ನವದೆಹಲಿ: 2020ರಲ್ಲಿ ಭಾರತದ 116 ಜಿಲ್ಲೆಗಳಲ್ಲಿ ಶೂನ್ಯ ಮಲೇರಿಯಾ ಪ್ರಕರಣಗಳು ವರದಿಯಾಗಿವೆ. ಇನ್ನು ಸಾವಿನ ಸಂಖ್ಯೆ ಶೇಕಡಾ 83.6 ರಷ್ಟು ಕಡಿಮೆ ಮಾಡುವಲ್ಲಿ ದೇಶವು ಗಮನಾರ್ಹ ಯಶಸ್ಸನ್ನು ಸಾಧಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಹೇಳಿದರು.
ವಿಶ್ವ ಮಲೇರಿಯಾ ವರದಿಗಳ ಪ್ರಕಾರ 2018, 2019 ಮತ್ತು 2020ರ ಈ ನಿಟ್ಟಿನಲ್ಲಿ ದೇಶವು ಉತ್ತಮ ಸಾಧನೆ ಮಾಡಿದೆ ಎಂದರು.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಭಾರತದ ಯಶಸ್ಸಿಗೆ ರಾಜಕೀಯ ಬದ್ಧತೆಯನ್ನು ಪ್ರಶಂಸಿಸಿದೆ. ಸರಿಯಾದ ತಾಂತ್ರಿಕ ಕ್ರಮಗಳನ್ನು ಬಳಸಿಕೊಂಡು, ಅದರ ಜೊತೆಗೆ ದೇಶೀಯ ಸಂಪತ್ತು ಕ್ರೋಢಿಕರಣ ಮಾಡಿ ಮಲೇರಿಯಾ ವಿರುದ್ಧದ ಹೋರಾಟಕ್ಕೆ ಪರಿಣಾಕಾರಿ ಬಳಸಿಕೊಳ್ಳಲಾಗಿದೆ ಎಂದು ಹೇಳಿದೆ ಎಂದರು.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಲೇರಿಯಾ ನಿರ್ಮೂಲನೆ ಕುರಿತು 'ಶೂನ್ಯದೆಡೆಗೆ' ವೇದಿಕೆಯ ಅಧ್ಯಕ್ಷತೆ ವಹಿಸಿದ್ದ ವರ್ಧನ್, ಏಪ್ರಿಲ್ 25 ಅನ್ನು ಪ್ರತಿವರ್ಷ ವಿಶ್ವ ಮಲೇರಿಯಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷದ ನಮ್ಮ ಗುರಿ 'ಶೂನ್ಯದೆಡೆಗೆ ಮಲೇರಿಯಾ'ವನ್ನು ತರುವುದೇ ಆಗಿದೆ ಎಂದರು.
2030ರ ವೇಳೆಗೆ ಭಾರತವನ್ನು ಮಲೇರಿಯಾದಿಂದ ಮುಕ್ತಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.
Advertisement