ತಿರುಪತಿ: ಭಾರಿ ಮಳೆಯಿಂದ ತತ್ತರಿಸಿರುವ ತಿರುಪತಿ ತಿರುಮಲದಲ್ಲಿ ಸಿಲುಕಿರುವ ಭಕ್ತರಿಗಾಗಿ ಟಿಟಿಡಿಯು ಡೌನ್ ಘಾಟ್ ರಸ್ತೆಯಲ್ಲಿ ಸೇವೆಗಳನ್ನು ಪುನರ್ ಸ್ಥಾಪಿಸಿದೆ.
ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ ಭಾರಿ ಮಳೆಯು ಗುರುವಾರ ದೇವಾಲಯದ ನಗರವಾದ ತಿರುಪತಿಯನ್ನು ಅಪ್ಪಳಿಸಿದ್ದು, ಕೆಲವು ಸ್ಥಳಗಳಲ್ಲಿ ಭೂಕುಸಿತ ಘಟನೆಗಳ ನಂತರ ತಿರುಮಲಕ್ಕೆ ಹೋಗುವ ಘಾಟ್ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಟಿಟಿಡಿ ಅಧಿಕಾರಿಗಳು ಘಾಟ್ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳನ್ನು ಸಂಪೂರ್ಣ ಬಂದ್ ಮಾಡಿದ್ದರು.
ಇದನ್ನು ಓದಿ: ನಿರಂತರ ಮಳೆ, ತಿರುಮಲ ಬಾಲಾಜಿ ದೇವಸ್ಥಾನದ ರಸ್ತೆ ಬಂದ್
ಗುರುವಾರ ರಾತ್ರಿಯಿಡೀ ತೀವ್ರ ಪ್ರಯತ್ನಗಳ ನಂತರ, ಟಿಟಿಡಿ ಡೌನ್ ಘಾಟ್ ನ ಮೊದಲ ಘಾಟ್ ರಸ್ತೆಯಲ್ಲಿ ಬಿದ್ದ ಎಲ್ಲಾ ಬಂಡೆಗಳನ್ನು ತೆರವುಗೊಳಿಸಲಾಗಿದೆ.
ಈಗ ರಸ್ತೆ ಸೇವೆ ಪುನರ್ ಸ್ಥಾಪಿಸಿದ ಟಿಟಿಡಿ, ಸಂಚಾರಕ್ಕೆ ಅಡ್ಡಿಯಾಗುವ ಕಾರಣ, ಭಕ್ತರು ತಮ್ಮ ವಾಹನಗಳಿಂದ ಕೆಳಗೆ ಇಳಿದು ವೀಡಿಯೊ ಮತ್ತು ಫೋಟೋಗಳನ್ನು ತೆಗೆದುಕೊಳ್ಳದಂತೆ ವಿನಂತಿಸಿದೆ.
ಬುಧವಾರ ರಾತ್ರಿ ಆರಂಭವಾದ ಮಳೆಯು ಗುರುವಾರದಾದ್ಯಂತ ನಗರವನ್ನು ಜರ್ಜರಿತಗೊಳಿಸಿತು, ಇದರ ಪರಿಣಾಮವಾಗಿ ಸಾಮಾನ್ಯ ಜೀವನವು ಸ್ಥಗಿತಗೊಂಡಿತು, ಹಲವಾರು ತಗ್ಗು ಪ್ರದೇಶಗಳನ್ನು ಮುಳುಗಿಸಿತು ಮತ್ತು ಇಲ್ಲಿಗೆ ಸಮೀಪದ ರೇಣಿಗುಂಟಾ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆಗಳು ಸೇರಿದಂತೆ ಸಾರಿಗೆಯ ಮೇಲೆ ಪರಿಣಾಮ ಬೀರಿದೆ.
ಭಾರೀ ವರ್ಷಧಾರೆಯಿಂದಾಗಿ ಸಿಲುಕಿರುವ ಯಾತ್ರಾರ್ಥಿಗಳಿಗೆ ಅನ್ನಪ್ರಸಾದ ಮತ್ತು ವಸತಿ ಸೌಕರ್ಯಗಳನ್ನು ಒದಗಿಸಲಾಗುವುದು, ಭಯಪಡುವ ಅಗತ್ಯವಿಲ್ಲ ಎಂದು ಟಿಟಿಡಿ ಭರವಸೆ ನೀಡಿದೆ.
Advertisement