ಚೆನ್ನೈ: ನಗರದ ಜನತೆ ಗುರುವಾರ ಬೆಳ್ಳಂಬೆಳಗ್ಗೆ ಧಾರಾಕಾರ ಮಳೆಯನ್ನು ಕಾಣುವಂತಾಗಿದೆ. ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕಳೆದ ರಾತ್ರಿಯಿಂದ ಸತತ ಮಳೆಯಾಗುತ್ತಿದೆ.
ಚೆನ್ನೈ ಕರಾವಳಿಯಿಂದ ಸುಮಾರು 170 ಕಿಮೀ ದೂರದಲ್ಲಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಕೇಂದ್ರೀಕೃತವಾಗಿರುವ ಈ ವಾಯುಭಾರ ಕುಸಿತ ಕಳೆದ 6 ಗಂಟೆಗಳಲ್ಲಿ ಗಂಟೆಗೆ 21 ಕಿಮೀ ವೇಗದಲ್ಲಿ ಚಲಿಸುತ್ತಿದೆ. ಇಂದು ಸಂಜೆಯ ವೇಳೆಗೆ ಇದು ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ. ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಯನ್ನು ಚೆನ್ನೈ ಸುತ್ತಮುತ್ತ ದಾಟುವ ಸಾಧ್ಯತೆಯಿದೆ.
ಚೆನ್ನೈ ಪ್ರದೇಶದಲ್ಲಿ ರಾತ್ರಿ ಉತ್ತಮ ಮಳೆಯಾಗಿದ್ದು, ಎನ್ನೋರ್ ಬಂದರಿನಲ್ಲಿ 175 ಮಿಮೀ, ಡಿಜಿಪಿ ಕಚೇರಿ 157 ಮಿಮೀ, ನುಂಗಂಬಾಕ್ಕಂ 140.5 ಮಿಮೀ, ತಾರಾಮಣಿ 124 ಮಿಮೀ, ಸತ್ಯಬಾಮ ವಿಶ್ವವಿದ್ಯಾಲಯದಲ್ಲಿ 113.5 ಮಿಮೀ ಮಳೆಯಾಗಿದೆ.
ಪ್ರಾದೇಶಿಕ ಹವಾಮಾನ ಕೇಂದ್ರವು ಚೆನ್ನೈ, ಕಾಂಚೀಪುರಂ, ತಿರುವಳ್ಳೂರು ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆಗಳನ್ನು ಘೋಷಿಸಿದೆ. ಮೇಲ್ಮೈ ಮಾರುತಗಳು 45 ಎಂಪಿಹೆಚ್ ವೇಗದಲ್ಲಿ ಬೀಸುತ್ತಿದೆ. ಕಳೆದ ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಈಗಾಗಲೇ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ನಂತರದ ದಿನಗಳಲ್ಲಿ ಸುರಿದ ಮತ್ತಷ್ಟು ಮಳೆಯಿಂದಾಗಿ ನಿವಾಸಿಗಳ ಸಂಕಷ್ಟ ಮತ್ತಷ್ಟು ಹೆಚ್ಚಿದೆ. ನಗರ ಪಾಲಿಕೆ ಸಿಬ್ಬಂದಿ ಜಲಾವೃತ ಪ್ರದೇಶಗಳಿಂದ ಪಂಪ್ನಿಂದ ನೀರನ್ನು ಹೊರಹಾಕಲು ಪ್ರಯತ್ನಿಸುತ್ತಿದ್ದಂತೆ, ನಿವಾಸಿಗಳು ಎಸ್ಒಎಸ್ ಸಂದೇಶಗಳನ್ನು ಕಳುಹಿಸುತ್ತಿದ್ದರು.
ಚೆನ್ನೈನಲ್ಲಿ ಭಾರೀ ಮಳೆಯಿಂದಾಗಿ, ನಗರದಾದ್ಯಂತ ರಸ್ತೆ ಹಾಳಾಗಿದೆ. ಜಲಾವೃತದಿಂದಾಗಿ ಹಲವಾರು ಸುರಂಗಮಾರ್ಗಗಳು ಮತ್ತು ರಸ್ತೆಗಳನ್ನು ಮುಚ್ಚಲಾಗಿದೆ. ರಸ್ತೆ ಹಾಳಾದ ಕಾರಣ ಬಸ್ ಗಳ ಸಂಚಾರ ಮಾರ್ಗಗಳನ್ನು ಬದಲಿಸಲಾಗಿದೆ.
ರಸ್ತೆಗಳು ಹಾನಿ: ತಿರುಮಲೈ ಪಿಳ್ಳೈ ರಸ್ತೆಯಲ್ಲಿರುವ ಕಾಮರಾಜರ್ ಇಲ್ಲಂ ಮುಂಭಾಗದ ರಸ್ತೆ ಗುಂಡಿ ಬಿದ್ದಿದೆ. ವಾಣಿ ಮಹಲ್ ಜಂಕ್ಷನ್ನಿಂದ ವಳ್ಳುವರ್ಕೊಟ್ಟಂ ಜಂಕ್ಷನ್ಗೆ ವಾಹನಗಳು ಹೋಗಲು ಅವಕಾಶವಿಲ್ಲ. ವಾಣಿ ಮಹಲ್, ಬೆಂಜ್ ಪಾರ್ಕ್ ಜಂಕ್ಷನ್ನಲ್ಲಿ ವಾಹನ ಸಂಚಾರವನ್ನು ಬದಲಾಯಿಸಲಾಗುತ್ತಿದೆ. ವಳ್ಳುವರ್ಕೊಟ್ಟಂನಿಂದ ವಾಣಿ ಮಹಲ್ ಕಡೆಗೆ ಹೋಗುವ ವಾಹನಗಳು ತಿರುಮಲೈ ಪಿಳ್ಳೈ ರಸ್ತೆಯ ಮೂಲಕ ಹೋಗಲು ಅನುಮತಿ ನೀಡಲಾಗಿದೆ.
ಮುಚ್ಚಿದ ಸುರಂಗಮಾರ್ಗಗಳು:
ವ್ಯಾಸರಪಾಡಿ ಸುರಂಗಮಾರ್ಗ
ಗಣೇಶಪುರಂ ಸುರಂಗಮಾರ್ಗ
ಅಜಾಕ್ಸ್ ಸಬ್ವೇ
ಗೆಂಗು ರೆಡ್ಡಿ ಸಬ್ವೇ
ಮ್ಯಾಡ್ಲಿ ಸಬ್ವೇ
ದುರೈಸ್ವಾಮಿ ಸುರಂಗಮಾರ್ಗ
ಪಲವಂತಂಗಲ್ ಸುರಂಗಮಾರ್ಗ
ತಾಂಬರಂ ಸುರಂಗಮಾರ್ಗ
ಅರಂಗನಾಥನ್ ಸಬ್ವೇ
ವಿಲ್ಲಿವಕ್ಕಂ ಸುರಂಗಮಾರ್ಗ
ಕಖಾನ್ ಸೇತುವೆ ಸುರಂಗಮಾರ್ಗ (2 ವೀಲರ್ ಮತ್ತು ಆಟೋ)
ಮಳೆಯಿಂದಾಗಿ ಸಂಚಾರ ನಿರ್ಬಂಧಿಸಿರುವ ಸುರಂಗಮಾರ್ಗಗಳಲ್ಲಿ ಸಂಚಾರದಿಂದ ದೂರವಿರಲು ಚೆನ್ನೈ ಮಹಾನಗರ ಪಾಲಿಕೆ ಸಾರ್ವಜನಿಕರಿಗೆ ವಿನಂತಿಸಿದೆ.
ಮಳೆಯಿಂದಾಗಿ ಮುಚ್ಚಿದ ರಸ್ತೆಗಳು:
ಕೆ.ಕೆ ನಗರ - ರಾಜಮನ್ನಾರ್ ಸಲೈ
ಮೈಲಾಪುರ - ಶಿವಸ್ವಾಮಿ ಸಲೈ
ಇವಿಆರ್ ಸಲೈ - ಗಾಂಧಿ ಇರ್ವಿನ್ ಟು ನಾಯರ್ ಪಾಯಿಂಟ್
ಸೇಂಬಿಯಂ - ಜವಾಹರ್ ನಗರ
ಕೆ- 5 ಪೆರವಲ್ಲೂರ್- 70 ಅಡಿ ರಸ್ತೆ
ಪುಲಿಯಾಂತೋಪ್ - ಡಾ ಅಂಬೇಡ್ಕರ್ ರಸ್ತೆ, ಪುಲಿಯಾಂತೋಪ್ ಹೈ ರೋಡ್, ಪೆರಂಬೂರ್ ಬ್ಯಾರಕ್ಸ್ ರಸ್ತೆ, ಟವರ್ ಕ್ಲಾಕ್.
ವ್ಯಾಸರಪಾಡಿ-ಮುಲ್ಲೈನಗರ ಸೇತುವೆ
ರೈಲು ಸೇವೆಗಳು: ರೈಲು ಹಳಿಗಳು ಜಲಾವೃತಗೊಂಡಿರುವುದರಿಂದ ರೈಲು ಸಂಚಾರಕ್ಕೂ ತೊಂದರೆಯಾಗಿದೆ. ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಡಿಆರ್ಎಂ) ಇಂದು ಬೆಳಗ್ಗೆ ಟ್ವೀಟ್ ಮಾಡಿ, ಅವಡಿ ಮತ್ತು ಅಂಬತ್ತೂರ್ನಲ್ಲಿ ಹಳಿಗಳು ಜಲಾವೃತಗೊಂಡಿರುವುದರಿಂದ ಚೆನ್ನೈನಿಂದ ತಿರುವಳ್ಳೂರ್ಗೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ತಿರುವೊಟ್ಟಿಯೂರು ಮತ್ತು ಕೊರುಕ್ಕುಪೇಟೆ ನಡುವೆ ಭಾರೀ ಮಳೆಯಿಂದಾಗಿ ಉತ್ತರ ಭಾಗದಲ್ಲಿ ಗುಮ್ಮಿಡಿಪೂಂಡಿ ಕಡೆಗೆ ರೈಲು ಸಂಚಾರ ವಿಳಂಬವಾಗಿದೆ.
ತಾಂಬರಂ ಮತ್ತು ಚೆಂಗಲ್ಪಟ್ಟು ಕಡೆಗೆ ಹೋಗುವ ಉಪನಗರ ರೈಲುಗಳಿಗೆ ಸಂಬಂಧಿಸಿದಂತೆ, ಭಾನುವಾರದ ವೇಳಾಪಟ್ಟಿಯಂತೆ ರೈಲುಗಳು ಸಂಚರಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement