ಚೆನ್ನೈ: ಕೇರಳದಿಂದ ಬರುವವರಿಗೆ ಆರ್ ಟಿ- ಪಿಸಿಆರ್ ನೆಗೆಟಿವ್ ವರದಿಯನ್ನು ತಮಿಳುನಾಡು ಸರ್ಕಾರ ಭಾನುವಾರ ಕಡ್ಡಾಯ ಮಾಡಿದೆ. ಅಲ್ಲದೇ, ತಮಿಳುನಾಡಿಗೆ ಬರುವ ಪ್ರಯಾಣಿಕರು ಸಂಪೂರ್ಣ ಲಸಿಕೆ ಪ್ರಮಾಣ ಪತ್ರವನ್ನು ಹಾಜರುಪಡಿಸಬಹುದಾಗಿದೆ.
ಕೇರಳದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ಮೂರು ದಿನಗಳಲ್ಲಿ ತಮಿಳುನಾಡಿನಲ್ಲೂ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದನ್ನು ನೋಡಬಹುದಾಗಿದೆ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಹೇಳಿದರು.
ಆರೋಗ್ಯ ಕಾರ್ಯದರ್ಶಿ ಜೆ ರಾಧಾಕೃಷ್ಣನ್ ಜೊತೆಯಲ್ಲಿ ಭಾನುವಾರ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಬ್ರಮಣಿಯನ್, ಕೇರಳದಿಂದ ರೈಲು, ವಿಮಾನ ಅಥವಾ ರಸ್ತೆ ಮೂಲಕ ಬರುವವರು ಕಡ್ಡಾಯವಾಗಿ ಆರ್ ಟಿ- ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಪಡಿಸಬೇಕು.ಇದು ಆಗಸ್ಟ್ 5 ರಿಂದ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದರು.
ಲಸಿಕೆ ಪ್ರಮಾಣ ಪತ್ರ ಹಾಜರುಪಡಿಸುವವರಿಗೆ ರಾಜ್ಯಕ್ಕೆ ಬರಲು ಅನುಮತಿ ನೀಡಲಾಗಿದೆ. ಆದರೆ, ಎರಡನೇ ಡೋಸ್ ಲಸಿಕೆ ಪಡೆದು 14 ದಿನ ಪೂರ್ಣಗೊಳಿಸಿರಬೇಕು ಅಂತವರಿಗೆ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು.
ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸುಬ್ರಮಣಿಯನ್ ತಿಳಿಸಿದರು.
Advertisement