ನವದೆಹಲಿ: ಪಶ್ಚಿಮ ಬಂಗಾಳ ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಭೇಟಿ ಮಾಡಿದ ಬಳಿಕ ಮೆಹ್ತಾ ಅವರ ವಜಾಗೆ ಆಗ್ರಹಿಸಿ ಟಿಎಂಸಿ ಪ್ರಧಾನಿಗೆ ಪತ್ರ ಬರೆದಿದೆ.
ನಾರದ, ಶಾರದಾ ಚಿಟ್ ಫಂಡ್ ಹಗರಣಗಳಲ್ಲಿ ಆರೋಪಿಯಾಗಿರುವ ಸುವೇಂದು ಅಧಿಕಾರಿ ಆರೋಪಿಯಾಗಿದ್ದು ಪ್ರಕರಣದ ತನಿಖೆಯ ಫಲಿತಾಂಶದ ಮೇಲೆ ಪ್ರಭಾವ ಬೀರುವುದಕ್ಕಾಗಿ ಎಸ್ ಜಿಯನ್ನು ಭೇಟಿ ಮಾಡಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ.
ಸುವೇಂದು ಅಧಿಕಾರಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದು ಲಂಚ ಮತ್ತು ವಿವಿಧ ಅಪರಾಧಗಳ ಆರೋಪದಡಿ ಸಿಬಿಐ ಮತ್ತು ಇಡಿ ತನಿಖೆ ನಡೆಸುತ್ತಿದೆ ಎಂದು ಟಿಎಂಸಿ ಆರೋಪಿಸಿದೆ.
ಅಟಾರ್ನಿ ಜನರಲ್ ನಂತರ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಎರಡನೇ ಪ್ರಭಾವಿ ಕಾನೂನು ಅಧಿಕಾರಿಯಾಗಿದ್ದು, ಭಾರತ ಸರ್ಕಾರ ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಕಾನೂನು ಸಲಹೆ ನೀಡುತ್ತಾರೆ. ಈ ಪೈಕಿ ನಾರದಾ ಹಾಗೂ ಶಾರದಾ ಪ್ರಕರಣಗಳೂ ಇದ್ದು, ಪ್ರಕರಣದ ತನಿಖೆಯ ಫಲಿತಾಂಶದ ಮೇಲೆ ಪ್ರಭಾವ ಬೀರುವುದಕ್ಕಾಗಿ ಎಸ್ ಜಿಯನ್ನು ಸುವೇಂದು ಅಧಿಕಾರಿ ಭೇಟಿ ಮಾಡಿದ್ದಾರೆ. ಆದ್ದರಿಂದ ಎಸ್ ಜಿ ಅವರನ್ನು ವಜಾಗೊಳಿಸಬೇಕೆಂದು ಟಿಎಂಸಿ ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದೆ.
ಇದೇ ವೇಳೆ ತುಷಾರ್ ಮೆಹ್ತಾ ಸುವೇಂದು ಅಧಿಕಾರಿ ಅವರನ್ನು ಭೇಟಿ ಮಾಡಿರುವುದನ್ನು ಅಲ್ಲಗಳೆದಿದ್ದು, ಅಘೋಷಿತ (ಪೂರ್ವ ಮಾಹಿತಿ ಇಲ್ಲದೇ) ಅಧಿಕಾರಿಯೇ ತಮ್ಮ ನಿವಾಸಕ್ಕೆ ಬಂದಿದ್ದರು ಎಂದು ಹೇಳಿದ್ದಾರೆ.
"ಸುವೇಂದು ಅಧಿಕಾರಿ ಮಾಹಿತಿ ನೀಡದೇ ನನ್ನ ನಿವಾಸ/ಕಚೇರಿಗೆ ಆಗಮಿಸಿದ್ದರು. ನಾನು ಆ ವೇಳೆ ಬೇರೆ ಸಭೆಯಲ್ಲಿದ್ದ ಕಾರಣ ನನ್ನ ಕಚೇರಿಯ ಸಿಬ್ಬಂದಿಗಳು ಅವರನ್ನು ಕಾಯುವುದಕ್ಕಾಗಿ ಹೇಳಿದ್ದರು. ಆದ್ದರಿಂದ ಅವರೊಂದಿಗೆ ಸಭೆಯ ಪ್ರಶ್ನೆ ಉದ್ಭವಿಸುವುದೇ ಇಲ್ಲ" ಎಂದು ಹೇಳಿದ್ದಾರೆ. ಗುರುವಾರದಂದು ಅಮಿತ್ ಶಾ ಸೇರಿದಂತೆ ಹಲವು ಬಿಜೆಪಿ ವರಿಷ್ಠರನ್ನು ಸುವೇಂದು ಅಧಿಕಾರಿ ಭೇಟಿ ಮಾಡಿದ್ದರು.
Advertisement