅದು ಅದು ಮುಂದುವರೆಯುತ್ತದೆ ಎಂದು ಹೇಳುತ್ತದೆ ಆದರೆ ರೈತರು ಅದನ್ನು ಕೇವಲ ಪೇಪರ್ಗಳಲ್ಲಿ ಮಾತ್ರ ಎಂದು ಟಿಕಾಯತ್ ಹೇಳಿದರು.
ಕಳೆದ 11 ತಿಂಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಮತ್ತು ಪ್ರಧಾನಮಂತ್ರಿಯವರು ಸಂಸತ್ತಿನಲ್ಲಿ ಒಮ್ಮೆ ಪ್ರತಿಭಟನೆಯ ಸಮಯದಲ್ಲಿ ಪ್ರಾಣ ಕಳೆದುಕೊಂಡ 750 ರೈತರ ಬಗ್ಗೆ ಮಾತನಾಡಬೇಕು ಎಂದು ಟಿಕಾಯತ್ ಒತ್ತಾಯಿಸಿದರು.
Advertisement