ಅಸ್ಸಾಂ ದೋಣಿ ದುರಂತ: 84 ಮಂದಿ ಪ್ರಾಣಾಪಾಯದಿಂದ ಪಾರು , ಇಬ್ಬರು ನಾಪತ್ತೆ

ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ್ದ ದೋಣಿಯಲ್ಲಿನ 84 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ. 
ಎನ್'ಡಿಆರ್'ಎಫ್ ಪಡೆ
ಎನ್'ಡಿಆರ್'ಎಫ್ ಪಡೆ

ಗುವಾಹಟಿ: ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ್ದ ದೋಣಿಯಲ್ಲಿನ 84 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ. 

ಬುಧವಾರ ನಿಮತಿ ಘಾಟ್‌ನಿಂದ ಮಜುಲಿ ಸಾಂಕ್‌ಗೆ ತೆರಳುತ್ತಿದ್ದ ಈ ದೋಣಿಯು ಸರ್ಕಾರಿ ಸ್ವಾಮ್ಯದ ದೋಣಿಗೆ ಡಿಕ್ಕಿಯಾಗಿತ್ತು. ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ತಂಡಗಳು ಬುಧವಾರ ರಾತ್ರಿಯೂ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದವು.

ದೋಣಿಯಲ್ಲಿ ಒಟ್ಟು 87 ಮಂದಿ ಇದ್ದು, ಇದೀಗ ಪತ್ತೆಯಾಗಿರುವ 84 ಮಂದಿಯಲ್ಲಿ ಹೆಚ್ಚಿನವರು ಜೊರ್ಹಾತ್‌ ಮತ್ತು ಮಜುಲಿ ಜಿಲ್ಲೆಗೆ ಸೇರಿದ್ದಾರೆ ಎಂದು ಜೋರ್ಹಾತ್‌ ಜಿಲ್ಲಾಧಿಕಾರಿ ಅಶೋಕ್‌ ಬರ್ಮನ್‌ ತಿಳಿಸಿದ್ದಾರೆ.

ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ನಾಪತ್ತೆಯಾಗಿರುವ ಇಬ್ಬರು ಜೊರ್ಹತ್‌ ಮತ್ತು ಲಖಿಮಪುರ ಜಿಲ್ಲೆಗೆ ಸೇರಿದ್ದಾರೆ. ಸೇನೆಯ ನೆರವಿನೊಂದಿಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ. ವಾಯು ಪಡೆಯ ನೆರವನ್ನು ಸಹ ಕೋರಲಾಗಿದೆ ಎಂದು ಜೋರ್ಹಾತ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಂಕುರ್‌ ಜೈನ್‌ ಹೇಳಿದ್ದಾರೆ.

ಖಾಸಗಿ ದೋಣಿಯಲ್ಲಿದ್ದ ಪ್ರಯಾಣಿಕರ ಸಂಖ್ಯೆ ಬಗ್ಗೆ ಗೊಂದಲ ಉಂಟಾಗಿದೆ. ಪ್ರಯಾಣಿಕರಿಗೆ ಟಿಕೆಟ್‌ ನೀಡುವ ವ್ಯವಸ್ಥೆ ಖಾಸಗಿ ದೋಣಿಯಲ್ಲಿ ಇಲ್ಲದ ಕಾರಣ ಖಚಿತ ಸಂಖ್ಯೆ ಗೊತ್ತಾಗಿಲ್ಲ. ದೋಣಿಯಲ್ಲಿ 80ರಿಂದ 150 ಪ್ರಯಾಣಿಕರಿದ್ದರು ಎಂದು ಅಂದಾಜಿಸಲಾಗಿದೆ.

‘ಘಟನೆ ಕುರಿತು ತನಿಖೆ ನಡೆಸಲು ಸಾರಿಗೆ ಇಲಾಖೆ ಕಾರ್ಯದರ್ಶಿ ಜಾದವ್‌ ಸೈಕಿಯಾ ಅವರಿಗೆ ಸೂಚಿಸಲಾಗಿದೆ. ಈಗಾಗಲೇ ಜಲ ಸಾರಿಗೆ ಇಲಾಖೆಯ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಸಿಬ್ಬಂದಿಯ ಲೋಪದಿಂದ ಈ ಘಟನೆ ನಡೆದಿರುವ ಸಾಧ್ಯತೆಗಳು ಹೆಚ್ಚಾಗಿವೆ’ ಎಂದು ಸಾರಿಗೆ ಸಚಿವ ಚಂದ್ರ ಮೋಹನ್‌ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com