ಹರ್ದೋಯಿ: ಸುಮಾರು ಒಂದು ತಿಂಗಳ ಹಿಂದೆ ಅಪಹರಣಕ್ಕೊಳಗಾಗಿದ್ದ ಮಹಿಳೆಯನ್ನು ರಕ್ಷಿಸಲು ಹೋದ ಪೊಲೀಸರ ಮೇಲೆ ಜನರ ಗುಂಪೊಂದು ಸೋಮವಾರ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮಸ್ಥರು ಪೊಲೀಸರ ವಾಹನವನ್ನು ಹಾನಿಗೊಳಿಸಿ, ಚಾಲಕ ಮುಖೇಶ್ ಸಿಂಗ್ ಅವರನ್ನು ಥಳಿಸಿದರು ಮತ್ತು ಅವರು ಪೊಲೀಸರ ವಶದಲ್ಲಿದ್ದ ಮಹಿಳೆಯನ್ನು ಬಲವಂತವಾಗಿ ಕರೆದೊಯ್ಯಲು ಯತ್ನಿಸಿದರು ಎಂದು ಪೊಲೀಸರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ 12 ಜನರ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಕೊಲೆ ಯತ್ನ, ಗಲಭೆ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ. ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸ್ಟೇಷನ್ ಹೌಸ್ ಆಫೀಸರ್(ಎಸ್ಎಚ್ಒ) ರಾಜನಾಥ್ ಬಹದ್ದೂರ್ ಸಿಂಗ್ ಅವರು ತಿಳಿಸಿದ್ದಾರೆ.
ಸುಮಾರು ಒಂದು ತಿಂಗಳ ಹಿಂದೆ 25 ವರ್ಷದ ಮಹಿಳೆಯ ಅಪಹರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಹರಪಲ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಮಹಿಳೆ ಇರುವ ಸ್ಥಳದ ಬಗ್ಗೆ ಮಾಹಿತಿ ಪಡೆದ ನಂತರ ಪೋಲಿಸರ ತಂಡ ಕುರಿಯ ಕಲಾ ಗ್ರಾಮಕ್ಕೆ ಆಗಮಿಸಿತ್ತು ಮತ್ತು ಮೋಹಿತ್ ಎಂಬ ವ್ಯಕ್ತಿಯ ಮನೆಯಿಂದ ಮಹಿಳೆಯನ್ನು ರಕ್ಷಿಸಲಾಯಿತು ಎಂದು ಇನ್ಸ್ಪೆಕ್ಟರ್ ಕಿರಣ್ ಪಾಲ್ ಸಿಂಗ್ ಹೇಳಿದ್ದಾರೆ.
ಪೊಲೀಸರು ಮಹಿಳೆಯೊಂದಿಗೆ ಹೊರಡಲು ಮುಂದಾದಾಗ ಗ್ರಾಮಸ್ಥರು ಅವರ ಮೇಲೆ ದಾಳಿ ಮಾಡಿದರು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Advertisement