ಛೊಟೌದ್ ಪುರ: ಪ್ರೀತಿ ಮಾಡಿದ್ದ ಬುಡಕಟ್ಟು ಜೋಡಿಯ ಮೇಲೆ ಗ್ರಾಮಸ್ಥರು ದೊಣ್ಣೆಯಿಂದ ಹಲ್ಲೆ ನಡೆಸಿರುವ ಘಟನೆ ಗುಜರಾತ್ ನ ಛೊಟೌದ್ ಪುರ ಜಿಲ್ಲೆಯಲ್ಲಿ ನಡೆದಿದೆ.
ತಮ್ಮ ಪ್ರೀತಿಗೆ ವಿರೋಧ ವ್ಯಕ್ತವಾಗಿದ್ದರಿಂದ ಯುವ ಜೋಡಿ ಗ್ರಾಮವನ್ನು ಬಿಟ್ಟು ಓಡಿ ಹೋಗಿತ್ತು. ಆದರೆ ಗ್ರಾಮಸ್ಥರು ಅವರನ್ನು ಅಪಹರಿಸಿ ತಂದು ಮರಕ್ಕೆ ಕಟ್ಟಿ ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ಈ ಘಟನೆ ಸಂಬಂಧ 9 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಂಗ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು 9 ಮಂದಿಯನ್ನು ಬಂಧಿಸಿದ್ದು, ಈ ದಾಳಿ ಚಿಲಿಯವಂತ್ ಗ್ರಾಮದಲ್ಲಿ ನಡೆದಿದೆ ಎಂದು ಡಿವೈಎಸ್ ಪಿ ಎ ವಿ ಕಟ್ಕಾಡ್ ಹೇಳಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದ್ದು, ಗ್ರಾಮಸ್ಥರ ಸಮ್ಮುಖದಲ್ಲಿ ಯುವ ಜೋಡಿಯನ್ನು ಮರಕ್ಕೆ ಕಟ್ಟಿ ಥಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ವರದಿಯಾಗುತ್ತಿದ್ದಂತೆಯೇ ಗ್ರಾಮಕ್ಕೆ ತೆರಳಿದ ಪೊಲೀಸರು ಸಂತ್ರಸ್ತೆ ಯುವತಿಯ ದೂರನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಜು.18 ರಂದು ಈ ಜೋಡಿ ವಿವಾಹವಾಗುವುದಕ್ಕಾಗಿ ಗ್ರಾಮದಿಂದ ಕಾಲ್ಕಿತ್ತಿತ್ತು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಇಬ್ಬರನ್ನೂ ಪತ್ತೆ ಮಾಡಿ ವಾಪಸ್ ಕರೆತಂದಿದ್ದರು. ಸ್ಥಳೀಯ ಸಂಪ್ರದಾಯದ ಪ್ರಕಾರ ಒಂದೇ ಗ್ರಾಮದ ಗಂಡು-ಹೆಣ್ಣು ವಿವಾಹವಾಗುವುದು ನಿಷಿದ್ಧವಾಗಿದೆ. ಇಂಥಹದ್ದೇ ಘಟನೆ ಢಾಡ ಗ್ರಾಮದಲ್ಲಿ ಒಂದು ತಿಂಗಳ ಹಿಂದೆ ನಡೆದಿತ್ತು.
Advertisement