ನವದೆಹಲಿ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಕೆಲ ತಾಲಿಬಾನ್ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ ಎನ್ನಲಾಗುತ್ತಿರುವ ವರದಿಗಳು ಸಂಪೂರ್ಣ ಸುಳ್ಳು, ಆಧಾರ ರಹಿತ ಮತ್ತು ಹಾನಿಕಾರ ಎಂದು ಮೂಲಗಳು ಮಂಗಳವಾರ ಹೇಳಿವೆ.
ಜೈಶಂಕರ್ ಕೆಲ ತಾಲಿಬಾನ್ ಮುಖಂಡರನ್ನು ಭೇಟಿಯಾಗಿದ್ದಾರೆ ಎನ್ನಲಾದ ಸಾಮಾಜಿಕ ಜಾಲತಾಣಗಳಲ್ಲಿನ ಕೆಲ ವರದಿಗಳ ಬೆನ್ನಲ್ಲೇ ಮೂಲಗಳಿಂದ ಈ ರೀತಿಯ ಪ್ರತಿಕ್ರಿಯೆ ಬಂದಿದೆ.
ಮುಂದೆ ಭಾರತದೊಂದಿಗಿನ ಸಂಬಂಧಗಳು ಪಾಕಿಸ್ತಾನದ ಅಭಿಪ್ರಾಯಗಳಂತೆ ಇರುವುದಿಲ್ಲ ಎಂದು ತಾಲಿಬಾನ್ ಮುಖಂಡರು ಸಚಿವರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿತ್ತು. ಆದರೆ, ಇಂತಹ ವರದಿಗಳು ಸಂಪೂರ್ಣವಾಗಿ ಸುಳ್ಳು, ಆಧಾರರಹಿತ ಎಂದು ಮೂಲವೊಂದು ಹೇಳಿದೆ.
ಸೆಪ್ಟೆಂಬರ್ 11 ರೊಳಗೆ ಅಪ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂಪಡೆಯಲು ಅಮೆರಿಕ ಎದುರು ನೋಡುತ್ತಿದ್ದು, ಸುಮಾರು ಎರಡು ದಶಕಗಳ ತನ್ನ ಮಿಲಿಟರಿ ನಿಯೋಜನೆಯನ್ನು ಅಂತ್ಯಗೊಳಿಸುತ್ತಿರುವುದರಿಂದ ಈ ವರದಿಗಳು ಬಂದಿವೆ.
ಅಪ್ಘಾನ್ ಶಾಂತಿ ಪ್ರಕ್ರಿಯೆಗೆ ಸಂಬಂಧಿಸಿದ ತ್ವರಿತಗತಿಯ ಬೆಳವಣಿಗೆಗಳ ಮಧ್ಯೆ ಹಿರಿಯ ಕತಾರಿ ರಾಜತಾಂತ್ರಿಕರೊಬ್ಬರು ಇತ್ತೀಚೆಗೆ ವಾಷಿಂಗ್ಟನ್ ಡಿಸಿಯಲ್ಲಿ ಅರಬ್ ಸೆಂಟರ್ ಆಯೋಜಿಸಿದ್ದ ವೆಬ್ನಾರ್ನಲ್ಲಿ ಮಾತನಾಡುತ್ತಾ, ಭಾರತದ ಕಡೆಯವರು ತಾಲಿಬಾನ್ನೊಂದಿಗೆ ತೊಡಗಿಸಿಕೊಳ್ಳುವುದರಿಂದ ಈ ಗುಂಪು ಮುಂದೆ ಅಪ್ಘಾನಿಸ್ತಾನದ ಎದುರಾಳಿಯಾಗಲಿದೆ ಎಂದು ನಂಬಿರುವುದಾಗಿ ಹೇಳಿದ್ದರು.
Advertisement
Advertisement