'ದಯವಿಟ್ಟು ನನ್ನ ಮಗುವನ್ನು ಉಳಿಸಿ': ಆಸ್ಪತ್ರೆ ಆವರಣದಲ್ಲಿ ತಾಯಿಯ ಆಕ್ರಂದನದ ನಡುವೆಯೇ ಪ್ರಾಣ ಬಿಟ್ಟ ಕೋವಿಡ್ ಸೋಂಕಿತ ಮಗು
ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣದ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕು ಪೀಡಿತ ತನ್ನ ಮಗುವಿಗೆ ಚಿಕಿತ್ಸೆ ನೀಡುವಂತೆ ತಾಯಿ ವೈದ್ಯರನ್ನು ಗೋಗರೆಯುತ್ತಿದ್ದ ಬೆನ್ನಲ್ಲೇ ಮಡಿಲಲ್ಲಿದ್ದ ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಬುಧವಾರ ಸಂಜೆ ಆಂಧ್ರಪ್ರದೇಶದ ವಿಶಾಖಪಟ್ಟಣದ ಕಿಂಗ್ ಜಾರ್ಜ್ ಆಸ್ಪತ್ರೆ ಅವರಣದಲ್ಲಿ ಈ ಘಟನೆ ನಡೆದಿದ್ದು, ಒಂದೂವರೆ ವರ್ಷದ ಮಗು ಕೋವಿಡ್-19 ಸೋಂಕಿಗೆ ತುತ್ತಾಗಿ ಉಸಿರಾಟದ ಸಮಸ್ಯೆಯಿಂದಾಗಿ ಬಳಲಿ ಸಾವನ್ನಪ್ಪಿದೆ. ಕೋವಿಡ್-19 ಸೋಂಕಿಗೆ ತುತ್ತಾಗಿದ್ದ ಮಗು ಉಸಿರಾಡಲು ಕಷ್ಟಪಡುತ್ತಿತ್ತು. ಹೀಗಾಗಿ ಮಗುವಿಗೆ ಚಿಕಿತ್ಸೆ ನೀಡುವಂತೆ ಪೋಷಕರು ಸುಮಾರು ಒಂದು ಗಂಟೆಕಾಲ ಕಿಂಗ್ ಜಾರ್ಜ್ ಆಸ್ಪತ್ರೆಯ ವೈದ್ಯರನ್ನು ಬೇಡಿಕೊಂಡರು. ಅಂತಿಮವಾಗಿ ಮಗುವನ್ನು ಚಿಕಿತ್ಸೆಗಾಗಿ ಸೇರಿಸಿಕೊಳ್ಳಲಾಗಿತ್ತು. ಆದರೆ ಅಷ್ಟುಹೊತ್ತಿಗಾಗಲೇ ತೀರಾ ವಿಳಂಬವಾಗಿದ್ದ ಕಾರಣ ಮಗು ಉಸಿರಾಡಲು ಸಾಧ್ಯವಾಗದೇ ಮೃತಪಟ್ಟಿದೆ.
ಏನಿದು ಘಟನೆ?
ವಿಶಾಖಪಟ್ಟಣದ ಅತಿ ದೊಡ್ಡ ಆಸ್ಪತ್ರೆ ಎಂದೇ ಹೇಳಲಾಗುತ್ತಿರುವ ಕಿಂಗ್ ಜಾರ್ಜ್ ಆಸ್ಪತ್ರೆಯ ಹೊರಗೆ ಒಂದೂವರೆ ವರ್ಷದ ಹೆಣ್ಣುಮಗು ಸರಿತಾಳನ್ನು ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಗುವಿಗೆ ಚಿಕಿತ್ಸೆ ನೀಡುವಂತೆ ಸುಮಾರು 2 ಗಂಟೆಗಳ ಕಾಲ ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರಲ್ಲಿ ಮನವಿ ಮಾಡಿದ್ದಾರೆ. ಆಸ್ಪತ್ರೆ ಅವರಣದಲ್ಲೇ ಕುಳಿತು ಮಗುವಿನ ಪೋಷಕರು ರೋಧಿಸುತ್ತಲೇ ವೈದ್ಯರಿಗೆ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದಾರೆ. ಕೊನೆಗೆ ಪೋಷಕರ ಆಕ್ರಂದನಕ್ಕೆ ಸ್ಪಂಧಿಸಿದ ವೈದ್ಯರು ಮಗುವಿಗೆ ಚಿಕಿತ್ಸೆ ನೀಡಲು ಮುಂದಾದರಾದರೂ, ಅಷ್ಟು ಹೊತ್ತಿಗಾಗಲೇ ಮಗು ಸಾವನ್ನಪ್ಪಿತ್ತು. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.
ವೀಡಿಯೊದಲ್ಲಿ ಬಾಲಕಿಯ ತಂದೆ ವೀರಾ ಬಾಬು ಅವರು ಅ್ಯಂಬು ಬ್ಯಾಗ್ ಬಳಸಿ ಮಗುವಿಗೆ ಆಮ್ಲಜನಕ ಪಂಪ್ ಮಾಡುತ್ತಿರುವುದು, ಬಾಲಕಿಯ ತಾಯಿ ಅಸಹಾಯಕತೆಯಿಂದ ಕಣ್ಣೀರಿಡುತ್ತಿರುವುದು ಕಂಡುಬಂದಿದೆ.
ವೈದ್ಯರ ಬಳಿ ಗೋಗರೆದ ತಾಯಿ
ಇನ್ನು ಆಸ್ಪತ್ರೆ ಅವರಣದಲ್ಲಿ 'ದಯವಿಟ್ಟು ನನ್ನ ಮಗುವನ್ನು ಉಳಿಸಿ, ಯಾರಾದರೂ ದಯವಿಟ್ಟು ನನ್ನ ಮಗುವನ್ನು ಉಳಿಸಿ. ಅವರು ರಸ್ತೆಯಲ್ಲಿಯೇ ಬಿಟ್ಟು ಹೋದರು. ಇದಕ್ಕಾಗಿಯೇ ಅವರು ವೈದ್ಯರಾಗಿದ್ದೀರೆಯೇ? ಮಗುವನ್ನು ಉಳಿಸಿಕೊಳ್ಳಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದೆ. ಆದರೆ ಯಾರೂ ನೆರವಾಗಲಿಲ್ಲ. ಈಗ ರಸ್ತೆಯಲ್ಲಿಯೇ ಮಗುವನ್ನು ಬಿಟ್ಟುಹೋಗಿದ್ದಾರೆ. 104 ಸಂಖ್ಯೆಗೆ ಫೋನ್ ಕರೆ ಮಾಡಲು ಹೇಳಿದರು. ಅದಕ್ಕೆ ಕರೆ ಮಾಡಿದರೆ ಅಲ್ಲಿ ಯಾರೂ ಉತ್ತರಿಸುವವರು ಇಲ್ಲ ಎಂದು ಕಣ್ಣೀರು ಹಾಕಿದ್ದಾರೆ.